15 ದಿನಗಳಲ್ಲಿ ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸಿ
ಕೇಂದ್ರ, ರಾಜ್ಯ ಸರಕಾರಕ್ಕೆ ಸುಪ್ರೀಂ ನಿರ್ದೇಶನ

ಹೊಸದಿಲ್ಲಿ, ಜೂ.9: ಇಂದಿನಿಂದ 15 ದಿನಗಳೊಳಗೆ ವಲಸೆ ಕಾರ್ಮಿಕರು ಅವರ ತವರು ರಾಜ್ಯಗಳಿಗೆ ವಾಪಸಾಗಲು ವ್ಯವಸ್ಥೆ ಮಾಡಬೇಕೆಂದು ಸುಪ್ರೀಂಕೋರ್ಟ್ ಮಂಗಳವಾರ ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ನಿರ್ದೇಶನ ನೀಡಿದೆ.
ಬೇಡಿಕೆಯನ್ನು ಈಡೇರಿಸಲು ರೈಲ್ವೇಸ್ 24 ಗಂಟೆಯೊಳಗೆ ಶ್ರಮಿಕ್ ರೈಲುಗಳನ್ನು ಒದಗಿಸಬೇಕು. ಕಾರ್ಮಿಕರ ಕೈಗೆ ಕೆಲಸ ನೀಡಲು ರಾಜ್ಯ ಸರಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳೂ ಯೋಜನೆಯೊಂದನ್ನು ರೂಪಿಸಬೇಕು. ಕಾರ್ಮಿಕರ ಕೌಶಲ್ಯವನ್ನು ಮ್ಯಾಪ್ ಮಾಡಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿದೆ.
ಲಾಕ್ಡೌನ್ ನಿಯಮ ಉಲ್ಲಂಘಿಸಿರುವುದಕ್ಕೆ ವಲಸೆ ಕಾರ್ಮಿಕರ ವಿರುದ್ಧ ವಿಪತ್ತು ನಿರ್ವಹಣ ಕಾಯ್ದೆ-2005ರ ಅಡಿ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕು.ಯೋಜನೆಗಳು, ಉದ್ಯೋಗ ಸೃಷ್ಟಿ ಸಹಿತ ಇತರ ವಿಚಾರಗಳ ಕುರಿತು ಪ್ರಮಾಣಪತ್ರವನ್ನು ಎಲ್ಲ ರಾಜ್ಯಗಳು ಸಲ್ಲಿಸಬೇಕು ಎಂದಿರುವ ಸುಪ್ರೀಂಕೋರ್ಟ್ ಜುಲೈ 8ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದೆ.
Next Story





