ಗುಹೆಯಲ್ಲಿ ವಾಸಿಸುತ್ತಿದ್ದ ವ್ಯಕ್ತಿಗೆ ವಾಸ್ತವ್ಯ ಕಲ್ಪಿಸಿದ್ದ ಜಿಲ್ಲಾಡಳಿತ: ಈಗ 'ಕಾಡಿಗೆ ಮರಳುತ್ತೇನೆ' ಎಂದು ಪಟ್ಟು
ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ತಲೆನೋವಾದ 'ಅನಂತ'

ಚಿಕ್ಕಮಗಳೂರು, ಜೂ.9: ಕಳೆದ ಅನೇಕ ವರ್ಷಗಳಿಂದ ಮೂಡಿಗೆರೆ ತಾಲೂಕಿನ ಬಲಿಗೆ ಗುಡ್ಡದ ಗುಹೆಯಲ್ಲಿ ತನ್ನ ಕುಟುಂಬದೊಂದಿಗೆ ವಾಸವಾಗಿದ್ದ ವ್ಯಕ್ತಿಯೊಬ್ಬರು ಮತ್ತೆ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದ್ದಾರೆ. ಗುಹೆಯಲ್ಲಿದ್ದ ವ್ಯಕ್ತಿಯನ್ನು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮನವೊಲಿಸಿ ಮೆಣಸಿನ ಹಾಡ್ಯದಲ್ಲಿರುವ ಗಿರಿಜನ ಆಶ್ರಮ ಶಾಲೆಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಿದ್ದರು. ಇದೀಗ ವ್ಯಕ್ತಿ ಮತ್ತೆ ಕಾಡಿನ ದಾರಿ ಹಿಡಿದಿದ್ದು, ಮತ್ತದೇ ಗುಹೆಗೆ ಹಿಂದಿರುಗಿದ್ದಾರೆಂದು ತಿಳಿದುಬಂದಿದೆ.
ಈ ಹಿಂದೆ ಉಪವಿಭಾಗಾಧಿಕಾರಿ ಡಾ.ನಾಗರಾಜ್ ನೇತೃತ್ವದಲ್ಲಿ ಅಧಿಕಾರಿಗಳು ಕಲ್ಲಿನ ಗುಹೆಯಲ್ಲಿ ವಾಸವಾಗಿದ್ದ ಅನಂತ ಎಂಬವರ ಮನವೊಲಿಸಿ ಅವರ ಹೆಂಡತಿ ಅನ್ನಪೂರ್ಣ ಹಾಗೂ ಮಗಳನ್ನು ಕರೆತಂದು ಮೆಣಸಿನ ಹಾಡ್ಯ ಗಿರಿಜನ ವಸತಿ ಶಾಲೆಯಲ್ಲಿ ಆಶ್ರಯ ಕಲ್ಪಿಸಿದ್ದರು. ಕಾಡು ಮನುಷ್ಯನಂತೆ ಬುದುಕುತ್ತಿದ್ದ ಅನಂತರನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತಂದ ಜಿಲ್ಲಾಡಳಿತ ಕ್ರಮಕ್ಕೆ ಅಪಾರ ಮೆಚ್ಚಿಗೆ ವ್ಯಕ್ತವಾಗಿತ್ತು. ಆದರೆ, ಮತ್ತೆ ಅನಂತ ತನ್ನ ವರಸೆ ಬದಲಾಯಿಸಿದ್ದು, ನಾನು ಈ ನಾಲ್ಕು ಗೋಡೆಗಳ ಮಧ್ಯೆ ಇರುವುದಿಲ್ಲ, ಬಲಿಗೆ ಗುಡ್ಡದ ಗುಹೆಯಲ್ಲೇ ವಾಸವಿರುತ್ತೇನೆ. ನನ್ನ ಹೆಂಡತಿ ಮಗಳನ್ನು ಕಳಿಸಿಕೊಡಿ ಎಂದು ಹೇಳಿದ್ದಾರೆಂದು ತಿಳಿದುಬಂದಿದೆ.
ಮೆಣಸಿನ ಹಾಡ್ಯ ಗಿರಿಜನ ಶಾಲೆಯಲ್ಲಿ ಆಶ್ರಯ ಪಡೆದುಕೊಂಡ ನಂತರ ಚೆನ್ನಾಗಿದ್ದ ಅನಂತ ಕೆಲ ದಿನಗಳಿಂದ ತನ್ನ ವರಸೆ ಬದಲಿಸಿದ್ದಾರೆ. ಅನೇಕ ಬಾರೀ ಗಿರಿಜನ ಆಶ್ರಮ ಶಾಲೆಯಿಂದ ಹೊರ ಬಂದು ಗುಹೆಗೂ ಹೋಗಿ ಬಂದಿದ್ದು, ಇತ್ತೀಚೆಗೆ ಉಪವಿಭಾಗಾಧಿಕಾರಿ ಡಾ.ನಾಗರಾಜ್ ಹಾಗೂ ಅಧಿಕಾರಿಗಳ ತಂಡ ಆತನನ್ನು ಮತ್ತೆ ತಿಳುವಳಿಕೆ ಹೇಳಿ ಆಶ್ರಮ ಶಾಲೆಯಲ್ಲೇ ಇರುವಂತೆ ಮನವೊಲಿಸಿದ್ದಾರೆ.
ಉಪವಿಭಾಗಾಧಿಕಾರಿ ಭೇಟಿ ನೀಡಿದ ಸಂದರ್ಭದಲ್ಲಿ ಒಮ್ಮೆ ಚೆನ್ನಾಗಿ ಮಾತನಾಡಿದರೆ, ಒಮ್ಮೊಮ್ಮೆ ಸಿಟ್ಟು ಹೊರ ಹಾಕುತ್ತಾರೆ. ಅಮಾವಾಸೆ ಮತ್ತು ಹುಣ್ಣಿಮೆ ದಿನ ಬಲಿಗೆ ಗುಹೆಗೆ ಹೋಗಿ ಪೂಜೆ ಸಲ್ಲಿಸಿ ಬರುತ್ತೇನೆ ಎಂದಿದ್ದ ಅವರು ಮತ್ತೊಮ್ಮೆ ತಹಶೀಲ್ದಾರ್ ಭೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿ ಇರಲು ಸಾಧ್ಯವೇ ಇಲ್ಲ, ಗುಹೆಗೆ ಹೋಗುತ್ತೇನೆಂದು ಹೇಳಿದ್ದಾರೆನ್ನಲಾಗಿದೆ.
ಸೋಮವಾರ ಕೋಪಗೊಂಡ ಅನಂತ, ಗುಹೆಯಲ್ಲೇ ನಾನು ವಾಸ ಮಾಡುತ್ತೇನೆ, ಅದೇ ಇಷ್ಟ ನನಗೆ, ನಾಲ್ಕು ಗೋಡೆಗಳ ಮಧ್ಯೆ ವಾಸಿಸಲು ನನಗೆ ಸಾಧ್ಯವಿಲ್ಲ. ಹೆಂಡತಿ ಮಕ್ಕಳನ್ನು ನನ್ನೊಂದಿಗೆ ಕಳಸಿಕೊಡಿ ಎಂದು ಆಶ್ರಮ ಶಾಲೆಯಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. ಶಾಲೆಯ ಮುಂಭಾಗದಲ್ಲಿದ್ದ ಗೇಟ್ ಮುರಿದು ಹಾಕಿದ್ದಾರೆ. ಹೆಂಡತಿ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಶಾಲೆಯ ಸಿಬ್ಬಂದಿಯನ್ನು ನಿಂದಿಸಿದ್ದಾರೆಂದೂ ತಿಳಿದು ಬಂದಿದೆ. ನನಗೆ ಗುಹೆಯಲ್ಲಿ ವಾಸಿಸಲು ಅವಕಾಶ ಮಾಡಿಕೊಡಿ ಇಲ್ಲವೆ ಬಲಿಗೆ ಗ್ರಾಮದಲ್ಲಿ ಮನೆ ಕಟ್ಟಿಕೊಡಿ, ಇಲ್ಲಿ ಮನೆ ಕಟ್ಟಿಕೊಟ್ಟರು ನಾನಿರುವುದಿಲ್ಲ, ಬಲಿಗೆ ಗುಡ್ಡದ ಗುಹೆಗೆ ಹೋಗುತ್ತೇನೆಂದು ಹಠ ಹಿಡಿದು ಕುಳಿತಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಷಯ ತಿಳಿದ ಉಪವಿಭಾಗಾಧಿಕಾರಿ ಡಾ.ನಾಗರಾಜ್ ಅವರು ಗ್ರಾಮ ಲೆಕ್ಕಿಗ ಹಾಗೂ ಕಂದಾಯ ಅಧಿಕಾರಿಯನ್ನು ಬಲಿಗೆ ಗ್ರಾಮಕ್ಕೆ ಕಳಿಸಿ ಯಾರಾದರೂ ನಿವೇಶನ ನೀಡುವವರಿದ್ದರೆ ವಿಚಾರಿಸುವಂತೆ ತಿಳಿಸಿದ್ದಾರೆ. ನಿವೇಶನ ಸಿಗದಿರುವ ಹಿನ್ನೆಲೆಯಲ್ಲಿ ಬಲಿಗೆ ಗ್ರಾಮದಲ್ಲಿ ಮನೆ ಕಟ್ಟಿಕೊಡುವ ನಿರ್ಧಾರವನ್ನು ಜಿಲ್ಲಾಡಳಿತ ಕೈಬಿಟ್ಟಿದೆ.
ಈ ಹಿನ್ನೆಲೆಯಲ್ಲಿ ಅನಂತ ಅವರ ಸಮಸ್ಯೆ ಏನೆಂದು ಅರಿಯುವುದೇ ಜಿಲ್ಲಾಡಳಿತಕ್ಕೆ ದೊಡ್ಡ ಸವಾಲು ಆಗಿದೆ. ಮಾನಸಿಕ ಸಮಸ್ಯೆ ಎದುರಿಸುತ್ತಿರಬಹುದು ಎಂದು ಅಂದಾಜಿಸಿರುವ ಜಿಲ್ಲಾಡಳಿತ ಮಾನಸಿಕ ರೋಗ ತಜ್ಞರಲ್ಲಿ ಚಿಕಿತ್ಸೆ ಕೊಡಿಸಲು ಚಿಂತನೆ ನಡೆಸಿದೆ. ನಂತರವು ಸುಧಾರಣೆ ಕಂಡು ಬರದಿದ್ದರೆ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸುವ ಬಗ್ಗೆ ಜಿಲ್ಲಾಡಳಿತ ಯೋಚಿಸಿದೆ ಎಂದು ತಿಳಿದುಬಂದಿದೆ.
ಗುಹೆಯಲ್ಲಿ ಸಂಕಟದ ಜೀವನ ನಡೆಸುತ್ತಿದ್ದ ಪತ್ನಿ ಅನ್ನಪೂರ್ಣ ಹಾಗೂ ಮಗಳು ನಾಗರಿಕ ಸಮಾಜಕ್ಕೆ ಒಗ್ಗಿಕೊಂಡಿದ್ದಾರೆ. ಮತ್ತೆ ಅನಂತನೊಂದಿಗೆ ಗುಹೆಗೆ ಹೋಗಲು ಒಪ್ಪುತ್ತಿಲ್ಲ, ಅನಂತನಲ್ಲಿನ ಬದಲಾವಣೆಯಿಂದ ಅವರು ಬೇಸತ್ತು ಹೋಗಿದ್ದಾರೆ. ಅನಂತನ ನಡತೆಯಲ್ಲಿ ಆಗಾಗೇ ಬದಲಾವಣೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಮಾನಸಿಕ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಅನುಮಾನವಿದೆ. ಈ ಹಿನ್ನೆಲೆಯಲ್ಲಿ ಮಾನಸಿಕ ತಜ್ಞರಲ್ಲಿ ತಪಾಸಣೆ ಒಳಪಡಿಸಲು ಚಿಂತಿಸಲಾಗಿದೆ.
- ಡಾ.ನಾಗರಾಜ್ ಉಪವಿಭಾಗಾಧಿಕಾರಿ, ಚಿಕ್ಕಮಗಳೂರು
.jpg)







