ಚಾಕುವಿನಿಂದ ಕತ್ತು ಕುಯ್ದು ಪತ್ನಿಯ ಕೊಲೆಗೈದ ಪತಿ
![ಚಾಕುವಿನಿಂದ ಕತ್ತು ಕುಯ್ದು ಪತ್ನಿಯ ಕೊಲೆಗೈದ ಪತಿ ಚಾಕುವಿನಿಂದ ಕತ್ತು ಕುಯ್ದು ಪತ್ನಿಯ ಕೊಲೆಗೈದ ಪತಿ](https://www.varthabharati.in/sites/default/files/images/articles/2020/06/9/246775-1591723343.jpeg)
ಬೆಂಗಳೂರು, ಜೂ.9: ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿರುವ ಘಟನೆ ಇಲ್ಲಿನ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಹೊಂಗಸಂದ್ರದ ಶ್ರೀನಿವಾಸ ಲೇಔಟ್ ನಿವಾಸಿ ವೆಂಕಟಲಕ್ಷ್ಮೀ(26) ಕೊಲೆಯಾದ ಪತ್ನಿಯಾಗಿದ್ದು, ಈಕೆಯ ಪತಿ ಸುರೇಶ್ ಎಂಬಾತ ಈ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ.
ಟೈಲರ್ ಆಗಿರುವ ಸುರೇಶ್ ಮತ್ತು ವೆಂಕಟಲಕ್ಷ್ಮೀ ನಡುವೆ ಕೌಟುಂಬಿಕ ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು. ರವಿವಾರ ಸಹ ದಂಪತಿ ನಡುವೆ ಕೌಟುಂಬಿಕ ವಿಚಾರವಾಗಿ ಜಗಳವಾಗಿದ್ದು, ಕೋಪದಲ್ಲಿ ಸೋಮವಾರ ಮುಂಜಾನೆ 3 ಗಂಟೆ ಸುಮಾರಿನಲ್ಲಿ ಪತಿ ಸುರೇಶ್ ಚಾಕುವಿನಿಂದ ಪತ್ನಿಯ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತದನಂತರ ಬೆಳಗ್ಗೆ 6 ಗಂಟೆ ಸುಮಾರಿನಲ್ಲಿ ಮನೆ ಮಾಲಕರ ಬಳಿ ಹೋಗಿ ತನ್ನ ಪತ್ನಿ ಚಾಕುವಿನಿಂದ ಕತ್ತು ಕೊಯ್ದುಕೊಂಡು ಮೃತಪಟ್ಟಿದ್ದಾಳೆ ಎಂದು ನಾಟಕವಾಡಿದ್ದಾನೆ. ತಕ್ಷಣ ಮನೆ ಮಾಲಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಸುರೇಶ್ ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.