ಚೀನಾದ ಬಲಪ್ರದರ್ಶನಕ್ಕೆ ಭಾರತ ಬಗ್ಗುವುದಿಲ್ಲ: ಅಮಿತ್ ಶಾ, ರಾಜನಾಥ್ ಸಿಂಗ್ ಹೇಳಿಕೆ
![ಚೀನಾದ ಬಲಪ್ರದರ್ಶನಕ್ಕೆ ಭಾರತ ಬಗ್ಗುವುದಿಲ್ಲ: ಅಮಿತ್ ಶಾ, ರಾಜನಾಥ್ ಸಿಂಗ್ ಹೇಳಿಕೆ ಚೀನಾದ ಬಲಪ್ರದರ್ಶನಕ್ಕೆ ಭಾರತ ಬಗ್ಗುವುದಿಲ್ಲ: ಅಮಿತ್ ಶಾ, ರಾಜನಾಥ್ ಸಿಂಗ್ ಹೇಳಿಕೆ](https://www.varthabharati.in/sites/default/files/images/articles/2020/06/9/246788-1591724804.jpg)
ಹೊಸದಿಲ್ಲಿ, ಜೂ.9: ಬಲಪ್ರದರ್ಶನದ ಮೂಲಕ ಭಾರತವನ್ನು ಹೆದರಿಸಿ ಲಡಾಖ್ ಪ್ರದೇಶದಲ್ಲಿ ಇನ್ನಷ್ಟು ಭೂಮಿಯನ್ನು ಕಸಿದುಕೊಳ್ಳುವ ಚೀನಾದ ಪ್ರಯತ್ನ ಫಲಿಸದು. ಚೀನಾದ ಬಲಪ್ರದರ್ಶನಕ್ಕೆ ಭಾರತ ಬಗ್ಗುವುದಿಲ್ಲ ಎಂದು ಗೃಹಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಪ್ರತ್ಯೇಕ ವೀಡಿಯೊ ಕಾನ್ಫರೆನ್ಸ್ ಮೂಲಕ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಾ ಮತ್ತು ಸಿಂಗ್, ರಾಷ್ಟ್ರೀಯ ಹಿತಾಸಕ್ತಿ ಮತ್ತು ಸ್ವಾಭಿಮಾನವನ್ನು ಬಲಿಗೊಟ್ಟು ಭಾರತ ಯಾರಿಗೂ ಯಾವುದೇ ರಿಯಾಯಿತಿ ನೀಡುವುದಿಲ್ಲ ಎಂದರು. ಅಮೆರಿಕ ಮತ್ತು ಇಸ್ರೇಲ್ನಂತೆಯೇ ಭಾರತವೂ ಇತರರಿಗಿಂತ ಮುಂಚಿತವಾಗಿಯೇ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ ಅಮಿತ್ ಶಾ, ಪಾಕ್ನ ಬಾಲಕೋಟ್ ಪ್ರದೇಶದ ಮೇಲೆ ಭಾರತ ನಡೆಸಿದ ದಾಳಿಯನ್ನು ಉಲ್ಲೇಖಿಸಿದರು.
ಈ ಹಿಂದೆ ದೇಶದಲ್ಲಿ ನಡೆದಂತ ಭಯೋತ್ಪಾದಕ ದಾಳಿ ಈಗಲೂ ನಡೆದಿದೆ. ಆದರೆ ಹಿಂದಿನ ಪ್ರಧಾನಿಗಳಂತೆ ಪ್ರಧಾನಿ ಮೋದಿ ವೌನವಾಗಿ ಕುಳಿತುಕೊಳ್ಳಲಿಲ್ಲ. ಪಾಕಿಸ್ತಾನದ ನೆಲಕ್ಕೆ ಪ್ರವೇಶಿಸಿ ವಾಯುದಾಳಿ ಮತ್ತು ಸರ್ಜಿಕಲ್ ದಾಳಿಯ ಮೂಲಕ ಇದಕ್ಕೆ ಪ್ರತ್ಯುತ್ತರ ನೀಡಿ ಅವರಿಗೆ ಪಾಠ ಕಲಿಸಿದರು. ತನ್ನ ಗಡಿಯನ್ನು ಅತ್ರಿಕಮಿಸುವವರನ್ನು ಭಾರತ ಸುಮ್ಮನೆ ಬಿಡುವುದಿಲ್ಲ ಎಂಬುದು ಇದರಿಂದ ಇಡೀ ವಿಶ್ವಕ್ಕೆ ಮನದಟ್ಟಾಯಿತು ಎಂದು ಒಡಿಶಾದಲ್ಲಿ ಮಾತನಾಡಿದ ಶಾ ಹೇಳಿದರು.
ಮಹಾರಾಷ್ಟ್ರದಲ್ಲಿ ವೀಡಿಯೊ ಕಾನ್ಪರೆನ್ಸ್ ಮೂಲಕ ಮಾತನಾಡಿದ ರಾಜನಾಥ್ ಸಿಂಗ್, ದೇಶದ ನಾಯಕತ್ವ ಬಲಿಷ್ಟ ಕೈಗಳಲ್ಲಿದೆ. ಭಾರತ ಇತರ ದೇಶದ ಘನತೆ ಮತ್ತು ಸಾರ್ವಭೌಮತ್ವವನ್ನು ಗೌರವಿಸುವುದರಿಂದ ದೇಶದ ಘನತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ ಎಂದರು. ಚೀನಾದೊಂದಿಗೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗದಲ್ಲಿ ಮಾತುಕತೆ ಮುಂದುವರಿದಿದೆ. ಜೂನ್ 6ರಂದು ನಡೆದ ಮಿಲಿಟರಿ ಮಟ್ಟದ ಮಾತುಕತೆ ಸಕಾರಾತ್ಮಕ ರೀತಿಯಲ್ಲಿ ನಡೆದಿದೆ. ಗಡಿ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ಮಾತುಕತೆ ಮುಂದುವರಿಸಲು ಎರಡೂ ದೇಶಗಳು ಸಮ್ಮತಿಸಿವೆ. ಗಡಿಭಾಗದಲ್ಲಿ ಏನು ನಡೆಯುತ್ತಿದೆ ಎಂದು ಕೆಲವು ಕಾಂಗ್ರೆಸ್ ಮುಖಂಡರು ಪದೇ ಪದೇ ಪ್ರಶ್ನಿಸುತ್ತಿದ್ದಾರೆ. ಜನತೆಯಿಂದ ಮುಚ್ಚಿಡುವಂತದ್ದು ಏನೂ ಇಲ್ಲ. ಈ ಬಗ್ಗೆ ವಿವರವಾದ ಹೇಳಿಕೆಯನ್ನು ಸಂಸತ್ತಿನಲ್ಲಿ ನೀಡಲಿದ್ದೇನೆ ಎಂದು ಸಿಂಗ್ ಹೇಳಿದರು.
ಗಾಲಿಬ್ ಕವನದ ಸಾಲು ಉದ್ಧರಿಸಿ ರಾಹುಲ್ಗೆ ಇದಿರೇಟು
ಗಡಿಯಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಕೆಲವು ದಿನಗಳಿಂದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ರಾಜನಾಥ್ ಸಿಂಗ್ ಮಧ್ಯೆ ಟ್ವಿಟರ್ನಲ್ಲಿ ಮಾತಿನ ಚಕಮಕಿ ನಡೆಯುತ್ತಿದೆ. ಕವಿ ಮಿರ್ಝಾ ಗಾಲಿಬರ ಕವನದ ಮೂಲಕ ರಾಹುಲ್ ಗಾಂಧಿ ಕೇಂದ್ರ ಸರಕಾರವನ್ನು ಟೀಕಿಸಿದರೆ, ಅದಕ್ಕೆ ಗಾಲಿಬ್ ಕವನದ ಮೂಲಕವೇ ಉತ್ತರಿಸಿರುವ ಸಿಂಗ್, “ಕೈಗೆ ನೋವಾಗಿದ್ದರೆ ಔಷಧ ಹಚ್ಚಬಹುದು. ಆದರೆ ಕೈಯೇ ನೋವಾಗಿ ಪರಿಣಮಿಸಿದರೆ ಏನು ಮಾಡುವುದು” ಎಂದರು (ಕೈ ಕಾಂಗ್ರೆಸ್ನ ಚಿಹ್ನೆಯಾಗಿದೆ). ಗಾಲಿಬ್ ಕವನದಲ್ಲಿರುವ ಹೃದಯ ಎಂಬ ಪದದ ಬದಲು ಕೈ ಎಂಬ ಪದವನ್ನು ರಾಜ್ನಾಥ್ ಸಿಂಗ್ ಬಳಸಿದ್ದಾರೆ.