ಕತರ್ : ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಲು ಸಹಕರಿಸಿದ 'ಕ್ಯೂಐಎಸ್ಎಫ್'
ಕತರ್ : ಇಲ್ಲಿನ ರುವೈಸ್ ಎಂಬಲ್ಲಿ ಟೈಲರ್ ವೃತ್ತಿಯಲ್ಲಿದ್ದ ಕೇರಳ ಮೂಲದ ಪನಿಕುಳಂ ತಿರುಚೂರು ಜಿಲ್ಲೆಯ 45 ವರ್ಷ ಪ್ರಾಯದ ರಜೇಶ್ (ಹೆಸರು ಬದಲಾಯಿಸಲಾಗಿದೆ) ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಕತರ್ ನಲ್ಲಿರುವ ತಿರುಚೂರು ನಿವಾಸಿ ಕ್ಯೂಐಎಸ್ಎಫ್ ಸದಸ್ಯ ಶಿಹಾಬ್ ಅವರಿಗೆ ಮಾಹಿತಿ ನೀಡಲಾಗಿತ್ತು.
ಶಿಹಾಬ್ ಅವರು ಕ್ಯೂಐಎಸ್ಎಫ್ ನ ಮಾನವೀಯ ಸೇವೆಯ (Humaniterian Team) ಮುಖ್ಯಸ್ಥರಾದ ಅಬ್ದುಲ್ ಲತೀಫ್ ಮಡಿಕೇರಿ ಮತ್ತು ಬಶೀರ್ ಅಹ್ಮದ್ ತಮಿಳುನಾಡು ಇವರನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ನೀಡಿದ್ದರು.
ಕೋವಿಡ್-19 ಸಾಂಕ್ರಮಿಕ ರೋಗದ ಭೀತಿ ಸಮಯದಲ್ಲಿ ಸುರಕ್ಷಿತ ಅಂತರ ಕಾಯ್ದುಕೊಂಡು, ಲಾಕ್ ಡೌನ್ ನಿಯಮ ಪಾಲಿಸಿ ಮೃತದೇಹವನ್ನು ಊರಿಗೆ ಕಳುಹಿಸಲು ಯಾವುದೇ ಸೌಕರ್ಯ ಇಲ್ಲದ ಪರಿಸ್ಥಿತಿಯನ್ನು ಮನಗಂಡ ಅವರು ಮೃತರ ಕುಟುಂಬದೊಂದಿಗೆ ಚರ್ಚಿಸಿ ಕತರ್ ನಲ್ಲಿಯೇ ಅಂತ್ಯಕ್ರಿಯೆ ಮಾಡಲು ಬೇಕಾದಂತಹ ಎಲ್ಲಾ ದಾಖಲೆಗಳನ್ನು ಊರಿನಿಂದ ತರಿಸಿದರು. ರುವೈಶ್ ಪೊಲೀಸ್ ಠಾಣೆ, ಆರೋಗ್ಯ ಇಲಾಖೆ, ಭಾರತೀಯ ರಾಯಭಾರಿ ಕಚೇರಿ ಹಾಗೂ ಹಮದ್ ಮೆಡಿಕಲ್ ಕಾರ್ಪೊರೇಷನಿಂದ ಬೇಕಾದಂತಹ ದಾಖಲೆ ಪತ್ರಗಳನ್ನು ತಯಾರಿಸಿ ಜೂ.7ರಂದು ಅಂತ್ಯಕ್ರಿಯೆ ಮಾಡಲಾಯಿತು.
ಸಾಂಕ್ರಮಿಕ ರೋಗ ಹರಡುವ ಭೀತಿಯ ವಾತಾವರಣದಲ್ಲಿಯೂ ಜಾತಿ ನೋಡದೆ ಮಾನವೀಯ ಸೇವೆಯಲ್ಲಿ ಕೈಜೋಡಿಸಿದ ಕ್ಯೂಐಎಸ್ಎಫ್ ನ ಸದಸ್ಯರಿಗೆ ಮೃತರ ಕುಟುಂಬಸ್ಥರು ಧನ್ಯವಾದ ಸಲ್ಲಿಸಿದ್ದಾರೆ.







