ಎಲ್ಲ ಸಮುದಾಯದಲ್ಲೂ ಹಿಂದುಳಿದವರು ಇದ್ದಾರೆ: ಮುಖ್ಯಮಂತ್ರಿ ಯಡಿಯೂರಪ್ಪ
![ಎಲ್ಲ ಸಮುದಾಯದಲ್ಲೂ ಹಿಂದುಳಿದವರು ಇದ್ದಾರೆ: ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲ ಸಮುದಾಯದಲ್ಲೂ ಹಿಂದುಳಿದವರು ಇದ್ದಾರೆ: ಮುಖ್ಯಮಂತ್ರಿ ಯಡಿಯೂರಪ್ಪ](https://www.varthabharati.in/sites/default/files/images/articles/2020/06/10/246824-1591811954.jpg)
ಬೆಂಗಳೂರು, ಜೂ.10: ಯಾವುದೇ ಒಂದು ಸಮುದಾಯವನ್ನು ಸಾರಾಸಗಟಾಗಿ ಮುಂದುವರಿದ ಸಮುದಾಯವೆಂದು ಹೇಳಲು ಬರುವುದಿಲ್ಲ. ಎಲ್ಲ ಸಮುದಾಯದಲ್ಲೂ ಮುಂದುವರಿದವರು, ಹಿಂದುಳಿದವರು ಇರುತ್ತಾರೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಿಸಿದ್ದಾರೆ.
ಬುಧವಾರ ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನೂತನ ಕಚೇರಿ, ಲಾಂಛನ ಹಾಗೂ ಜಾಲತಾಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬ್ರಾಹ್ಮಣ ಸಮುದಾಯವನ್ನು ಮುಂದುವರಿದ ಸಮುದಾಯವೆಂದು ಗುರುತಿಸಿದ್ದರೂ ಆರ್ಥಿಕವಾಗಿ ಅಶಕ್ತರಾಗಿರುವ ಹಲವು ಮಂದಿ ಇದ್ದಾರೆ. ಇವರ ಅಭ್ಯುದಯಕ್ಕಾಗಿ ಅಭಿವೃದ್ದಿ ಮಂಡಳಿಯನ್ನು ಸ್ಥಾಪಿಸಲಾಗಿದೆ ಎಂದರು.
ಅಶಕ್ತ ಬ್ರಾಹ್ಮಣರ ಕಲ್ಯಾಣಕ್ಕಾಗಿ ಅಭಿವೃದ್ಧಿ ಮಂಡಳಿಯಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯವಾದದ್ದೆಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಕಂದಾಯ ಸಚಿವ ಆರ್.ಅಶೋಕ್, ರಮೇಶ್ ಜಾರಕಿಹೊಳಿ, ಸಂಸದ ತೇಜಸ್ವಿ ಸೂರ್ಯ, ಬ್ರಾಹ್ಮಣ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.