ಕೊರೋನ ವೈರಸ್ ಬಿಕ್ಕಟ್ಟು ದೇಶಕ್ಕೆ ಮಹತ್ವದ ತಿರುವು ಆಗಬೇಕು: ಪ್ರಧಾನಿ ಮೋದಿ
ಹೊಸದಿಲ್ಲಿ, ಜೂ.11: ದೃಢ ನಿರ್ಧಾರ ಮತ್ತು ದೃಢಸಂಕಲ್ಪ ಮಾತ್ರ ನಮ್ಮ ಭವಿಷ್ಯವನ್ನು ರೂಪಿಸುತ್ತದೆ. ಆತ್ಮನಿರ್ಭರ ಭಾರತ (ಸ್ವಾವಲಂಬಿ ಭಾರತ)ದ ಪರಿಕಲ್ಪನೆ ಸಾಕಾರವಾಗಬೇಕಿದ್ದರೆ ಕೊರೋನ ಸೋಂಕಿನಿಂದ ಉದ್ಭವಿಸಿರುವ ಬಿಕ್ಕಟ್ಟನ್ನು ಅವಕಾಶವಾಗಿ ಬಳಸಿಕೊಳ್ಳಬೇಕು. ಮತ್ತು ಈ ಬಿಕ್ಕಟ್ಟಿನ ಪರಿಸ್ಥಿತಿಯನ್ನು ದೇಶದ ಪರಿವರ್ತನೆಯ ಕಾಲವಾಗಿ ಪರಿವರ್ತಿಸುವ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇಂಡಿಯನ್ ಚೇಂಬರ್ ಆಫ್ ಇಂಡಸ್ಟ್ರೀಸ್ನ 95ನೇ ವಾರ್ಷಿಕ ಪೂರ್ಣಾಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತಕ್ಕೆ ಇದೊಂದು ಸವಾಲಿನ ಸಮಯವಾಗಿದೆ. ಕೊರೋನ ಸೋಂಕಿನ ಬಿಕ್ಕಟ್ಟಿನ ಜೊತೆಗೆ ಮಿಡತೆ ದಾಳಿ, ತೈಲಬಾವಿಯಲ್ಲಿ ಬೆಂಕಿ ಪ್ರಕರಣ, ಭೂಕಂಪ, ಚಂಡಮಾರುತದಂತಹ ವಿಪತ್ತುಗಳೂ ದೇಶಕ್ಕೆ ಎದುರಾಗಿವೆ. ಆದರೆ ದೃಢನಿರ್ಧಾರ ಮತ್ತು ದೃಢ ಸಂಕಲ್ಪದಿಂದ ಮಾತ್ರ ನಮ್ಮ ಭವಿಷ್ಯವನ್ನು ರೂಪಿಸಬಹುದು ಎಂದು ಮೋದಿ ಹೇಳಿದರು.
ಸಾಮಾನ್ಯವಾಗಿ ಆಮದು ಮಾಡಿಕೊಳ್ಳುತ್ತಿದ್ದ ವಸ್ತುಗಳನ್ನು ನಮ್ಮಲ್ಲೇ ಉತ್ಪಾದಿಸುವುದು ಮತ್ತು ಕ್ರಮೇಣ ರಫ್ತು ಮಾಡುವುದು ಆತ್ಮನಿರ್ಭರ ಭಾರತ ಅಭಿಯಾನದ ಸಾರಾಂಶವಾಗಿದೆ. ಭಾರತೀಯ ಆರ್ಥಿಕತೆಯನ್ನು ‘ಆಜ್ಞೆ ಮತ್ತು ನಿಯಂತ್ರಣ’ದಿಂದ ಹೊರತಂದು ಮರುವಿನ್ಯಾಸಗೊಳಿಸಬೇಕು. ಸಂಪ್ರದಾಯವಾದಿ ವಿಧಾನಕ್ಕೆ ಅಂಟಿಕೊಳ್ಳುವ ಸಮಯ ಇದಲ್ಲ. ದಿಟ್ಟ ನಿರ್ಧಾರ ಮತ್ತು ದಿಟ್ಟ ಹೂಡಿಕೆಯ ಕಾಲವಿದಾಗಿದೆ. ಜಾಗತಿಕವಾಗಿ ಸ್ಪರ್ಧಾತ್ಮಕ ದೇಶೀಯ ಪೂರೈಕೆ ಸರಪಳಿ ರೂಪಿಸಬೇಕಾಗಿದೆ ಅರ್ಥವ್ಯವಸ್ಥೆಗೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಅನ್ಲಾಕ್-1ರ ಮೂಲಕ ನಿರ್ಬಂಧವನ್ನು ಹಂತ ಹಂತವಾಗಿ ಸಡಿಲಿಸಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದವರು ಹೇಳಿದರು.
ಬಂಗಾಳ ಇವತ್ತು ಯೋಚಿಸುವುದನ್ನು ಭಾರತ ನಾಳೆ ಯೋಚಿಸುತ್ತದೆ ಎಂಬ ಮಾತು ಈ ಹಿಂದೆ ಚಾಲ್ತಿಯಲ್ಲಿತ್ತು. ಮತ್ತೊಮ್ಮೆ ದೇಶದ ಅಗ್ರಗಣ್ಯ ರಾಜ್ಯವಾಗಿ ಹೊರಹೊಮ್ಮುವ ಸಾಮರ್ಥ್ಯ ಪಶ್ಚಿಮ ಬಂಗಾಳಕ್ಕಿದೆ ಎಂದು ಮೋದಿ ಹೇಳಿದರು.