ಸರಕಾರಿ ಸ್ವಾಮ್ಯದ ಸಂಸ್ಥೆಗಳಿಂದ 4 ಲಕ್ಷ ಕೋಟಿ ರೂ. ರಾಜಸ್ವ ಆದಾಯ ಪಡೆಯುವ ನಿರ್ಧಾರ ಅನುಚಿತ: ಸುಪ್ರೀಂಕೋರ್ಟ್
ಹೊಸದಿಲ್ಲಿ, ಜೂ.11: ಸಾರ್ವಜನಿಕ ವಲಯದ (ಸರಕಾರಿ ಸ್ವಾಮ್ಯದ) ಸಂಸ್ಥೆಗಳಿಂದ ರಾಜಸ್ವ ಆದಾಯದ ರೂಪದಲ್ಲಿ 4 ಲಕ್ಷ ಕೋಟಿ ರೂ. ಮೊತ್ತವನ್ನು ‘ಸರಿ ಹೊಂದಿಸಿದ ಆದಾಯ’ಕ್ಕೆ ಬರಬೇಕಾದ ಬಾಕಿ ಹಣ ಎಂದು ವಸೂಲು ಮಾಡುವ ದೂರಸಂಪರ್ಕ ಇಲಾಖೆಯ ಉಪಕ್ರಮ ತೀರಾ ಅನುಚಿತ ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ದೂರಸಂಪರ್ಕ ಇಲಾಖೆ, ಈ ಸಂಸ್ಥೆಗಳ ವಿರುದ್ಧ ಯಾಕೆ ರಾಜಸ್ವ(ರಾಜ್ಯಾದಾಯ) ವಸೂಲು ಮಾಡಲಾಗುತ್ತಿದೆ ಎಂಬ ಬಗ್ಗೆ ಅಫಿದಾವಿತ್ ಸಲ್ಲಿಸಲಾಗುವುದು ಎಂದಿದೆ. ಕಾನೂನು ಪ್ರಕಾರ ಪಾವತಿಸಬೇಕಿರುವ ಹಿಂದಿನ ಬಾಕಿ ಮೊತ್ತವಾಗಿ 1.47 ಲಕ್ಷ ಕೋಟಿ ರೂ. ಹಣವನ್ನು ಜನವರಿ 23ರೊಳಗೆ ಸರಕಾರಕ್ಕೆ ಪಾವತಿಸಬೇಕೆಂದು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಪರಿಷ್ಕರಿಸಬೇಕು ಎಂದು ಕೋರಿ ಭಾರ್ತಿ ಏರ್ಟೆಲ್, ವೊಡಾಫೋನ್ ಮತ್ತಿತರ ಟೆಲಿಕಾಂ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಯನ್ನು ಜನವರಿ 15ರಂದು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಮೇ 18ರಂದು ಟೆಲಿಕಾಂ ಸಂಸ್ಥೆಗಳಿಗೆ ಮತ್ತೆ ಸೂಚನೆ ನೀಡಿದ್ದ ಸುಪ್ರೀಂಕೋರ್ಟ್, ಸರಕಾರಕ್ಕೆ ಸಲ್ಲಿಸಬೇಕಿರುವ ಬಾಕಿ ಸಾಲದ ಮೊತ್ತವನ್ನು ಸ್ವಯಂ ನಿರ್ಧರಿಸುವ ಹಕ್ಕು ನಿಮಗಿಲ್ಲ ಎಂದು ತಿಳಿಸಿ ಈ ಹಿಂದೆ ಸೂಚಿಸಿದ್ದ ಮೊತ್ತಕ್ಕೆ ಬಡ್ಡಿ ಮತ್ತು ದಂಡ ಸೇರಿಸಿ ಒಟ್ಟು 1.60 ಲಕ್ಷ ಕೋಟಿ ಮೊತ್ತ ಪಾವತಿಸುವಂತೆ ಸೂಚಿಸಿತ್ತು.
ಅಲ್ಲದೆ ಟೆಲಿಕಾಂ ಸಂಸ್ಥೆಗಳು ತಮ್ಮ ಬಾಕಿ ಮೊತ್ತವನ್ನು ಮರು ಮೌಲ್ಯಮಾಪನ ಮಾಡಲು ಅವಕಾಶ ಮಾಡಿಕೊಟ್ಟ ಟೆಲಿಕಾಂ ಇಲಾಖೆಯ ನಿರ್ಧಾರವನ್ನು ಆಕ್ಷೇಪಿಸಿತ್ತು. ಈ ಮಧ್ಯೆ, ತನ್ನ ಆದೇಶವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ. ತಾನು ನೀಡಿದ ಆದೇಶ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಗುರುವಾರ ಸುಪ್ರೀಂಕೋರ್ಟ್ನ ನ್ಯಾಯಾಧೀಶರಾದ ಅರುಣ್ ಮಿಶ್ರಾ, ಎಸ್ ಅಬ್ದುಲ್ ನಝೀರ್ ಮತ್ತು ಎಂಆರ್ ಶಾ ಅವರಿದ್ದ ನ್ಯಾಯಪೀಠ ಹೇಳಿದೆ. ಸ್ವಯಂ ಒಂದು ವರ್ಗವನ್ನು ರೂಪಿಸಿಕೊಂಡ ಕೆಲವು ಸಾರ್ವಜನಿಕ ವಲಯದ ಸಂಸ್ಥೆಗಳಿವೆ. ಇವು ಇತರ ಟೆಲಿಕಾಂ ಸಂಸ್ಥೆಗಳಂತೆ ವಾಣಿಜ್ಯ ಉದ್ದೇಶದಿಂದ ಮೊಬೈಲ್ ಫೋನ್ ಸೇವೆಯನ್ನು ಒದಗಿಸುತ್ತಿಲ್ಲ. ಇವುಗಳನ್ನು ಖಾಸಗಿ ಟೆಲಿಕಾಂ ಸಂಸ್ಥೆಗಳಿಗಿಂತ ಪ್ರತ್ಯೇಕವಾಗಿ ಪರಿಗಣಿಸಬೇಕು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಆದರೂ, ಸಾರ್ವಜನಿಕ ವಲಯದ ಸಂಸ್ಥೆಗಳ ಮೇಲೆ ಬಾಕಿ ವಿಧಿಸುವುದು ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿಲ್ಲ ಎಂದವರು ಒಪ್ಪಿಕೊಂಡರು.
ನ್ಯಾಯಪೀಠವು ಖಾಸಗಿ ಟೆಲಿಕಾಂ ಸಂಸ್ಥೆಗಳನ್ನೂ ಖಂಡಿಸಿತು. ಕೊರೋನ ವೈರಸ್ ಬಿಕ್ಕಟ್ಟಿನ ಎದುರು ನಡೆಯುತ್ತಿರುವ ಹೋರಾಟಕ್ಕೆ ಯಾವುದೇ ಖಾಸಗಿ ಸಂಸ್ಥೆ ಕೊಡುಗೆ ನೀಡಿಲ್ಲ ಯಾಕೆ ಎಂದು ನ್ಯಾ. ಎಂಆರ್ ಶಾ ಪ್ರಶ್ನಿಸಿದರು. ಹ್ಯೂಸ್ ಕಮ್ಯುನಿಕೇಶನ್ ಪಿಎಂ ಕೇರ್ಸ್ ನಿಧಿಗೆ ಕೊಡುಗೆ ನೀಡಿದೆ ಎಂದು ಸಂಸ್ಥೆಯ ವಕೀಲ ಕಪಿಲ್ ಸಿಬಲ್ ಹೇಳಿದರೆ, ಪಿಎಂ ಕೇರ್ಸ್ ನಿಧಿಗೆ ಏರ್ಸೆಲ್ 100 ಕೋಟಿ ರೂ. ಕೊಡುಗೆ ನೀಡಿದೆ ಎಂದು ಸಂಸ್ಥೆಯ ವಕೀಲ ಅಭಿಷೇಕ್ ಮನು ಸಿಂಘ್ವಿ ಹೇಳಿದರು.