ಮೀಸಲಾತಿ ಮೂಲಭೂತ ಹಕ್ಕಲ್ಲ: ಸುಪ್ರೀಂಕೋರ್ಟ್
ತಮಿಳುನಾಡಿನ ವೈದ್ಯಕೀಯ,ಡೆಂಟಲ್ ಕೋರ್ಸ್ಗಳಲ್ಲಿ ಶೇ.50 ಒಬಿಸಿ ಮೀಸಲಾತಿ ಕೋರಿದ್ದ ಅರ್ಜಿಗಳ ವಜಾ
![ಮೀಸಲಾತಿ ಮೂಲಭೂತ ಹಕ್ಕಲ್ಲ: ಸುಪ್ರೀಂಕೋರ್ಟ್ ಮೀಸಲಾತಿ ಮೂಲಭೂತ ಹಕ್ಕಲ್ಲ: ಸುಪ್ರೀಂಕೋರ್ಟ್](https://www.varthabharati.in/sites/default/files/images/articles/2020/06/11/247019-1591898463.jpg)
ಹೊಸದಿಲ್ಲಿ,ಜೂ.11: ಮೀಸಲಾತಿಯು ಮೂಲಭೂತ ಹಕ್ಕಲ್ಲವೆಂದು ಸುಪ್ರೀಂಕೋರ್ಟ್ ಬುಧವಾರ ಅಭಿಪ್ರಾಯಿಸಿದೆ.
ತಮಿಳುನಾಡು ವೈದ್ಯಕೀಯ ಕಾಲೇಜುಗಳಲ್ಲಿ ಒಬಿಸಿ ಅಭ್ಯರ್ಥಿಗಳ ಮೀಸಲು ಖೋಟಾದ ಸೀಟು ನಿರಾಕರಣೆಗೆ ಸಂಬಂಧಿಸಿದ ಪ್ರಕರಣಗಳ ಅರ್ಜಿಗಳನ್ನು ಒಟ್ಟಾಗಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಸರ್ವೋಚ ನ್ಯಾಯಾಲಯ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಮೀಸಲಾತಿಯು ತನ್ನ ಮೂಲಭೂತ ಹಕ್ಕೆಂದು ಯಾರೂ ಕೂಡಾ ಪ್ರತಿಪಾದಿಸಲು ಸಾಧ್ಯವಿಲ್ಲ.ಮೀಸಲಾತಿಯ ಸೌಲಭ್ಯಗಳನ್ನು ನೀಡದೆ ಇರುವುದು ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎಲ್.ನಾಗೇಶ್ವರರಾವ್ ನೇತೃತ್ವದ ನ್ಯಾಯಪೀಠ ಸ್ಪಷ್ಟಪಡಿಸಿತು.
‘‘ಮೀಸಲಾತಿಯ ಹಕ್ಕು ಮೂಲಭೂತ ಹಕ್ಕಲ್ಲ. ಅದು ಈಗಿನ ಕಾನೂನು’’ ಎಂದು ನಾಗೇಶ್ವರರಾವ್ ಅಭಿಪ್ರಾಯಿಸಿದರು. ತಮಿಳುನಾಡಿನ ವೈದ್ಯಕೀಯ ಕಾಲೇಜುಗಳಲ್ಲಿ ಒಬಿಸಿ ವಿದ್ಯಾರ್ಥಿಗಳಿಗೆ ಸೀಟು ಮೀಸಲಾತಿ ನೀಡದೆ ಇರುವುದು ಸಂವಿಧಾನದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ವಾದಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯ ನಡೆಸಿತ್ತು.
2020-21ನೇ ಸಾಲಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ವೈದ್ಯಕೀಯ ಹಾಗೂ ದಂತವೈದ್ಯಕೀಯ (ಡೆಂಟಲ್ )ಕೋರ್ಸ್ಗಳಲ್ಲಿ ಅಖಿಲ ಭಾರತ ಮಟ್ಟದ ಒಬಿಸಿ ಕೋಟಾವನ್ನು ತಮಿಳುನಾಡು ಸರಕಾರ ರದ್ದುಪಡಿಸಿತ್ತು. ಈ ಕೋರ್ಸ್ಗಳಲ್ಲಿ ಒಬಿಸಿ ಕೋಟಾದಡಿ ಶೇ.50 ಸೀಟುಗಳನ್ನು ಮೀಸಲಿಡಬೇಕೆಂದು ಆಗ್ರಹಿಸಿ ಸಿಪಿಐ,ಡಿಎಂಕೆ ಪಕ್ಷಗಳು ಹಾಗೂ ಅವುಗಳ ನಾಯಕರು ಸುಪ್ರೀಂಕೋರ್ಟ್ನ ಮೆಟ್ಟಿಲೇರಿದ್ದರು.
ತಮಿಳುನಾಡಿನಲ್ಲಿ ವೈದ್ಯಕೀಯ ಹಾಗೂ ದಂತವೈದ್ಯಕೀಯ ಶಿಕ್ಷಣದಲ್ಲಿ ಒಬಿಸಿ, ಎಸ್ಸಿ ಹಾಗೂ ಎಸ್ಟಿ ಅಭ್ಯರ್ಥಿಗಳಿಗೆ ಶೇ.69 ಮೀಸಲಾತಿಯಿದ್ದು, ಈ ಪೈಕಿ ಶೇ.50ರಷ್ಟು ಸೀಟುಗಳು ಒಬಿಸಿಗಳಿಗಾಗಿ ಮೀಸಲಿಡಲಾಗಿದೆಯೆಂದು ಅರ್ಜಿದಾರರು ಸುಪ್ರೀಂಕೋರ್ಟ್ನ ಗಮನಸೆಳೆದಿದ್ದರು.
ಕೇಂದ್ರ ಸರಕಾರದ ಶಿಕ್ಷಣ ಸಂಸ್ಥೆಗಳನ್ನು ಹೊರತುಪಡಿಸಿ ಅಖಿಲ ಭಾರತ ಖೋಟಾದಡಿ ತಮಿಳುನಾಡು ಸರಕಾರವು ಒಬಿಸಿ ಅಭ್ಯರ್ಥಿಗಳಿಗೆ ವೈದ್ಯಕೀಯ ಹಾಗೂ ದಂತವೈದ್ಯಕೀಯ ಶಿಕ್ಷಣದಲ್ಲಿ ಶೇ.50ರಷ್ಟು ಮೀಸಲಾತಿ ಸೀಟುಗಳನ್ನು ನೀಡಬೇಕೆಂದು ಅರ್ಜಿದಾರರು ವಾದಿಸಿದ್ದರು. ಒಬಿಸಿ ಅಭ್ಯರ್ಥಿಗಳಿಗೆ ಮೀಸಲಾತಿ ನಿರಾಕರಣೆಯು ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆಯೆಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.
ಆದರೆ ಅದನ್ನು ಒಪ್ಪದ ಸುಪ್ರೀಂಕೋರ್ಟ್ ನ್ಯಾಯಪೀಠವು, ಮೀಸಲಾತಿಯು ಮೂಲಭೂತ ಹಕ್ಕು ಅಲ್ಲದೆ ಇರುವಾಗ, ಈ ಅರ್ಜಿಗಳನ್ನು ಸಂವಿಧಾನದ 32ನೇ ಕಲಮಿನಡಿ ಪರಿಶೀಲಿಸಲು ಹೇಗೆ ಸಾಧ್ಯವೆಂದು ಪ್ರಶ್ನಿಸಿತು.
‘‘ಯಾರ ಮೂಲಭೂತ ಹಕ್ಕುಗಳನ್ನು ಉಲ್ಲಂಘನೆಯಾಗಿದೆ?. ಸಂವಿಧಾನದ 32ನೇ ಕಲಮು, ಕೇವಲ ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ್ದಾಗಿದೆ. ನೀವು ತಮಿಳುನಾಡಿನ ನಾಗರಿಕರ ಮೂಲಭೂತ ಹಕ್ಕುಗಳ ಬಗ್ಗೆ ಆಸಕ್ತರಾಗಿದ್ದೀರಿ. ಆದರೆ ಮೀಸಲಾತಿಯ ಹಕ್ಕು ಎಂಬುದು ಮೂಲಭೂತ ಹಕ್ಕು ಆಗಿರುವುದಿಲ್ಲ’’ ಎಂದು ನ್ಯಾಯಪೀಠ ಅಭಿಪ್ರಾಯಿಸಿತು.
ಒಂದು ಧ್ಯೇಯಕ್ಕಾಗಿ ತಮಿಳುನಾಡಿನ ವಿವಿಧ ರಾಜಕೀಯ ಪಕ್ಷಗಳು ಒಗ್ಗೂಡಿರುವುದನ್ನು ತಾನು ಪ್ರಶಂಸಿಸುತ್ತೇನಾದಾರೂ, ಈ ಅರ್ಜಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತು.
ಆದಾಗ್ಯೂ, ಒಬಿಸಿ ಸೀಟುಗಳ ರದ್ದತಿಯು ತಮಿಳು ನಾಡು ಸರಕಾರದ ಮೀಸಲಾತಿ ಕಾನೂನಿನ ಉಲ್ಲಂಘನೆಯ ಪ್ರಕರಣವಾಗಿದ್ದಲ್ಲಿ, ಆಗ ಅರ್ಜಿದಾರರು ಈ ಬಗ್ಗೆ ಮದ್ರಾಸ್ ಕೋರ್ಟ್ನ ಮೆಟ್ಟಲೇರಬಹುದೆಂದು ಸುಪ್ರೀಂಕೋರ್ಟ್ ಸಲಹೆ ನೀಡಿತು.
ಹಿಂದಿನ ತೀರ್ಪಿನ ಪುನರಾವರ್ತನೆ:
ಈ ವರ್ಷದ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್ ನೀಡಿದ ಮಹತ್ವದ ತೀರ್ಪೊಂದರಲ್ಲಿ ಸರಕಾರಿ ಉದ್ಯೋಗಗಳ ನೇಮಕಾತಿ ಹಾಗೂ ಭಡ್ತಿಯಲ್ಲಿ ಮೀಸಲಾತಿಯು ಮೂಲಭೂತ ಹಕ್ಕಲ್ಲವೆಂದು ತಿಳಿಸಿತು. ಸರಕಾರಿ ಉದ್ಯೋಗಗಳ ನೇಮಕಾತಿ ಹಾಗೂ ಭಡ್ತಿಯಲ್ಲಿ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿಗಳಿಗೆ ಮೀಸಲಾತಿಯನ್ನು ನೀಡುವಂತೆ ಯಾವುದೇ ನ್ಯಾಯಾಲಯವು ಸರಕಾರಕ್ಕೆ ಆದೇಶ ನೀಡಲು ಸಾಧ್ಯವಿಲ್ಲವೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.