ದಿಲ್ಲಿ, ಮಹಾರಾಷ್ಟ್ರ ಸಹಿತ ಐದು ರಾಜ್ಯಗಳಲ್ಲಿ ಐಸಿಯು ಕೊಠಡಿ, ವೆಂಟಿಲೇಟರ್ಗಳ ಕೊರತೆ ಸಾಧ್ಯತೆ
ಹೊಸದಿಲ್ಲಿ, ಜೂ.12: ಕೋವಿಡ್-19 ಪಾಸಿಟಿವ್ ಪ್ರಕರಣದ ಪ್ರಮಾಣ ಅಧಿಕವಾಗುತ್ತಿರುವ ಸಮಯದಲ್ಲಿ ದೇಶದ ಸಾಂಕ್ರಾಮಿಕ ರೋಗ ವಿರುದ್ಧ ಹೋರಾಟದಲ್ಲಿ ದೊಡ್ಡ ಸಮಸ್ಯೆ ಎದುರಾಗಿದೆ. ದೇಶದಲ್ಲಿ ಒಟ್ಟಾರೆ ಸಾವಿನ ಸಂಖ್ಯೆಯ ಪ್ರಮಾಣ ಕಡಿಮೆಯಿದ್ದರೂ 69 ಜಿಲ್ಲೆಗಳಲ್ಲಿ ಸಾವಿನ ಪ್ರಮಾಣ ಅಧಿಕ ಪ್ರಮಾಣದಲ್ಲಿದೆ.
ಮಹಾರಾಷ್ಟ್ರ, ತಮಿಳುನಾಡು, ದಿಲ್ಲಿ, ಗುಜರಾತ್ ಹಾಗೂ ಉತ್ತರಪ್ರದೇಶ ಹೆಚ್ಚು ಬಾಧಿತ ಐದು ರಾಜ್ಯಗಳು ಎಂದು ಎಚ್ಚರಿಕೆ ನೀಡಲಾಗಿದೆ. ಈಗಿನ ಟ್ರೆಂಡ್ನ್ನು ಗಮನಿಸಿದರೆ ಈ ಐದು ರಾಜ್ಯಗಳು ಜೂನ್ ಹಾಗೂ ಆಗಸ್ಟ್ ಮಧ್ಯೆ ಐಸಿಯು ಹಾಸಿಗೆಗಳು ಹಾಗೂ ವೆಂಟಿಲೇಟರ್ಗಳ ಕೊರತೆಯ ಸಮಸ್ಯೆ ಎದುರಿಸಲಿವೆ.
ದಿಲ್ಲಿಯಲ್ಲಿ ಹೆಚ್ಚುತ್ತಿರುವ ಕೊರೋನ ವೈರಸ್ ಪ್ರಕರಣಗಳ ಹಿನ್ನೆಲೆಯಲ್ಲಿ ಆಡಳಿತಾರೂಢ ಎಎಪಿ ಪಕ್ಷ ಬಿಜೆಪಿ ಹಾಗೂ ಕೇಂದ್ರ ಸರಕಾರದೊಂದಿಗೆ ವಾಕ್ಸಮರ ನಡೆಸುತ್ತಿದೆ. ದಿಲ್ಲಿಯಲ್ಲಿ ಜೂನ್ 3ರಂದೇ ಐಸಿಯು ಬೆಡ್ಗಳು ಹಾಗೂ ಜೂನ್ 12ಕ್ಕೆ ವೆಂಟಿಲೇಟರ್ಗಳ ಸಮಸ್ಯೆ ಎದುರಿಸುತ್ತಿದೆ. ಜೂನ್ 25ಕ್ಕೆ ಆಕ್ಸಿಜನ್ ವ್ಯವಸ್ಥೆ ಸಹಿತ ಪ್ರತ್ಯೇಕ ಬೆಡ್ಗಳ ಸಮಸ್ಯೆಯನ್ನು ಎದುರಿಸುವ ಸಾಧ್ಯತೆಯಿದೆ.
ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ರಾಜ್ಯ ಮುಖ್ಯ ಕಾರ್ಯದರ್ಶಿಗಳು ಹಾಗೂ ಆರೋಗ್ಯ ಕಾರ್ಯದರ್ಶಿಗಳೊಂದಿಗೆ ನಡೆಸಿದ ವೀಡಿಯೊ ಕಾನ್ಫರೆನ್ಸ್ ವೇಳೆ ಐದು ರಾಜ್ಯಗಳಲ್ಲಿ ಮುಂದಿನ ದಿನಗಳಲ್ಲಿ ಐಸಿಯು ಬೆಡ್ಗಳು, ವೆಂಟಿಲೇಟರ್ಗಳ ಕೊರತೆ ಎದುರಾಗುವ ಅಂಶ ಗೊತ್ತಾಗಿದೆ.
ಮಹಾರಾಷ್ಟ್ರ ಆಗಸ್ಟ್ 8ರ ಸುಮಾರಿಗೆ ಐಸಿಯು ಬೆಡ್ಗಳು, ಜುಲೈ 27ರಂದು ವೆಂಟಿಲೇಟರ್ಗಳ ಸಮಸ್ಯೆ ಎದುರಿಸಬಹುದು. ತಮಿಳುನಾಡು ಜುಲೈ 9ರ ವೇಳೆಗೆ ಐಸಿಯು ಬೆಡ್ಗಳು ಹಾಗೂ ವೆಂಟಿಲೇಟರ್ಗಳ ಸಮಸ್ಯೆ ಎದುರಿಸುವ ಅಂದಾಜಿದೆ. ಈಗಿನ ಟ್ರೆಂಡ್ನ್ನು ಗಮನಿಸಿದರೆ ಇತರ ಐದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಹರ್ಯಾಣ, ಕರ್ನಾಟಕ, ಜಮ್ಮು-ಕಾಶ್ಮೀರ, ಮಧ್ಯಪ್ರದೇಶ ಹಾಗೂ ಪಶ್ಚಿಮಬಂಗಾಳ ಕೂಡ ಇಂತಹ ಕೊರತೆ ಎದುರಿಸಬಹುದು.
ಗುರುಗ್ರಾಮ, ಮುಂಬೈ, ಥಾಣೆ, ಪಾಲ್ಘರ್, ಜಲಗಾಂವ್, ಚೆನ್ನೈ ಹಾಗೂ ಗೌತಮಬುದ್ಧ ನಗರ ಸಹಿತ 17 ಜಿಲ್ಲೆಗಳಲ್ಲಿ ಮುಂದಿನ ಒಂದು ತಿಂಗಳಲ್ಲಿ ಐಸಿಯು ಬೆಡ್ಗಳು ಹಾಗೂ ವೆಂಟಿಲೇಟರ್ಗಳ ಕೊರತೆ ಎದುರಾಗಬಹುದು ಎಂದು ಅಂದಾಜಿಸಲಾಗಿದೆ.