ಬಿಹಾರದ ಗಡಿಯ ಬಳಿ ನೇಪಾಳಿ ಪೊಲೀಸರಿಂದ ಗುಂಡು ಹಾರಾಟ:ಓರ್ವನ ಸಾವು,ಇಬ್ಬರಿಗೆ ಗಾಯ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಜೂ.12: ಬಿಹಾರದೊಂದಿಗಿನ ಗಡಿಯ ಬಳಿ ಶುಕ್ರವಾರ ನೇಪಾಳಿ ಪೊಲೀಸರು ಗುಂಡು ಹಾರಾಟವನ್ನು ನಡೆಸಿದ್ದು,ಓರ್ವ ನಾಗರಿಕ ಮೃತಪಟ್ಟು ಇಬ್ಬರು ಗಾಯಗೊಂಡಿದ್ದಾರೆ. ಸ್ಥಳೀಯ ನಿವಾಸಿಗಳು ಮತ್ತು ನೇಪಾಳದ ಸಶಸ್ತ್ರ ಪೊಲೀಸ್ ಪಡೆಯ ನಡುವೆ ಈ ಘಟನೆ ನಡೆದಿದೆ ಎಂದು ತಿಳಿಸಿದ ಸಶಸ್ತ್ರ ಸೀಮಾ ಬಲ್(ಎಸ್ಎಸ್ಬಿ) ಐಜಿ ಸಂಜಯ ಕುಮಾರ್ ಅವರು,ಇದರಲ್ಲಿ ಎಸ್ಎಸ್ಬಿ ಭಾಗಿಯಾಗಿರಲಿಲ್ಲ ಎಂದರು.
ಬಿಹಾರದ ಸಿತಾಮಡಿ ಜಿಲ್ಲೆಯ ಭಾರತ-ನೇಪಾಳ ಗಡಿಯಲ್ಲಿ ಗುಂಡು ಹಾರಾಟ ನಡೆದಿದೆ ಎಂದು ವರದಿಗಳು ತಿಳಿಸಿದ್ದರೆ,ಘಟನೆಯು ನೇಪಾಳದ ಭೂಪ್ರದೇಶದೊಳಗೆ ನಡೆದಿದೆ. ಪರಿಸ್ಥಿತಿಯು ಈಗ ಸಹಜವಾಗಿದೆ ಎಂದು ಎಸ್ಎಸ್ಬಿ ಡಿಜಿ ಕುಮಾರ ರಾಜೇಶಚಂದ್ರ ಹೇಳಿದರು.
ಗಡಿಗೆ ಸಮೀಪದ ಪ್ರದೇಶವೊಂದನ್ನು ಪ್ರವೇಶಿಸುವ ಬಗ್ಗೆ ಸ್ಥಳೀಯ ನಿವಾಸಿಗಳು ನೇಪಾಳಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದರು. ಇದು ಹೊಯ್ಕೈ ಹಂತಕ್ಕೆ ತಲುಪಿದಾಗ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಹಿರಿಯ ಎಸ್ಎಸ್ಬಿ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಉದ್ವಿಗ್ನತೆಯನ್ನು ಶಮನಿಸಿದ್ದಾರೆ.





