ದಿಲ್ಲಿಯ ಪರಿಸ್ಥಿತಿ ಭಯಾನಕ: ಆಸ್ಪತ್ರೆಗಳ ಬಗ್ಗೆ ಸುಪ್ರೀಂಕೋರ್ಟ್ ಆಕ್ರೋಶ
ಹೊಸದಿಲ್ಲಿ, ಜೂ.12: ಕೊರೋನ ವೈರಸ್ ರೋಗಿಗಳನ್ನು ಪ್ರಾಣಿಗಳಿಗಿಂತ ಕೀಳಾಗಿ ನೋಡಲಾಗುತ್ತಿದೆ. ಕೊರೋನ ವೈರಸ್ ಪ್ರಕರಣಗಳಿಂದಾಗಿ ರಾಷ್ಟ್ರ ರಾಜಧಾನಿಯ ಪರಿಸ್ಥಿತಿ ಭಯಾನಕ ಹಾಗೂ ಕರುಣಾಜನಕವಾಗಿದೆ ಎಂದು ರಾಜ್ಯದ ಆಸ್ಪತ್ರೆಗಳ ವಿರುದ್ಧ ಸುಪ್ರೀಂಕೋರ್ಟ್ ಇಂದು ಆಕ್ರೋಶ ವ್ಯಕ್ತಪಡಿಸಿದೆ.
ದೇಶದಲ್ಲಿ ದಿಲ್ಲಿಯಲ್ಲದೆ, ಮಹಾರಾಷ್ಟ್ರ,ತಮಿಳುನಾಡು ಹಾಗೂ ಪಶ್ಚಿಮಬಂಗಾಳದಲ್ಲಿ ಪರಿಸ್ಥಿತಿ ಕೆಟ್ಟದ್ದಾಗಿದೆ ಎಂದಿರುವ ಸುಪ್ರೀಂಕೋರ್ಟ್ ನಾಲ್ಕೂ ರಾಜ್ಯಗಳು ಹಾಗೂ ಕೇಂದ್ರ ಸರಕಾರಕ್ಕೆ ಉತ್ತರ ನೀಡುವಂತೆ ತಿಳಿಸಿದೆ.
ಕೋವಿಡ್-19 ರೋಗಿಗಳನ್ನು ಪ್ರಾಣಿಗಳಿಗಿಂತ ಕೀಳಾಗಿ ನಡೆಸಿಕೊಳ್ಳಲಾಗುತ್ತಿದೆ.ಒಂದು ಪ್ರಕರಣದಲ್ಲಿ ಮೃತದೇಹ ಕಸದ ತೊಟ್ಟಿಯಲ್ಲಿ ಪತ್ತೆಯಾಗಿತ್ತು. ರೋಗಿಗಳು ಸಾಯುತ್ತಿದ್ದಾರೆ ಹಾಗೂ ಯಾರೂ ಕೂಡ ಅವರತ್ತ ನೋಡುವವರಿಲ್ಲ. ದಿಲ್ಲಿ ಸರಕಾರ ಕೋವಿಡ್-19 ಪರೀಕ್ಷೆಯನ್ನು ಕಡಿಮೆ ಮಾಡಿದ್ದಕ್ಕೆ ವಿವರಣೆ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದೆ.
ನಿಮ್ಮ ಟೆಸ್ಟಿಂಗ್ ಪ್ರತಿದಿನ 7000ರಿಂದ 5000ಕ್ಕೆ ಇಳಿದಿರುವುದೇಕೆ? ಚೆನ್ನೈ ಹಾಗೂ ಮುಂಬೈನಲ್ಲಿ ಪ್ರತಿದಿನ 16,000ರಿಂದ 17,000ಕ್ಕೂ ಅಧಿಕ ಪರೀಕ್ಷೆ ನಡೆಸಲಾಗುತ್ತಿದೆ ಎನ್ನುವುದನ್ನು ನ್ಯಾಯಾಲಯ ಬೆಟ್ಟು ಮಾಡಿದೆ.