ಗುರುಪುರ : ಮನೆಯ ಕಾಂಪೌಂಡ್ ಗೋಡೆ ಕುಸಿದು ಬಿದ್ದು ವ್ಯಕ್ತಿ ಮೃತ್ಯು
ವರ್ಷದ ಮಳೆಗಾಲಕ್ಕೆ ಮೊದಲ ಬಲಿ

ಮಂಗಳೂರು, ಜೂ.12: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷದ ಮಳೆಗಾಲದ ಮೊದಲ ಬಲಿ ಆಗಿದೆ. ಧಾರಾಕಾರ ಮಳೆಯಿಂದಾಗಿ ತನ್ನದೇ ಮನೆಯ ಕಂಪೌಂಡ್ ಗೋಡೆ ಕುಸಿದು ಗುರುಪುರದ ಮಠದಗುಡ್ಡೆ ನಿವಾಸಿ ನಾರಾಯಣ ನಾಯ್ಕ (52) ಮೃತಪಟ್ಟಿದ್ದಾರೆ.
ಶುಕ್ರವಾರ ಧಾರಾಕಾರ ಮಳೆಯಾಗುತ್ತಿದ್ದುದರಿಂದ ಮಧ್ಯಾಹ್ನ 1:30ರ ವೇಳೆಗೆ ನೀರು ಹೋಗಲು ಮನೆ ಪಕ್ಕದ ಚಿಕ್ಕ ತೋಡು ಬಿಡಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಈ ವೇಳೆ ಮಳೆಯಿಂದ ತೇವಗೊಂಡಿದ್ದ ಅವರದ್ದೇ ಮನೆಯ ಮುರಕಲ್ಲಿನ ಆಳೆತ್ತರದ ಕಂಪೌಂಡ್ ನಾರಾಯಣ ನಾಯ್ಕರ ಮೇಲೆ ಬಿದ್ದಿದೆ. ತೀವ್ರ ರಕ್ತಸ್ರಾವಗೊಂಡ ಅವರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು.
ಖಾಸಗಿ ಬಸ್ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ನಾರಾಯಣ ನಾಯ್ಕರು ಮಠದಗುಡ್ಡೆಯ ಗುಡ್ಡದಲ್ಲಿ ಈಚೆಗಷ್ಟೇ ಹೊಸ ಮನೆ ಕಟ್ಟಿದ್ದರು. ಕಲಾವಿದ ವಿ.ಜೆ. ಮಧುರಾಜ್ ಸೇರಿದಂತೆ ಇಬ್ಬರು ಮಕ್ಕಳು, ಪತ್ನಿಯೊಂದಿಗೆ ವಾಸವಾಗಿದ್ದರು.
ಮರ ಬಿದ್ದು ಮನೆಗೆ ಹಾನಿ: ಇನ್ನೊಂದು ಪ್ರಕರಣದಲ್ಲಿ ಮಂಗಳೂರು ಬೆಂಗ್ರೆಯ ಅಳಿವೆ ಬಾಗಿಲು ಎಂಬಲ್ಲಿ ಶಾರದಾ ಅಂಗಾರ ಮೆಂಡನ್ ಎಂಬವರ ಮನೆ ಮೇಲೆ ಗುರುವಾರ ತಡರಾತ್ರಿ ತೆಂಗಿನಮರ ಬಿದ್ದು ಭಾಗಶಃ ಹಾನಿಗೀಡಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಜೂ.14ರವರೆಗೆ ನಾಲ್ಕು ದಿನಗಳ ಕಾಲ ಧಾರಾಕಾರ ಮಳೆಯಾಗುವ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಶುಕ್ರವಾರ ಜಿಲ್ಲಾದ್ಯಂತ ಉತ್ತಮ ಮಳೆಯಾಗಿದೆ. ಬೆಳಗ್ಗಿನಿಂದಲೇ ಮಳೆಯ ವಾತಾವರಣವಿದ್ದು, ಹಗಲಿಡೀ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿತ್ತು. ಸಂಜೆ ಬಳಿಕ ಗಾಳಿ- ಸಿಡಿಲಿನೊಂದಿಗೆ ಕೂಡಿದ ಮಳೆಯಾಗಿದೆ. ಇನ್ನೂ ಎರಡು ದಿನಗಳ ಕಾಲ ಭಾರಿ ಮಳೆ ಸುರಿಯುವ ನಿರೀಕ್ಷೆಯಿದೆ.
ಗುರುವಾರ ಬೆಳಗ್ಗಿನಿಂದ ಶುಕ್ರವಾರ ಬೆಳಗ್ಗಿನವರೆಗೆ ದ.ಕ. ಜಿಲ್ಲೆಯಲ್ಲಿ ಸರಾಸರಿ 26.1 ಮಿ.ಮೀ. ಮಳೆಯಾಗಿದೆ. ಬಂಟ್ವಾಳದಲ್ಲಿ 26.3 ಮಿ.ಮೀ., ಬೆಳ್ತಂಗಡಿಯಲ್ಲಿ 17.9 ಮಿ.ಮೀ., ಮಂಗಳೂರಿನಲ್ಲಿ 30.3 ಮಿ.ಮೀ., ಪುತ್ತೂರಿನಲ್ಲಿ 31.3 ಮಿ.ಮೀ., ಸುಳ್ಯದಲ್ಲಿ 24.6 ಮಿ.ಮೀ. ಮಳೆ ದಾಖಲಾಗಿದೆ.









