ಮಾದಕ ವಸ್ತು ಮಾರಾಟ: ಆರು ಆರೋಪಿಗಳ ಬಂಧನ
![ಮಾದಕ ವಸ್ತು ಮಾರಾಟ: ಆರು ಆರೋಪಿಗಳ ಬಂಧನ ಮಾದಕ ವಸ್ತು ಮಾರಾಟ: ಆರು ಆರೋಪಿಗಳ ಬಂಧನ](https://www.varthabharati.in/sites/default/files/images/articles/2020/06/12/247136-1591984257.jpg)
ಬೆಂಗಳೂರು, ಜೂ.12: ಮಾದಕ ವಸ್ತು ಮಾರಾಟ ಆರೋಪ ಸಂಬಂಧ ಅಂತರರಾಜ್ಯದ ಆರು ಜನ ಆರೋಪಿಗಳನ್ನು ಬಂಧನ ಮಾಡುವಲ್ಲಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ಯಶಸ್ವಿಯಾಗಿದೆ.
ಕೇರಳ ಮೂಲದ ತಸ್ಲೀಮ್, ಅಮೀರ್, ಮನು ಥಾಮಸ್, ಹಸೀಬ್, ರಾಝಿಕ್ ಅಲಿ, ಜೋಮನ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಬಳಿ 6 ಜನ ಆರೋಪಿಗಳು ಸೇರಿಕೊಂಡು ಗಾಂಜಾ, ಎಂಡಿಎಂಎ ಮನೆಯಲ್ಲಿಟ್ಟುಕೊಂಡಿದ್ದರು. ತದನಂತರ, ವಿದ್ಯಾರ್ಥಿಗಳು, ಯುವಕರು, ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಮಾರಾಟ ಮಾಡುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಬಂಧಿತರು ಕೇರಳಕ್ಕೆ ಹೋಗಿ ಅಲ್ಲಿಂದ ಅನ್ವರ್ ಎಂಬಾತನನ್ನು ಸಂಪರ್ಕ ಮಾಡಿಕೊಂಡು ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ಮೊದಲೇ ನಿಗದಿಯಾದ ಗಿರಾಕಿಗಳಿಗೆ ಆರೋಪಿಗಳು ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದರು ಎನ್ನಲಾಗಿದೆ. ಸದ್ಯ 6 ಜನರನ್ನು ಬಂಧಿಸಿದ ಸಿಸಿಬಿ ಪೊಲೀಸರು ಆರೋಪಿಗಳ ಬಳಿಯಿಂದ 2 ಕೆ.ಜಿ ತೂಕದ ಗಾಂಜಾ, 20ಗ್ರಾಂ ಎಂಡಿಎಂಎ, 50ಎಕ್ಟೆಸಿ ಮಾತ್ರೆಗಳನ್ನು ಜಪ್ತಿ ಮಾಡಿ, ತನಿಖೆ ಮುಂದುವರಿಸಿದ್ದಾರೆ.