ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತ: ಕಾರ್ಮಿಕರನ್ನು ವಾಪಸ್ ಕರೆತರಲು ಬಿಲ್ಡರ್ಸ್ ಗಳ ಯತ್ನ ?

ಸಾಂದರ್ಭಿಕ ಚಿತ್ರ
ಬೆಂಗಳೂರು, ಜೂ.12: ಕೊರೋನ ನಿಯಂತ್ರಿಸುವ ಉದ್ದೇಶದಿಂದ ಲಾಕ್ಡೌನ್ ಘೋಷಿಸಿದ ಬಳಿಕ ಸಿಲಿಕಾನ್ ಸಿಟಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳು ಸಂಪೂರ್ಣವಾಗಿ ಸ್ಥಗಿತವಾಗಿತ್ತು. ಇದೀಗ ಲಾಕ್ಡೌನ್ ಸಡಿಲಿಕೆಯಾಗಿದ್ದು, ಸರಕಾರ ಕಾಮಗಾರಿಗಳಿಗೆ ಅನುಮತಿಯನ್ನೂ ನೀಡಲಾಗಿದೆ. ಇದೀಗ ತವರು ಸೇರಿರುವ ವಲಸೆ ಕಾರ್ಮಿಕರನ್ನು ಮರುಕರೆತರಲು ಬಿಲ್ಡರ್ ಗಳ ಸಮುದಾಯ ಮುಂದಾಗಿದೆ.
ಇಡೀ ದೇಶದಲ್ಲಿ ದಿಲ್ಲಿ ನಂತರ ಬೆಂಗಳೂರು ನಗರ ರಿಯಲ್ ಎಸ್ಟೆಟ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಸದ್ಯ ದಿಲ್ಲಿಯಲ್ಲಿ ಕೊರೋನ ಸೋಂಕಿನ ಪ್ರಮಾಣ ಹೆಚ್ಚಿರುವ ಕಾರಣ ನಿರ್ಮಾಣ ಕ್ಷೇತ್ರ ಸೊರಗಿದೆ. ಬೆಂಗಳೂರಿನಲ್ಲಿ ಸೋಂಕು ನಿಯಂತ್ರಣದಲ್ಲಿದ್ದು, ಲಾಕ್ಡೌನ್ ತೆರವಿನ ಬಳಿಕ ನಿರ್ಮಾಣ ಚಟುವಟಿಕೆ ಗರಿಗೆದರಿದೆ. ಆದರೆ, ಕುಶಲ ಕಾರ್ಮಿಕರ ಕೊರತೆ ಕಾರಣ ಕಾಮಗಾರಿಗಳು ವೇಗ ಪಡೆದುಕೊಳ್ಳುತ್ತಿಲ್ಲ. ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಬಿಲ್ಡರ್ ಗಳು ವಲಸಿಗ ಕಾರ್ಮಿಕರನ್ನು ಕರೆಸಿಕೊಳ್ಳುವಲ್ಲಿ ನಿರತವಾಗಿದ್ದಾರೆ.
ಒಂದೆರಡು ದಿನಗಳ ಹಿಂದೆ ರಾಜಧಾನಿಯ ನಿರ್ಮಾಣ ಕ್ಷೇತ್ರದ ಕೆಲ ಕಂಪನಿಗಳು ನೈರುತ್ಯರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸಿ ಬಿಹಾರದಿಂದ ಬೆಂಗಳೂರಿಗೆ ಶ್ರಮಿಕ್ ರೈಲುಗಳನ್ನು ಓಡಿಸಲು ಮನವಿ ಮಾಡಿದ್ದಾರೆ. ಇದಕ್ಕೆ ಕೆಲವೊಂದು ಮಾರ್ಗೊಪಾಯವನ್ನು ಅಧಿಕಾರಿಗಳು ಸೂಚಿಸಿದ್ದಾರೆ ಎನ್ನಲಾಗಿದೆ.
ಹಾಲಿ ಉತ್ತರಪ್ರದೇಶ, ಬಿಹಾರದಿಂದ ಕೆಲ ರೈಲುಗಳನ್ನು ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ. ಇದರ ಉಪಯೋಗವನ್ನು ಪಡೆದು ಕೆಲ ನೂರು ಸಂಖ್ಯೆಯ ಕಾರ್ಮಿಕರನ್ನು ಕರೆತರಬಹುದು ಎಂಬ ಸಲಹೆಯನ್ನು ರೈಲ್ವೆ ಅಧಿಕಾರಿಗಳು ಬಿಲ್ಡರ್ ಗಳ ಮುಂದಿಟ್ಟಿದ್ದಾರೆ. ಇದು ಕಾರ್ಯರೂಪಕ್ಕೆ ಬರಬೇಕಿದೆ.
ಲಾಕ್ಡೌನ್ ಕಾರಣದಿಂದ ರಾಜ್ಯದಲ್ಲಿದ್ದ ಐದು ಲಕ್ಷ ವಲಸೆ ಕಾರ್ಮಿಕರು ತವರಿಗೆ ವಾಪಸಾಗಿದ್ದಾರೆ. ಸುಮಾರು 3.2 ಲಕ್ಷ ಮಂದಿ ಶ್ರಮಿಕ್ ರೈಲಿನಲ್ಲಿ ತೆರಳಿದ್ದಾರೆ. ಉಳಿದವರು ಲಾಕ್ಡೌನ್ ಆರಂಭದಲ್ಲೇ ತೆರಳಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ ರಾಜ್ಯಕ್ಕೆ ಸೇರಿದವರು. ತಕ್ಷಣವೇ ವಾಪಸ್ ಬರುವವರ ಸಂಖ್ಯೆ ನಿಖರವಾಗಿ ತಿಳದುಬಂದಿಲ್ಲ.
ವಲಸಿಗ ಕಾರ್ಮಿಕರು ಜೀವನೋಪಾಯಕ್ಕೆ ಉದ್ಯೊಗ ಮಾಡಬೇಕಾದ ಅನಿವಾರ್ಯತೆ ಇದೆ. ತವರಿಗೆ ತೆರಳಿರುವವರ ಪೈಕಿ ಒಂದನೇ ಮೂರರಷ್ಟು ಕಾರ್ಮಿಕರು ವಾಪಸ್ ಬಂದಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಮುಂದುವರಿಸಬಹುದು ಎಂಬ ಲೆಕ್ಕಾಚಾರ ಬಿಲ್ಡರ್ ಗಳ ವಲಯದಲ್ಲಿ ಇದೆ. ಹೀಗಾಗಿ ವಲಸಿಗ ಕಾರ್ಮಿಕರು ವಾಪಸಾಗುವರೇ ಎಂಬ ಪ್ರಶ್ನೆ ಎದ್ದಿದೆ.
ಸದ್ಯ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ತೆರಳುವವರಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ. ಇದು ಕಾರ್ಮಿಕರ ಸಹಿತ ಎಲ್ಲರಿಗೂ ಅನ್ವಯವಾಗುತ್ತದೆ. ವಲಸೆ ಕಾರ್ಮಿಕರಿಗೆ ಕ್ವಾರಂಟೈನ್ ಅವಧಿ ಸಡಿಲಿಸುವ ಕುರಿತು ಬಿಲ್ಡರ್ ಗಳು ಸರಕಾರಕ್ಕೆ ಮನವಿ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಸರಕಾರ ಕ್ವಾರಂಟೈನ್ ಮಾರ್ಗಸೂಚಿಯನ್ನು ಸಡಿಲಿಸಿದರೆ ಕಾರ್ಮಿಕರು ವಾಪಸಾಗಲು ಇಚ್ಛಿಸುತ್ತಾರೆ. ಎಲ್ಲ ಕಾರ್ಮಿಕರ ಆರೋಗ್ಯ ಸುರಕ್ಷತೆ, ಕೆಲಸ ಸ್ಥಳದಲ್ಲಿ ಸ್ವಚ್ಛತೆ, ನೈರ್ಮಲ್ಯಕ್ಕೆ ಅಧಿಕ ಆದ್ಯತೆ ನೀಡಲು ನಿರ್ಮಾಣ ಕಂಪನಿಗಳು ಬದ್ಧವಾಗಿವೆ ಎಂದು ಕ್ರೆಡೈ ಬೆಂಗಳೂರು ವಿಭಾಗದ ಕಿಶೋರ್ ಜೈನ್ ಹೇಳಿದ್ದಾರೆ.







