ನಕಲಿ ದಾಖಲೆ ಸೃಷ್ಟಿಸಿ ಬಿಡಿಎ ನಿವೇಶನಗಳ ಮಾರಾಟ ಆರೋಪ: ಪ್ರಕರಣ ದಾಖಲು
ಬೆಂಗಳೂರು, ಜೂ.12: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಹೆಸರನ್ನು ದುರುಪಯೋಗಪಡಿಸಿಕೊಂಡು ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿನ ನಿವೇಶನಗಳಿಗೆ ನಕಲಿ ಹಕ್ಕು ಪತ್ರಗಳನ್ನು ಸೃಷ್ಟಿಸಿ ಸಾರ್ವಜನಿಕರಿಗೆ ಹಂಚಿಕೆ ಮಾಡುತ್ತಿದ್ದ ಜಾಲವೊಂದನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಉತ್ತರ ಕರ್ನಾಟಕ ಪ್ರದೇಶ ರೈತ ಸಂಘದ ರಾಜ್ಯಾಧ್ಯಕ್ಷ ವಿಜಯಾನಂದಸ್ವಾಮಿ ಎಂಬುವನು ಬೆಂಗಳೂರು ಮೂಲದ ರಮೇಶ್ ಎಂಬಾತನೊಂದಿಗೆ ಸೇರಿಕೊಂಡು, ತನ್ನ ಸಂಸ್ಥೆಯ ಮೂಲಕ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಬಿಡಿಎ ರಚಿಸಿರುವ ನಿವೇಶನಗಳನ್ನು ರಿಯಾಯಿತಿ ದರದಲ್ಲಿ ಹಂಚಿಕೆ ಮಾಡಿಸಿಕೊಡುತ್ತೇನೆಂದು ನಂಬಿಸಿ, ಪ್ರತಿಯೊಬ್ಬರಿಂದ 15 ಸಾವಿರ ರೂ. ಪಡೆದುಕೊಂಡು, 1 ಸಾವಿರ ಜನರನ್ನು ಸದಸ್ಯರನ್ನಾಗಿ ನೊಂದಾಯಿಸಿಕೊಂಡಿದ್ದಾರೆ ಎಂದು ಬಿಡಿಎ ಆಯುಕ್ತರು ಪತ್ರಿಕಾಗೋಷ್ಠಿಯಲ್ಲಿ ಈ ವಿವರಣೆ ನೀಡಿದ್ದಾರೆ.
ಬಿಡಿಎ ಹೆಸರಿನಲ್ಲಿ ನಕಲಿಯಾಗಿ ತಯಾರಿಸಿದ ನಿವೇಶನದ ಹಂಚಿಕೆ ಹಕ್ಕು ಪತ್ರದಲ್ಲಿ ಬಿಡಿಎ ನಕಲಿ ರಬ್ಬರ್ ಸ್ಟಾಂಪ್ ಹಾಕಿ, ಬಿಡಿಎ ಆಯುಕ್ತರ ನಕಲಿ ಸಹಿಯನ್ನು ಮಾಡಿ, ಈಗಾಗಲೇ 50ಕ್ಕೂ ಹೆಚ್ಚು ಜನರಿಗೆ ನಿವೇಶನದ ಹಕ್ಕು ಪತ್ರಗಳನ್ನು ನೀಡಿ 50 ಸಾವಿರ ರೂ.ನಿಂದ 3 ಲಕ್ಷ ರೂ.ವರೆಗೆ ಹಣವನ್ನು ವಸೂಲಿ ಮಾಡಿಕೊಂಡು ಸಾರ್ವಜನಿಕರಿಗೆ ವಂಚನೆ ಮಾಡಿದ್ದಾರೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಸುಮಾರು 3 ಸಾವಿರ ಜನರಿಗೆ ಸದಸ್ಯತ್ವವನ್ನು ಮಾಡಿಕೊಂಡು, ನಿವೇಶನದ ನಕಲಿ ಹಕ್ಕು ಪತ್ರಗಳನ್ನು ವಿತರಿಸುವ ಯೋಜನೆ ಹೊಂದಲಾಗಿತ್ತು ಎಂದು ಒಪ್ಪಿಕೊಂಡಿದ್ದಾನೆ. ಹೀಗಾಗಿ, ಆರೋಪಿಯ ವಿರುದ್ಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರಕರಣದ ಹಿನ್ನೆಲೆ: 3 ಲಕ್ಷ ರೂ.ಪಾವತಿಸಿ, ಒಟ್ಟು ಆರು ನಿವೇಶನದ ನಕಲಿ ಹಕ್ಕು ಪತ್ರಗಳನ್ನು ಪಡೆದಿದ್ದ ವ್ಯಕ್ತಿಯೊಬ್ಬರು, ಹಕ್ಕು ಪತ್ರದ ಬಗ್ಗೆ ಸ್ಪಷ್ಟತೆ ತಿಳಿಯಲು ಬಿಡಿಎಗೆ ಭೇಟಿ ನೀಡಿ, ಮಾಹಿತಿ ಪಡೆದಿದ್ದರು. ಈ ಬಗ್ಗೆ ತಕ್ಷಣವೇ ಜಾಗೃತಗೊಂಡ ಉಪ ಕಾರ್ಯದರ್ಶಿ-1ರವರು ಈ ವಿಷಯವನ್ನು ಆಯುಕ್ತ ಡಾ.ಎಚ್.ಆರ್.ಮಹದೇವ್ ಅವರ ಗಮನಕ್ಕೆ ತಂದಿದ್ದು, ಬಿಡಿಎ ಜಾಗೃತ ದಳದ ಅಧಿಕಾರಿಗಳು ಆರೋಪಿ ವಿಜಯಾನಂದಸ್ವಾಮಿ ನಡೆಸುತ್ತಿದ್ದ ಕಚೇರಿ ಮೇಲೆ ದಾಳಿ ನಡೆಸಿ, ನಕಲಿ ಹಂಚಿಕೆ ಪತ್ರ, ಮೊಹರುಗಳು, ರಬ್ಬರ್ ಸ್ಟಾಂಪ್ ವಶಪಡಿಸಿಕೊಂಡು, ವಿಜಯಾನಂದಸ್ವಾಮಿಯನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ವಿಜಯಾನಂದಸ್ವಾಮಿ ಅವರ ತಂಡದವರಿಂದ ವಂಚನೆಗೆ ಒಳಗಾದವರು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಲು ಸೂಚಿಸಲಾಗಿದೆ. ಇಂತಹ ವಂಚನೆ ಪ್ರಕರಣಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಆಯುಕ್ತರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.