ಬಜ್ಪೆ ಜಕ್ರಿ ಬ್ಯಾರಿ ಬಡಾವಣೆಯ ನಾಮಫಲಕ ಅನಾವರಣ

ಮಂಗಳೂರು, ಜೂ.13: ಬಜ್ಪೆ ಗ್ರಾಪಂ ವ್ಯಾಪ್ತಿಯಲ್ಲಿರುವ ‘ಬಜ್ಪೆ ಜಕ್ರಿ ಬ್ಯಾರಿ ಬಡಾವಣೆ’ಯ ನಾಮಫಲಕ ಅನಾವರಣವು ಶುಕ್ರವಾರ ಬಜ್ಪೆ ಜಕ್ರಿ ಬ್ಯಾರಿಯ ಕಿರಿಯ ಪುತ್ರ ಮಾಜಿ ರಾಜ್ಯಸಭಾ ಸದಸ್ಯ ಹಾಜಿ ಬಿ.ಇಬ್ರಾಹೀಂ ಅನಾವರಣಗೊಳಿಸಿದರು.
ಈ ಸಂದರ್ಭ ಗ್ರಾಪಂ ಸದಸ್ಯರಾದ ಶಾಹುಲ್ ಹಮೀದ್, ಸುರೇಂದರ್, ಜಮಾಅತಿನ ಅಧ್ಯಕ್ಷ ಹಾಜಿ ಬಿ. ಮುಹಮ್ಮದ್, ಕಾರ್ಯದರ್ಶಿ ಹಾಜಿ ಅಬ್ದುಲ್ ಸಲಾಂ, ನಿಸ್ಸಾರ್ ಫಕೀರ್ ಮುಹಮ್ಮದ್, ಶೇಖ್ ಶರೀಫ್, ಮಸೀದಿಯ ಖತೀಬ್, ಮದ್ರಸ ಸಮಿತಿಯ ಅಧ್ಯಕ್ಷ ಶರೀಫ್, ಕಾರ್ಯದರ್ಶಿ ಮುಹಮ್ಮದ್ ಹಾಗೂ ಜಮಾಅತಿನ ಸದಸ್ಯರು ಉಪಸ್ಥಿತರಿದ್ದರು,
ಕೊಡುಗೈ ದಾನಿಯಾಗಿದ್ದ ಬಜ್ಪೆ ಜಕ್ರಿ ಬ್ಯಾರಿ ಸುಮಾರು 100 ವರ್ಷಗಳ ಹಿಂದೆ ತನ್ನ 5.14 ಎಕರೆ ಸ್ವಂತ ಜಮೀನಿನಲ್ಲಿ ತನ್ನ ಸ್ವಂತ ಖರ್ಚಿನಿಂದಲೇ ಮಸೀದಿಯನ್ನು ನಿರ್ಮಿಸಿದ್ದರು. ಅದಕ್ಕೆ ‘ಬಜ್ಪೆ ಜಕ್ರಿ ಬ್ಯಾರಿ ಬದ್ರ್ ಮಸೀದಿ’ ಎಂದು ನಾಮಕರಣ ಮಾಡಲಾಗಿತ್ತು. ಈ ಮಸೀದಿಯು ರಾಜ್ಯ ವಕ್ಫ್ ಬೋರ್ಡಿನಲ್ಲಿ ನೋಂದಣಿಯೂ ಆಗಿದೆ. ಇತ್ತೀಚೆಗೆ ಮಸೀದಿಯ ಆಡಳಿತ ಮಂಡಳಿಯು ಆ ಜಾಗವನ್ನು ಬಡಾವಣೆ ಮಾಡಿ ಅದನ್ನು ಆರ್ಥಿಕವಾಗಿ ಹಿಂದುಳಿದ ಮುಸ್ಲಿಂ ಸಮುದಾಯದವರಿಗೆ ಹಂಚಿಕೆ ಮಾಡಿತ್ತು. ಅಲ್ಲದೆ ಈ ಜಾಗದಲ್ಲಿ ಸುಮಾರು 75ಕ್ಕಿಂತಲೂ ಹೆಚ್ಚು ಮುಸ್ಳಿಂ ಸಮುದಾಯಕ್ಕೆ ಸೇರಿದ ಮನೆಗಳು ನಿರ್ಮಾಣವಾಗಿದೆ. ಈ ಬಡಾವಣೆಯನ್ನು ಬಜ್ಪೆಜಕ್ರಿ ಬ್ಯಾರಿ ಬಡಾವಣೆ ಎಂದು ನಾಮಕರಣ ಮಾಡಲು ಮಸೀದಿಯ ಆಡಳಿತ ಮಂಡಳಿಯು ಬಜ್ಪೆ ಗ್ರಾಪಂಗೆ ಮನವಿ ಸಲ್ಲಿಸಿತ್ತು. ಅದರಂತೆ ಗ್ರಾಪಂ ಆಡಳಿತವು ನಿರ್ಣಯ ಕೈಗೊಂಡ ಮೇರೆಗೆ ‘ಬಜ್ಪೆ ಜಕ್ರಿ ಬ್ಯಾರಿ ಬಡಾವಣೆ’ಯ ನಾಮಫಲಕ ಅನಾವರಣಗೊಳಿಸಲಾಯಿತು.







