ಬಾಗಲಕೋಟೆ: ಯುವಕನ ಕೊಲೆ ಪ್ರಕರಣ; ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಸಾಂದರ್ಭಿಕ ಚಿತ್ರ
ಬಾಗಲಕೋಟೆ, ಜೂ.2: ಪ್ರೀತಿಸುವಂತೆ ಯುವತಿಯ ಬೆನ್ನು ಬಿದ್ದಿದ್ದ ಯುವಕನ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಗೈದ ಐವರು ಆರೋಪಿಗಳಿಗೆ ಜಮಖಂಡಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.
ಜೊತೆಗೆ 52 ಸಾವಿರ ರೂಪಾಯಿ ದಂಡ ವಿಧಿಸಿದ್ದು, ಮೃತನ ಕುಟುಂಬದವರಿಗೆ 2.5 ಲಕ್ಷ ನೀಡಲು ನ್ಯಾಯಾಧೀಶೆ ಎ.ಕೆ.ನವೀನಕುಮಾರಿ ಅವರಿದ್ದ ನ್ಯಾಯಪೀಠ ಆದೇಶಿಸಿದೆ. ಸರಕಾರಿ ಅಭಿಯೋಜಕ ವಿ.ಜಿ.ಹೆಬಸೂರ ಅವರು ವಾದ ಮಂಡಿಸಿದ್ದರು.
ಪ್ರಕರಣವೇನು: 2017ರ ಡಿಸೆಂಬರ್ 7ರಂದು ರಾತ್ರಿ 10 ಗಂಟೆಗೆ ಜಿಲ್ಲೆಯ ಜಮಖಂಡಿ ತಾಲೂಕು ವ್ಯಾಪ್ತಿಯ 22 ವರ್ಷದ ಯುವಕ ಸದಾಶಿವನನ್ನು ಕೊಲೆ ಮಾಡಲಾಗಿತ್ತು.
ಆರೋಪಿಗಳ ತಂಗಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಸದಾಶಿವನನ್ನು ಆಕೆಯ ಸಹೋದರರಾದ ದುಂಡಪ್ಪ ಹಲಗಲಿ, ಸಿದ್ದಪ್ಪ ಹಲಗಲಿ ಅವರ ಜೊತೆಗೆ ರಾಜು ಕಲ್ಲೊಳ್ಳಿ, ಹನುಮಂತ ಕಲ್ಲೊಳ್ಳಿ, ಮಂಜುನಾಥ ಗೊಂಗಾಗೋಳ ಸೇರಿ ಕೊಲೆಗೈದಿದ್ದರು. ಘಟನೆ ಸಂಬಂಧ ಮೃತ ಸದಾಶಿವನ ಸಹೋದರ ಕರೆಪ್ಪ ಅವರು ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು.