ರಾಜ್ಯದಲ್ಲಿ ಒಂದೇ ದಿನ 80ಕ್ಕೂ ಹೆಚ್ಚು ಮಕ್ಕಳು ಸೇರಿ 308 ಮಂದಿಗೆ ಕೊರೋನ ಪಾಸಿಟಿವ್
ಸೋಂಕಿಗೆ ಮತ್ತೆ ಮೂವರು ಬಲಿ: ಸೋಂಕಿತರ ಸಂಖ್ಯೆ 6,824ಕ್ಕೆ ಏರಿಕೆ

ಬೆಂಗಳೂರು, ಜೂ.13: ಕರ್ನಾಟಕದಲ್ಲಿ ಒಂದೇ ದಿನ 80ಕ್ಕೂ ಹೆಚ್ಚು ಮಕ್ಕಳು ಸೇರಿ 308 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 6,824ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಎರಡು ಮತ್ತು ಧಾರವಾಡ ಜಿಲ್ಲೆಯಲ್ಲಿ ಒಂದು ಸಾವು ಸಂಭವಿಸಿದ್ದು, ಒಟ್ಟು ಸಾವಿನ ಸಂಖ್ಯೆ 81ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇಂದು ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ಶುಕ್ರವಾರ ಸಂಜೆ 5 ಗಂಟೆಯಿಂದ ಶನಿವಾರ ಸಂಜೆ 5 ಗಂಟೆವರೆಗೆ ಮೂರು ಸಾವು, 308 ಕೋವಿಡ್ ಪ್ರಕರಣಗಳು ಪಾಸಿಟಿವ್ ಬಂದಿರುವುದಾಗಿ ಮಾಹಿತಿ ನೀಡಲಾಗಿದೆ.
ಬೆಂಗಳೂರು ನಗರ ಜಿಲ್ಲೆಯ23 ವರ್ಷದ ಯುವಕನೊಬ್ಬ ಜ್ವರ, ವಾಂತಿ ಮತ್ತು ತಲೆನೋವಿನಿಂದಾಗಿ ಜೂ.9ರಂದು ಆಸ್ಪತ್ರೆಗೆ ದಾಖಲಾಗಿದ್ದ. ಜೂ.12 ರಂದು ಮೃತಪಟ್ಟಿದ್ದಾನೆ. ಬೆಂಗಳೂರು ನಗರ ಜಿಲ್ಲೆಯ 62 ವರ್ಷದ ಪುರುಷರೊಬ್ಬರು ಅನಾರೋಗ್ಯದ ಹಿನ್ನಲೆ ಜೂ.11 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜೂ.13 ರಂದು ಮೃತಪಟ್ಟಿದ್ದಾರೆ.
ಧಾರವಾಡ ಜಿಲ್ಲೆಯ 70 ವರ್ಷದ ಪುರುಷರೊಬ್ಬರು ಉಸಿರಾಟದ ತೊಂದರೆಯಿಂದ ಜೂ.9 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜೂ.12 ರಂದು ಮೃತಪಟ್ಟಿದ್ದಾರೆ.
ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಕಲಬುರಗಿ 67, ಯಾದಗಿರಿ 52, ಬೀದರ್ 42, ಬೆಂಗಳೂರು ನಗರ 31, ದಕ್ಷಿಣ ಕನ್ನಡ 30, ಧಾರವಾಡ 20, ಉಡುಪಿ 14, ಹಾಸನ ಮತ್ತು ಬಳ್ಳಾರಿಯಲ್ಲಿ ತಲಾ 11, ವಿಜಯಪುರ 6, ರಾಯಚೂರು ಮತ್ತು ಉತ್ತರ ಕನ್ನಡದಲ್ಲಿ ತಲಾ 5, ಕೋಲಾರ 4, ದಾವಣಗೆರೆ 3, ಮಂಡ್ಯ ಮತ್ತು ಹಾವೇರಿಯಲ್ಲಿ ತಲಾ 2, ರಾಮನಗರ, ಮೈಸೂರು ಮತ್ತು ಬಾಗಲಕೋಟೆಯಲ್ಲಿ ತಲಾ ಒಂದು ಪ್ರಕರಣ ಪಾಸಿಟಿವ್ ಬಂದಿದೆ.
ಒಟ್ಟಾರೆ ರಾಜ್ಯದಲ್ಲಿ 6,824 ಕೊರೋನ ಸೋಂಕಿತರ ಪೈಕಿ 3,648 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 209 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 81 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 3,092 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.







