ನೇಪಾಳದಲ್ಲಿ ಬಂಧನದಲ್ಲಿದ್ದ ಭಾರತೀಯನ ಬಿಡುಗಡೆ: ಹತ್ಯೆಗೀಡಾದ ಯುವಕನ ಮೃತದೇಹ ವಾಪಸ್
ಹೊಸದಿಲ್ಲಿ,ಜೂ.13: ಬಿಹಾರದ ಸಿತಾಮಡಿ ಜಿಲ್ಲೆಯ ಭಾರತ-ನೇಪಾಳ ಗಡಿಯಲ್ಲಿ ಉದ್ವಿಗ್ನತೆಗೆ ಕಾರಣವಾಗಿದ್ದ ವಾಗ್ವಾದದ ಸಂದರ್ಭದಲ್ಲಿ ತನ್ನ ಸಿಬ್ಬಂದಿಯೋರ್ವನ ಬಂದೂಕನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಭಾರತೀಯ ಪ್ರಜೆಯನ್ನು ನೇಪಾಳದ ಗಡಿ ರಕ್ಷಣಾ ಪಡೆಯು ಶನಿವಾರ ಬಿಡುಗಡೆಗೊಳಿಸಿದೆ. ವಾಗ್ವಾದದ ಸಂದರ್ಭದಲ್ಲಿ ತನ್ನ ಗುಂಡೇಟಿನಿಂದ ಮೃತಪಟ್ಟಿದ್ದ ಬಿಕೇಶ ಕುಮಾರ್ ರಾಯ್(27) ಮೃತದೇಹವನ್ನೂ ನೇಪಾಳದ ಸಶಸ್ತ್ರ ಪೊಲೀಸ್ ಪಡೆ (ಎನ್ಎಪಿಎಫ್)ಯು ಭಾರತಕ್ಕೆ ಮರಳಿಸಿದೆ.
ಶುಕ್ರವಾರ ನಡೆದಿದ್ದ ಈ ಘಟನೆಯಲ್ಲಿ ಎನ್ಎಪಿಎಫ್ ಗುಂಪಿನ ಮೇಲೆ ಗುಂಡಿನ ದಾಳಿ ನಡೆಸಿದಾಗ ರಾಯ್ ಮೃತಪಟ್ಟು,ಇತರ ಇಬ್ಬರು ಗಾಯಗೊಂಡಿದ್ದರು. ಈ ಸಂದರ್ಭದಲ್ಲಿ ಲಗನ್ ಯಾದವ(45)ನನ್ನು ನೇಪಾಳಿ ಪಡೆಯು ಬಂಧಿಸಿತ್ತು.
ಯಾದವರನ್ನು ಬಿಡುಗಡೆಗೊಳಿಸಿ ನಾರಾಯಣಪುರ ಗಡಿ ಕೇಂದ್ರದ ಬಳಿ ಭಾರತೀಯ ಭದ್ರತಾ ಪಡೆಗಳಿಗೆ ಒಪ್ಪಿಸಲಾಗಿದೆ, ಇದೇ ವೇಳೆ ಮೃತದೇಹವನ್ನೂ ಹಸ್ತಾಂತರಿಸಲಾಗಿದೆ ಎಂದು ನೇಪಾಳದ ಮುಖ್ಯ ಜಿಲ್ಲಾ ಅಧಿಕಾರಿ ಮೋಹನ ಬಹಾದುರ್ ಅವರನ್ನು ಉಲ್ಲೇಖಿಸಿ ನೇಪಾಳದ ‘ಮೈ ರಿಪಬ್ಲಿಕಾ’ ದೈನಿಕವು ವರದಿ ಮಾಡಿವೆ. ಸ್ಥಳೀಯ ಆಡಳಿತ,ನೇಪಾಳ ಮತ್ತು ಭಾರತದ ಭದ್ರತಾ ಪಡೆಗಳು ಶನಿವಾರ ಬೆಳಿಗ್ಗೆ ಒಪ್ಪಂದವೊಂದಕ್ಕೆ ಅಂಕಿತ ಹಾಕಿವೆ ಎಂದೂ ಅದು ತಿಳಿಸಿದೆ.
ಇದಕ್ಕೂ ಮುನ್ನ ನೇಪಾಳ ಮತ್ತು ಭಾರತದ ಭದ್ರತಾ ಸಿಬ್ಬಂದಿಗಳು ಗಡಿಯುದ್ದಕ್ಕೂ ಭದ್ರತೆಯನ್ನು ಹೆಚ್ಚಿಸಿದ್ದು,ಶುಕ್ರವಾರ ರಾತ್ರಿಯಿಡೀ ಘಟನಾ ಸ್ಥಳದಲ್ಲಿಯೇ ಕಳೆದಿದ್ದವು. ಹಲವಾರು ಸ್ಥಳೀಯರು ಮತ್ತು ಸರಕಾರದ ಪ್ರತಿನಿಧಿಗಳೂ ಉಪಸ್ಥಿತರಿದ್ದರು.
ಭಾರತೀಯರ ಗುಂಪು ತನ್ನ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ನಡೆಸಿತ್ತು ಎಂದು ಎನ್ಎಪಿಎಫ್ ಆರೋಪಿಸಿದೆ.
ಗಡಿಗೆ ಹೊಂದಿಕೊಂಡಿರುವ ಎರಡು ಕಡೆಗಳ ಜಿಲ್ಲೆಗಳ ಜನರು ಪರಸ್ಪರ ಸಂಪರ್ಕ ಹೊಂದಿದ್ದಾರೆ. ಈ ಪ್ರದೇಶದಲ್ಲಿ ಯಾವುದೇ ಗಡಿ ಬೇಲಿ ಇಲ್ಲದಿರುವುದರಿಂದ ಜನರು ತಮ್ಮ ಕುಟುಂಬ ಸದಸ್ಯರನ್ನು ಭೇಟಿಯಾಗಲು ಮುಕ್ತವಾಗಿ ತಿರುಗಾಡುತ್ತಿರುತ್ತಾರೆ.
ಭಾರತ ಮತ್ತು ನೇಪಾಳ ನಡುವೆ ಸೃಷ್ಟಿಯಾಗಿರುವ ಗಡಿ ವಿವಾದದ ನಡುವೆಯೇ ಈ ಘಟನೆ ನಡೆದಿದೆ.
ನೇಪಾಳವು ಲಿಪುಲೇಖ್,ಕಾಲಾಪಾನಿ ಮತ್ತು ಲಿಂಪಿಯಾಧುರಾ ಪ್ರದೇಶಗಳ ಮೇಲೆ ಹಕ್ಕು ಸಾಧಿಸಿ ತನ್ನ ನೂತನ ರಾಜಕೀಯ ಭೂಪಟವನ್ನು ಇತ್ತೀಚಿಗೆ ಬಿಡುಗಡೆಗೊಳಿಸಿದೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಭಾರತವು ಇವು ಉತ್ತರಾಖಂಡ ರಾಜ್ಯದ ಭಾಗಗಳಾಗಿವೆ ಎಂದು ಪ್ರತಿಪಾದಿಸಿದೆ.