ಸಾಕು ನಾಯಿಗಾಗಿ ಮುಂಬೈನಿಂದ ಬೆಂಗಳೂರಿಗೆ ಬಂದ ಉದ್ಯಮಿ
ಬೆಂಗಳೂರು, ಜೂ.14: ನಗರದಲ್ಲೇ ಬಿಟ್ಟು ಹೋಗಿದ್ದ ಸಾಕು ನಾಯಿಯನ್ನು ಕರೆದುಕೊಂಡು ಹೋಗಲು ಕೈಗಾರಿಕೋದ್ಯಮಿಯೊಬ್ಬರು ಮುಂಬೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದು ವಾಪಸ್ಸಾಗಿದ್ದಾರೆ.
ತಮ್ಮ ಸಾಕುನಾಯಿಯನ್ನು ಮುಂಬೈಗೆ ಕರೆದೊಯ್ಯಲು ಕೈಗಾರಿಕೋದ್ಯಮಿಯೊಬ್ಬರು ತಮ್ಮ ಕುಟುಂಬದ ಇನ್ನಿಬ್ಬರು ಸದಸ್ಯರೊಂದಿಗೆ ಬಾಡಿಗೆ ವಿಮಾನದಲ್ಲಿ ಬೆಂಗಳೂರಿಗೆ ಬಂದು ಎರಡು ಗಂಟೆ ಉಳಿದುಕೊಂಡಿದ್ದ ಅವರು ತಮ್ಮ ನಾಯಿಯೊಂದಿಗೆ ಅದೇ ವಿಮಾನದಲ್ಲಿ ಮುಂಬೈಗೆ ಮರಳಿದ್ದಾರೆ.
ಮುಂಬೈನಿಂದ ಖಾಸಗಿ ವಿಮಾನದಲ್ಲಿ ಬಂದ ಕೈಗಾರಿಕೋದ್ಯಮಿ ಹಾಗೂ ಅವರ ಕುಟುಂಬ ಸದಸ್ಯರನ್ನು ವಿಮಾನ ನಿಲ್ದಾಣದ ಸಿಬ್ಬಂದಿ ತಡೆದಿದ್ದರು. ಆದರೆ, ಅವರು ಕೊರೋನ ಪರೀಕ್ಷೆ ಮಾಡಿಸಿಕೊಂಡೇ ಬಂದಿದ್ದರು. ಅವರು ತಂದಿದ್ದ ವರದಿಯಲ್ಲಿ ನೆಗೆಟಿವ್ ಎಂದಿತ್ತಾದರೂ ಮಾನ್ಯತೆ ಹೊಂದಿದ ಕಡೆ ಪರೀಕ್ಷೆ ಮಾಡಿಸದೇ ಇದ್ದುದು ಗೊಂದಲಕ್ಕೆ ಕಾರಣವಾಗಿತ್ತು. ಈ ವಿಷಯವಾಗಿ ಆರೋಗ್ಯ ಇಲಾಖೆ ಈ ವಿಷಯವಾಗಿ ಸಂಬಂಧಪಟ್ಟ ಪ್ರಯೋಗಾಲಯದಿಂದ ಮಾಹಿತಿ ಪಡೆದುಕೊಂಡಾಗ ವರದಿ ನೈಜವಾದುದು ಎಂದು ಗೊತ್ತಾದ್ದರಿಂದ ಕೈಗಾರಿಕೋದ್ಯಮಿ ಮುಂಬೈಗೆ ತೆರಳಲು ಅವಕಾಶ ಮಾಡಿಕೊಡಲಾಗಿದೆ ಎಂದು ಗೊತ್ತಾಗಿದೆ.