ಗೋವಾದ ಬಿಜೆಪಿ ಸರಕಾರಕ್ಕೆ ಬೆಂಬಲ ನೀಡಿದ್ದು ನನ್ನ ಅತಿ ದೊಡ್ಡ ತಪ್ಪು: ಮಾಜಿ ಡಿಸಿಎಂ ವಿಜಯ್ ಸರ್ದೇಸಾಯಿ
ಪಣಜಿ : ಕಳೆದ ವರ್ಷ ಮನೋಹರ್ ಪಾರಿಕ್ಕರ್ ಅವರ ನಿಧನಾನಂತರ ಪ್ರಮೋದ್ ಸಾವಂತ್ ನೇತೃತ್ವದ ರಾಜ್ಯ ಸರಕಾರಕ್ಕೆ ಬೆಂಬಲ ನೀಡಿದ್ದು ತಾವು ಮಾಡಿದ ‘ರಾಜಕೀಯ ತಪ್ಪು' ಎಂದು ಗೋವಾದ ಮಾಜಿ ಉಪಮುಖ್ಯಮಂತ್ರಿ ಹಾಗೂ ಗೋವಾ ಫಾರ್ವರ್ಡ್ ಪಾರ್ಟಿ ಅಧ್ಯಕ್ಷ ವಿಜಯ್ ಸರ್ದೇಸಾಯಿ ಹೇಳಿದ್ದಾರೆ.
ದಕ್ಷಿಣ ಗೋವಾ ಜಿಲ್ಲೆಯಲ್ಲಿನ ತಮ್ಮ ಫಟೋರ್ಡ ಕ್ಷೇತ್ರದಲ್ಲಿ ಸಭೆಯೊಂದನ್ನುದ್ದೇಶಿಸಿ ಮಾತನಾಡಿದ ಅವರು, ತಾವು ಮಾಡಿದ `ತಪ್ಪಿಗೆ' ಜನತೆಯ ಕ್ಷಮೆ ಕೇಳಿದರಲ್ಲದೆ ಬಿಜೆಪಿ ಸರಕಾರ “ಅದಕ್ಷತೆ, ಪಾರದರ್ಶಕತೆಯ ಕೊರತೆಯಿಂದ ಕೂಡಿದೆ'' ಹಾಗೂ ಆಡಳಿತಾತ್ಮಕವಾಗಿ ಯಾವುದೇ ಹೊಣೆಗಾರಿಕೆಯಿಲ್ಲದ ಸರಕಾರವಾಗಿದೆ ಎಂದು ಆರೋಪಿಸಿದ್ದಾರೆ.
“ಇಂತಹ ಒಂದು ಸರಕಾರ ಮುಂದೆ ರಚಿಸಲು ಬಿಡುವುದಿಲ್ಲ. ಪಾರಿಕ್ಕರ್ ಅವರ ನಿಧನಾನಂತರ ಬಿಜೆಪಿ ನಮಗೆ ಮುಗಿದ ಅಧ್ಯಾಯ. ಭವಿಷ್ಯದಲ್ಲಿ ಬಿಜೆಪಿಗೆ ಈ ರಾಜ್ಯವನ್ನು ಆಳಲು ನಾವು ಅವಕಾಶ ನೀಡುವುದಿಲ್ಲ'' ಎಂದು ಅವರು ಹೇಳಿದರು.
“ಪಾರಿಕ್ಕರ್ ಅವರ ನಿಧನಾನಂತರ ಸರಕಾರದಿಂದ ಹೊರಬೀಳದೆ ನಾನು ನನ್ನ ರಾಜಕೀಯ ವೃತ್ತಿಯಲ್ಲಿ ಮಾಡಿದ ಈ ದೊಡ್ಡ ರಾಜಕೀಯ ತಪ್ಪಿಗಾಗಿ ಗೋವಾ ಜನರ ಕ್ಷಮೆ ಕೇಳುತ್ತೇನೆ. ನಮ್ಮ ತಪ್ಪಿನಿಂದಾಗಿ ಗೋವಾದ ಜನರು ಕಷ್ಟ ಪಡುತ್ತಿದ್ದಾರೆ. ಇದಕ್ಕಾಗಿ ಪ್ರಾಯಶ್ಚಿತ್ತ ಮಾಡಲು ಸಿದ್ಧ'' ಎಂದು ಅವರು ಹೇಳಿದರು.