ಸೀಲ್ಡೌನ್ ಮನೆಗಳ ಬಗ್ಗೆ ನಗರಸಭೆ ಸದಸ್ಯರಿಗೆ ಮಾಹಿತಿ ನೀಡಿ : ಅಧಿಕಾರಿಗಳಿಗೆ ಶಾಸಕ ರಘುಪತಿ ಭಟ್ ಸೂಚನೆ

ಉಡುಪಿ, ಜೂ.15: ಹೊರರಾಜ್ಯಗಳಿಂದ ಬಂದು ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಹೋಂ ಕ್ವಾರಂಟೈನ್ನಲ್ಲಿ ಇರುವವರ ಬಗ್ಗೆ ಆಯಾ ವಾರ್ಡ್ಗಳ ನಗರಸಭಾ ಸದಸ್ಯರಿಗೆ ಮಾಹಿತಿ ನೀಡಿ, ಅವರ ಜೊತೆಯಾಗಿ ಅಧಿಕಾರಿಗಳು ಕೋವಿಡ್-19 ನಿಯಂತ್ರಣಕ್ಕೆ ಶ್ರಮಿಸಬೇಕು ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಸೂಚಿಸಿದ್ದಾರೆ.
ಉಡುಪಿ ನಗರಸಭೆಯ ಕುಂದುಕೊರತೆಗಳ ಕುರಿತು ಸೋಮವಾರ ಉಡುಪಿ ನಗರಸಭೆಯ ಸತ್ಯಮೂರ್ತಿ ಸ್ಮಾರಕ ಸಭಾಭವನದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತಾಡುತಿದ್ದರು.
ಹೊರ ರಾಜ್ಯಗಳಿಂದ ಉಡುಪಿ ಜಿಲ್ಲೆಗೆ ಹಲವು ಮಂದಿ ಆಗಮಿಸುತ್ತಿದ್ದು, ಅವರಲ್ಲಿ ಮಹಾರಾಷ್ಟ್ರದಿಂದ ಬಂದವರಿಗೆ 14 ದಿನಗಳ ಹೋಂ ಕ್ವಾರೈಂಟೈನ್ ಹಾಗೂ ಆ ಮನೆಯನ್ನು ಸೀಲ್ಡೌನ್ ಮಾಡಲಾಗಿದೆ. ನಗರಸಭಾ ವ್ಯಾಪ್ತಿ ಯಲ್ಲಿರುವ ಮನೆಗಳ ಬಗ್ಗೆ ನಿಗಾವಹಿಸಿ ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ಪ್ರಸ್ತುತ ನಗರಸಭೆಗೆ ವಹಿಸಲಾಗಿದೆ. ಈ ಸಂದರ್ಭದಲ್ಲಿ ಟಾಸ್ಕ್ಪೋರ್ಸ್ ಅಧ್ಯಕ್ಷರು ಹಾಗೂ ಸಂಬಂಧಿಸಿದ ಸದಸ್ಯರು ಆಯಾ ವಾರ್ಡ್ಗಳ ಸದಸ್ಯರಿಗೆ ವಿವರಗಳನ್ನು ನೀಡಿ ಜೊೆಯಾಗಿ ಕೆಲಸ ಮಾಡಬೇಕು ಎಂದರು.
ಹೋಂ ಕ್ವಾರಂಟೈನ್ ಇರುವ ಪ್ರತಿ ಪ್ರದೇಶಗಳಲ್ಲಿ ಇತರ ಯಾರಿಗೂ ಸಮಸ್ಯೆ ಆಗದ ರೀತಿಯಲ್ಲಿ ಕೆಲಸ ಮಾಡಬೇಕು ಮತ್ತು ಅವರಿಗೆ ಆತ್ಮಸ್ಥೈರ್ಯ ತುಂಬು ವಂತಹ ಕೆಲಸವನ್ನು ಮಾಡಬೇಕು. ಹೋಂ ಕ್ವಾರೈಂಟೈನ್ನಲ್ಲಿ ಇರಿಸಿದ ಜನರ ಮೇಲೆ ಟಾಸ್ಕ್ಫೋರ್ಸ್ ತಂಡ ಹೆಚ್ಚಿನ ನಿಗಾವಹಿಸಬೇಕು. ನಿಯಮ ಉಲ್ಲಂಘಿ ಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ತಿಳಿಸಿದರು.
ಮಳೆಗಾಲ ಪ್ರಾರಂಭವಾಗಿದ್ದು ನಗರಸಭಾ ವ್ಯಾಪ್ತಿಯ ಒಳಚರಂಡಿ ಹಾಗೂ ರಸ್ತೆಗಳ ಸಮರ್ಪಕ ನಿರ್ವಹಣೆಯ ಬಗ್ಗೆ ಹಾಗೂ ದಾರಿದೀಪಗಳ ವ್ಯವಸ್ಥೆಯ ಬಗ್ಗೆ, ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆಯ ಬಗ್ಗೆ ಮತ್ತು ಕಚೇರಿಯಲ್ಲಿ ಕಡತ ವಿಲೇವಾರಿ ಪ್ರಕ್ರಿಯೆಯಲ್ಲಿ ವಿಳಂಬ ಮಾಡದೆ ಹೆಚ್ಚಿನ ನಿಗಾ ವಹಿಸು ವಂತೆ ಅವು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆಯ ಪೌರಾಯುಕ್ತ ಆನಂದ್ ಸಿ.ಕಲ್ಲೋಳಿಕರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್ರಾಜ್ ಹಾಗೂ ನಗರಸಭೆಯ ಸದಸ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.







