ಪಚ್ಚನಾಡಿಯಲ್ಲಿ 2,000 ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ
ಸ್ಮಾರ್ಟ್ಸಿಟಿ, ಮನಪಾದಿಂದ ವನಮಹೋತ್ಸವ

ಮಂಗಳೂರು, ಜೂ.16: ಮಂಗಳೂರು ಮಹಾನಗರ ಪಾಲಿಕೆ ಮತ್ತು ಮಂಗಳೂರು ಸ್ಮಾರ್ಟ್ ಸಿಟಿಯಿಂದ ಮಂಗಳೂರಿನ ಪಚ್ಚನಾಡಿ ಘನ ತ್ಯಾಜ್ಯ ವಿಲೇವಾರಿ ಸಂಸ್ಕರಣಾ ಘಟಕದ ಆವರಣದಲ್ಲಿ ವನಮಹೋತ್ಸವಕ್ಕೆ ಮಂಗಳೂರು ನಗರ ಉತ್ತರ ಶಾಸಕ ಡಾ.ವೈ. ಭರತ್ ಶೆಟ್ಟಿ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಸ್ಮಾರ್ಟ್ಸಿಟಿಯಿಂದ ಪಚ್ಚನಾಡಿ ತ್ಯಾಜ್ಯ ಸಂಗ್ರಹಣಾ ಘಟಕದಲ್ಲಿ 2,000 ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಹಾಗೆಯೇ, ಪ್ರತಿ ವಾರ್ಡಿನಲ್ಲಿ 50 ಗಿಡಗಳನ್ನು ಸ್ಮಾರ್ಟ್ ಸಿಟಿಯಿಂದ ನೀಡಲಾಗುವುದು. ನಮ್ಮ ಮುಂದಿನ ಪೀಳಿಗೆ ಕೆಲವು ಅಮೂಲ್ಯ ತಳಿಗಳನ್ನು ನೋಡದ ಪರಿಸ್ಥಿತಿ ಬರಬಹುದು. ನಾವು ಪರಿಸರ ಉಳಿಸುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಹೇಳಿದರು.
ಶಾಸಕರೊಂದಿಗೆ ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ನಝೀರ್, ಉಪಮೇಯರ್ ವೇದಾವತಿ, ಮನಪಾ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ಕಿರಣ್ಕುಮಾರ್, ಶರತ್, ಸಂಗೀತಾ, ಹೇಮಲತಾ, ಮನೋಜ್, ಸುನೀತಾ, ವಲಯ ಅರಣ್ಯಾಧಿಕಾರಿ ಶ್ರೀಧರ್, ಅರಣ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.





