ದಿಲ್ಲಿ: ಕೊರೋನ ರೋಗಿಗಳಿಗೆ 200 ರೈಲುಗಳಲ್ಲಿ ಪ್ರತ್ಯೇಕ ವಾರ್ಡ್ ವ್ಯವಸ್ಥೆ
ಹೊಸದಿಲ್ಲಿ, ಜೂ.16: ಬಿಡುವಿಲ್ಲದೆ ರೈಲುಗಳು ಸಂಚರಿಸುವ ದಿಲ್ಲಿಯ ಆನಂದ್ ವಿಹಾರ್ ಟರ್ಮಿನಲ್ ಸ್ಟೇಷನ್ನಲ್ಲಿ ಮಂಗಳವಾರದಿಂದ ರೈಲು ಸೇವೆ ಸಂಪೂರ್ಣ ಸ್ಥಗಿತವಾಗಲಿದೆ. ಇಲ್ಲಿ 200 ರೈಲುಗಳಲ್ಲಿ ಕೊರೋನ ರೋಗಿಗಳಿಗೆ ಪ್ರತ್ಯೇಕ ವಾರ್ಡ್ನ ವ್ಯವಸ್ಥೆ ಮಾಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
200 ರೈಲುಗಳಲ್ಲಿ ಸುಮಾರು 500ರಷ್ಟು ಪ್ರತ್ಯೇಕ ವಾರ್ಡ್ಗಳನ್ನು ವ್ಯವಸ್ಥೆಗೊಳಿಸಿದ್ದು ಇದರಲ್ಲಿ 8000 ರೋಗಿಗಳಿಗೆ ಹಾಸಿಗೆಯ ವ್ಯವಸ್ಥೆಯಿದೆ. ಈ ರೈಲುಗಳನ್ನು ಆನಂದ್ ವಿಹಾರ ನಿಲ್ದಾಣದ ವಿವಿಧ ಪ್ಲಾಟ್ಫಾರಂಗಳಲ್ಲಿ ನಿಲ್ಲಿಸಲಾಗಿದೆ . ಆನಂದ್ ವಿಹಾರ ನಿಲ್ದಾಣಕ್ಕೆ ಬಂದು ಹೋಗುವ ರೈಲುಗಳನ್ನು ದಿಲ್ಲಿ ಜಂಕ್ಷನ್ ನಿಲ್ದಾಣದತ್ತ ತಿರುಗಿಸಲಾಗಿದೆ ಎಂದು ಉತ್ತರ ರೈಲ್ವೇಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ದೀಪಕ್ ಕುಮಾರ್ ಹೇಳಿದ್ದಾರೆ.
ರೈಲು ಬೋಗಿಗಳಲ್ಲಿರುವ ಮಲಗುವ ಸ್ಥಳ(ಬರ್ತ್)ಗಳನ್ನು ತೆಗೆದು, ಶೌಚಾಲಯಗಳನ್ನು ಮರುವಿನ್ಯಾಸಗೊಳಿಸಿ, ಕೋಣೆಗಳನ್ನು ಪ್ರತ್ಯೇಕಿಸಲು ಪಾರದರ್ಶಕ ಪರದೆಯನ್ನು ನಿರ್ಮಿಸಿ ಪ್ರತ್ಯೇಕ ವಾರ್ಡ್ಗಳನ್ನು ವ್ಯವಸ್ಥೆ ಮಾಡಲಾಗಿದೆ. ರಾಜಸ್ತಾನದಲ್ಲಿ ಈ ರೀತಿ 266 ರೈಲುಗಳನ್ನು ಕೊರೋನ ವೈರಸ್ ರೋಗಿಗಳಿಗೆಂದೇ ರೂಪಿಸಲಾಗಿದೆ. ಇದರಲ್ಲಿ 150 ರೈಲುಗಳನ್ನು ದಿಲ್ಲಿಗೆ ಕಳುಹಿಸಲಾಗುವುದು. ಉಳಿದ ರೈಲುಗಳನ್ನು ಮುಂದಿನ ದಿನದಲ್ಲಿ ಬೇಡಿಕೆ ಬಂದೆಡೆಗೆ ಕಳುಹಿಸಲಾಗುವುದು ಎಂದು ವಾಯವ್ಯ ರೈಲ್ವೇಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅಭಯ್ ಶರ್ಮಾ ಹೇಳಿದ್ದಾರೆ.