ಪ್ರಧಾನಿ ಏಕೆ ತಲೆಮರೆಸಿಕೊಂಡಿದ್ದಾರೆ: ರಾಹುಲ್ ಗಾಂಧಿ ಪ್ರಶ್ನೆ
ಹೊಸದಿಲ್ಲಿ, ಜೂ.17:ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರ ವಿರುದ್ಧ ನಡೆದಿರುವ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿರುವ ಘಟನೆಗೆ ಸಂಬಂಧಿಸಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪ್ರಧಾನಮಂತ್ರಿ ನರೆಂದ್ರ ಮೋದಿ ಅವರನ್ನು ಟೀಕಿಸಿದ್ದಾರೆ.
ಈ ಕುರಿತು ಪ್ರಧಾನಿ ಮಾತನಾಡಬೇಕೆಂದು ಒತ್ತಾಯಿಸಿದ ರಾಹುಲ್ ಗಾಂಧಿ,ದಶಕಗಳ ಬಳಿಕ ಚೀನಾ-ಭಾರತ ಗಡಿಯಲ್ಲಿ ನಡೆದಿರುವ ಆಘಾತಕಾರಿ ಘಟನೆಯ ಬಗ್ಗೆ ಪ್ರಧಾನಿ ಮೋದಿಯವರ ವೌನವನ್ನು ಪ್ರಶ್ನಿಸಿದ್ದಾರೆ.
"ಪ್ರಧಾನಮಂತ್ರಿ ಏಕೆ ವೌನವಾಗಿದ್ದಾರೆ.ಏಕೆ ಅವರು ತಲೆ ಮರೆಸಿಕೊಂಡಿದ್ದಾರೆ. ತಾಳ್ಮೆವಹಿಸಿದ್ದು ಸಾಕು. ಈಗ ಏನಾಯಿತು ಎಂದು ನಾವು ತಿಳಿದುಕೊಳ್ಳಬೇಕು. ಚೀನಾಕ್ಕೆ ನಮ್ಮ ಸೈನಿಕರನ್ನು ಹತ್ಯೆಗೈಯ್ಯಲು ಎಷ್ಟು ಧೈರ್ಯ? ಆ ದೇಶಕ್ಕೆ ನಮ್ಮ ಭೂಮಿಯನ್ನು ವಶಪಡಿಸಿಕೊಳ್ಳಲು ಎಷ್ಟು ಧೈರ್ಯ'' ಎಂದು ರಾಹುಲ್ ಗಾಂಧಿ ಬುಧವಾರ ಟ್ವೀಟ್ ಮಾಡಿದ್ದಾರೆ.
ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ ಭಾರತದ 20 ಹಾಗೂ ಚೀನಾದ 43 ಯೋಧರು ಮೃತಪಟ್ಟಿದ್ದಾರೆ ಅಥವಾ ಗಂಭೀರ ಗಾಯಗೊಂಡಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ.
ದೇಶವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಘಟನೆಯ ಬಗ್ಗೆ ತಕ್ಕ ಉತ್ತರ ನೀಡುವಂತೆಯೂ ಎಂದು ವಿಪಕ್ಷಗಳು ಪ್ರಧಾನಿ ಮೋದಿ ಯವರನ್ನು ಒತ್ತಾಯಿಸುವೆ.
"ಪಶ್ಚಿಮವಲಯದ ಗಾಲ್ವಾನ್ ಕಣಿವೆಯಲ್ಲಿ ನಮ್ಮ 20 ಯೋಧರು ಹುತಾತ್ಮರಾಗಿದ್ದಾರೆ ಎಂಬ ವರದಿಯನ್ನು ತಿಳಿದು ಆಘಾತವಾಯಿತು. ಹುತಾತ್ಮ ಯೋಧರಿಗೆ ನಮ್ಮ ನಮನ. ಪ್ರಧಾನಮಂತ್ರಿ ದೇಶವನ್ನು ವಿಶ್ವಾಸಕ್ಕೆ ಪಡೆಯಬೇಕು. ಈಗಿನ ಪರಿಸ್ಥಿತಿಯು ದೃಢವಾದ ಹಾಗೂ ಕಠಿಣವಾದ ಪ್ರತಿಕ್ರಿಯೆಯನ್ನು ಬಯಸುತ್ತದೆ''ಎಂದು ಕಾಂಗ್ರೆಸ್ ವಕ್ತಾರ ಆನಂದ್ ಶರ್ಮಾ ಟ್ವೀಟ್ ಮೂಲಕ ಮಂಗಳವಾರ ಒತ್ತಾಯಿಸಿದ್ದರು.