ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ ಶಾಸಕರು, ಬೆಂಬಲ ಹಿಂಪಡೆದ ಮಿತ್ರಪಕ್ಷ: ಸಂಕಷ್ಟದಲ್ಲಿ ಮಣಿಪುರ ಬಿಜೆಪಿ ಸರಕಾರ
ಹೊಸದಿಲ್ಲಿ: ಮೂವರು ಹಾಲಿ ಶಾಸಕರು ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರೆ ಮತ್ತೊಂದೆಡೆ 6 ಶಾಸಕರು ತಾವು ನೀಡಿದ್ದ ಬೆಂಬಲವನ್ನು ಹಿಂಪಡೆದುಕೊಂಡಿದ್ದು ಮಣಿಪುರದಲ್ಲಿ ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರಕಾರ ಸಂಕಷ್ಟಕ್ಕೆ ಸಿಲುಕಿದೆ.
ಮೂವರು ಸಚಿವರು ಸೇರಿದಂತೆ ನಾಲ್ವರು ಶಾಸಕರಿರುವ ನ್ಯಾಶನಲ್ ಪೀಪಲ್ಸ್ ಪಾರ್ಟಿ, ಏಕೈಕ ತೃಣಮೂಲ ಕಾಂಗ್ರೆಸ್ ಶಾಸಕ ಮತ್ತು ಜಿರಿಬಾಮ್ ನ ಸ್ವತಂತ್ರ ಶಾಸಕರು ಬಿಜೆಪಿ ನೇತೃತ್ವದ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದಾರೆ.
2017ರಲ್ಲಿ ನಡೆದ ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಹೊರಬಿದ್ದಿತ್ತು. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಕಾಂಗ್ರೆಸ್ 60ರಲ್ಲಿ 28 ಸ್ಥಾನಗಳನ್ನು ಮತ್ತು ಬಿಜೆಪಿ 21 ಸ್ಥಾನಗಳನ್ನು ಗೆದ್ದಿತ್ತು. ಎನ್ ಪಿಎಫ್ ಮತ್ತು ಎನ್ ಪಿಪಿ ತಲಾ 4 ಸ್ಥಾನಗಳನ್ನು ಗೆದ್ದಿತ್ತು. ಲೋಕಜನಶಕ್ತಿ ಪಾರ್ಟಿ, ತೃಣಮೂಲ ಕಾಂಗ್ರೆಸ್ ಮತ್ತು ಸ್ವತಂತ್ರ ಅಭ್ಯರ್ಥಿ ತಲಾ 1 ಸ್ಥಾನಗಳನ್ನು ಗೆದ್ದಿದ್ದರು.
ಕುತೂಹಲಕಾರಿ ವಿಚಾರವೆಂದರೆ ಆ ಸಂದರ್ಭ ರಾಜ್ಯಪಾಲೆ ನಜ್ಮಾ ಹೆಫ್ತುಲ್ಲಾ ಬಹುಮತ ಸಾಬೀತುಪಡಿಸುವಂತೆ ಬಿಜೆಪಿಗೆ ಆಹ್ವಾನ ನೀಡಿದ್ದರು. ಕಾಂಗ್ರೆಸ್ಸೇತರ ಶಾಸಕರ ಬೆಂಬಲ ಪಡೆದ ಬಿಜೆಪಿ ಸರಕಾರ ರಚಿಸುವಲ್ಲಿ ಯಶಸ್ವಿಯಾಯಿತು.