ಪಿಎಸ್ಎ ಕಾಯ್ದೆಯಡಿ ಅಲಿ ಮುಹಮ್ಮದ್ ಸಾಗರ್ ಬಂಧನ ರದ್ದುಗೊಳಿಸಿದ ಜಮ್ಮು ಕಾಶ್ಮೀರ ಹೈಕೋರ್ಟ್
“ಬಂಧಿಸಲು ನೀಡಿದ್ದ ಕಾರಣಗಳು ರಾಜಕಾರಣಿಯ ಸಹಜ ಚಟುವಟಿಕೆ” ಎಂದ ಕೋರ್ಟ್
ಶ್ರೀನಗರ, ಜೂ.17: ಸಾರ್ವಜನಿಕ ಸುರಕ್ಷತಾ ಕಾಯ್ದೆ(ಪಿಎಸ್ಎ)ಯಡಿ ನ್ಯಾಷನಲ್ ಕಾನ್ಫರೆನ್ಸ್ನ ಹಿರಿಯ ಮುಖಂಡ ಅಲಿ ಮುಹಮ್ಮದ್ ಸಾಗರ್ ಅವರ ಬಂಧನವನ್ನು ರದ್ದುಗೊಳಿಸಿರುವ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್, ಬಂಧನಕ್ಕೆ ನೀಡಿರುವ ಕಾರಣ ದುರ್ಬಲ ಮತ್ತು ಅಸಮರ್ಥನೀಯವಾಗಿದೆ ಎಂದು ತಿಳಿಸಿದೆ.
ಮುಹಮ್ಮದ್ ಸಾಗರ್ ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಬಂಧಿಸಲು ನೀಡಿರುವ ಕಾರಣಗಳು ಪ್ರಜಾಪ್ರಭುತ್ವದಲ್ಲಿ ಓರ್ವ ರಾಜಕಾರಣಿ ಮಾಡುವ ಸಹಜ ಚಟುವಟಿಕೆಗಳಾಗಿವೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾಷನಲ್ ಕಾನ್ಫರೆನ್ಸ್ನ ಪ್ರಧಾನ ಕಾರ್ಯದರ್ಶಿಯಾಗಿರುವ ಸಾಗರ್ರನ್ನು ಕಳೆದ ವರ್ಷದ ಆಗಸ್ಟ್ 6ರಂದು (ಕಾಶ್ಮೀರದ 370ನೇ ವಿಧಿ ರದ್ದಾದ ಮರುದಿನ) ಬಂಧಿಸಲಾಗಿತ್ತು. ಆರು ತಿಂಗಳ ಬಂಧನಾವಧಿ ಕೊನೆಗೊಂಡ ಬಳಿಕ, ಫೆಬ್ರವರಿ 6ರಂದು ಅವರ ವಿರುದ್ಧ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ಮತದಾನ ಬಹಿಷ್ಕರಿಸಲು ಕರೆ ನೀಡಿದ್ದರೂ ಚುನಾವಣೆಯಲ್ಲಿ ಮತ ಚಲಾಯಿಸುವಂತೆ ಜನರನ್ನು ಮನವೊಲಿಸುವ ಸಾಮರ್ಥ್ಯ ಸಾಗರ್ಗೆ ಇದೆ ಎಂಬ ಕಾರಣ ಸಹಿತ ಹಲವು ಕಾರಣಗಳನ್ನು ಬಂಧನಕ್ಕೆ ನೀಡಲಾಗಿದೆ. ಅಲ್ಲದೆ 2019ರ ಜುಲೈಯಲ್ಲಿ ನಡೆದಿದ್ದ ಸಭೆಯಲ್ಲಿ ಮಾತಾಡಿದ್ದ ಸಾಗರ್ , ಒಂದು ವೇಳೆ 370ನೇ ವಿಧಿ ರದ್ದಾದರೆ ಸಾಮೂಹಿಕ ಪ್ರತಿಭಟನೆಗೆ ಸಿದ್ಧರಾಗಿರುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದರು ಎಂಬ ಕಾರಣವನ್ನೂ ನೀಡಲಾಗಿದೆ. ಈ ಬಂಧನವನ್ನು ಪ್ರಶ್ನಿಸಿ ಎಪ್ರಿಲ್ನಲ್ಲಿ ಸಾಗರ್ ಕುಟುಂಬ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು.
ವಿಚಾರಣೆ ಸಂದರ್ಭ ಸುಪ್ರೀಂಕೋರ್ಟ್ನ ಈ ಹಿಂದಿನ ತೀರ್ಪನ್ನು ಉಲ್ಲೇಖಿಸಿದ ಹೈಕೋರ್ಟ್, ಪಿಎಸ್ಎಯಡಿ ಬಂಧನದ ಆದೇಶ ಜಾರಿಗೊಳಿಸಿದ ಸಂದರ್ಭ ಅದಾಗಲೇ ಬಂಧಿತರು ಕಸ್ಟಡಿಯಲ್ಲಿದ್ದರು ಎಂಬ ವಿಷಯದ ಬಗ್ಗೆ ಅಧಿಕಾರಿಗಳು ಗಮನ ನೀಡಿರಲಿಲ್ಲ ಎಂದು ಹೇಳಿದೆ. ಅಲ್ಲದೆ ಕ್ರಿಮಿನಲ್ ಪ್ರೊಸೀಜರ್ ಕೋಡ್ನ 107/151 ಸೆಕ್ಷನ್ಗಳಡಿ ಬಂಧಿಸಿರುವಾಗ ಮತ್ತು ಅವರು ಇನ್ನೂ ಬಂಧನದಲ್ಲೇ ಇರುವಾಗ ಪಿಎಸ್ಯಡಿ ಬಂಧಿಸಲು ಆದೇಶ ಹೊರಡಿಸಿರುವುದು ತಪ್ಪು. ಇಂತಹ ಸಂದರ್ಭದಲ್ಲಿ ಬಂಧಿಸಬೇಕಾದರೆ ಅಧಿಕಾರಿಗಳು ಬಲವಾದ ಕಾರಣಗಳನ್ನು ನೀಡಬೇಕಾಗುತ್ತದೆ. ಈ ರೀತಿ ಮಾಡದಿದ್ದರೆ ಬಂಧನ ಅಕ್ರಮವಾಗುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ನ ತೀರ್ಪಿನಲ್ಲಿ ತಿಳಿಸಲಾಗಿದೆ.
ಈ ತೀರ್ಪು, ಜಮ್ಮು ಮತ್ತು ಕಾಶ್ಮೀರದಲ್ಲಿ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಬಂಧನಲ್ಲಿರುವ ಇತರ ಪ್ರಕರಣಗಳ ಮೇಲೆಯೂ ಪರಿಣಾಮ ಬೀರುತ್ತದೆ ಎಂದು ಸಾಗರ್ ಪ್ರಕರಣದಲ್ಲಿ ವಾದಿಸಿರುವ ನ್ಯಾಯವಾದಿ ಶಾರಿಖ್ ರಿಯಾಝ್ ಪ್ರತಿಕ್ರಿಯಿಸಿದ್ದಾರೆ.