ಲಾಕ್ಡೌನ್ ವೇಳೆ ಮುಸ್ಲಿಮರ ವಿರುದ್ಧವೇ ಪ್ರಕರಣ ಏಕೆ?: ತೆಲಂಗಾಣ ಹೈಕೋರ್ಟ್ ತರಾಟೆ
ಹೈದರಾಬಾದ್, ಜೂ.19: ಲಾಕ್ಡೌನ್ ನಿಯಮಾವಳಿ ಉಲ್ಲಂಘನೆ ಆರೋಪದಲ್ಲಿ ಮುಸ್ಲಿಂ ಸಮುದಾಯದವರ ವಿರುದ್ಧವೇ ಏಕೆ ಅಧಿಕ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತೆಲಂಗಾಣ ಹೈಕೋರ್ಟ್, ರಾಜ್ಯ ಪೊಲೀಸ್ ಇಲಾಖೆಯನ್ನು ಪ್ರಶ್ನಿಸಿದೆ.
ಇತರ ಸಮುದಾಯದವರಲ್ಲಿ ನಿಯಮ ಉಲ್ಲಂಘಿಸಿದವರು ಇಲ್ಲ ಎಂಬ ಅರ್ಥವೇ ಎಂದು ಮುಖ್ಯ ನ್ಯಾಯಮೂರ್ತಿ ರಾಘವೇಂದ್ರ ಸಿಂಗ್ ಚೌಹಾಣ್ ಮತ್ತು ನ್ಯಾಯಮೂರ್ತಿ ವಿಜಯಸೇನ್ ರೆಡ್ಡಿ ಅವರನ್ನೊಳಗೊಂಡ ನ್ಯಾಯಪೀಠ ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದೆ. ರಾಷ್ಟ್ರವ್ಯಾಪಿ ಲಾಕ್ಡೌನ್ ವೇಳೆ ಪೊಲೀಸರ ಅತಿರೇಕವನ್ನು ಪ್ರಶ್ನಿಸಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠ ಈ ಪ್ರಶ್ನೆ ಮುಂದಿಟ್ಟಿದೆ.
ಅಮೆರಿಕದಲ್ಲಿ ಏನಾಗುತ್ತಿದೆ ನೋಡಿ; ಆಫ್ರಿಕ ಮೂಲದ ಅಮೆರಿಕನ್ ಪ್ರಜೆಯೊಬ್ಬನನ್ನು ಪೊಲೀಸ್ ಅಧಿಕಾರಿ ಹತ್ಯೆ ಮಾಡಿರುವುದಕ್ಕೆ ಇಡೀ ದೇಶವೇ ಹೊತ್ತಿ ಉರಿಯುತ್ತಿದೆ ಎಂದು ನ್ಯಾಯಪೀಠ ಉಲ್ಲೇಖಿಸಿದೆ. ಅಲ್ಪಸಂಖ್ಯಾತರ ವಿರುದ್ಧದ ಪೊಲೀಸ್ ದೃಷ್ಟಿಕೋನ ಅತಿರೇಕದ್ದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಸಾಮಾಜಿಕ ಹೋರಾಟಗಾರರಾದ ಶೀಲಾ ಸರಹ್ ಮ್ಯಾಥ್ಯೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಪೊಲೀಸರು ಮುಸ್ಲಿಮರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದು, ಪರಿಣಾಮವಾಗಿ ಹಲವು ಮಂದಿ ಮುಸ್ಲಿಮರು ಗಾಯಗೊಂಡಿದ್ದಾರೆ ಎಂದು ಅವರು ಆಪಾದಿಸಿದ್ದಾರೆ.