ರಾಜ್ಯದ ಶಾಲೆ ಕಾಲೇಜುಗಳ ಪಠ್ಯಕ್ರಮದಲ್ಲಿ ಕೊರೋನ ಅರಿವಿನ ಪಾಠ: ಸಚಿವ ಸುರೇಶ್ ಕುಮಾರ್

ಚಾಮರಾಜನಗರ, ಜೂ.19: ರಾಜ್ಯದ ಎಲ್ಲ ಶಾಲಾ ಕಾಲೇಜುಗಳ ಪಠ್ಯಕ್ರಮಗಳಲ್ಲಿ ಕೋವಿಡ್ 19 ನ ಬಗ್ಗೆ ಕಿರುಹೊತ್ತಿಗೆ ಹೊರತಂದು ವಿದ್ಯಾರ್ಥಿಗಳಲ್ಲಿ ಕೊರೋನ ವೈರಸನ್ನು ತಡೆಗಟ್ಟುವ ಹಾಗೂ ನಿಯಂತ್ರಿಸುವ ಸಲುವಾಗಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ 70 ಲಕ್ಷರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹೊರರೋಗಿಗಳ ವಿಭಾಗ ಹಾಗೂ ತುರ್ತುಚಿಕಿತ್ಸಾ ನಿಗಾಘಟಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಕೋವಿಡ್ 19 ಅಷ್ಟೇ ಅಲ್ಲದೆ ಇನ್ನಿತರ ಮಹಾಮಾರಿ ರೋಗಗಳ ಬಗ್ಗೆ ದೇಶ-ವಿದೇಶಗಳು ಕೈಗೊಂಡ ಕ್ರಮಗಳು ಹಾಗೂ ಪರಿಹಾರಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಹೇಳಿದರು.
ಆಸ್ಪತ್ರೆಗಳಿಗೆ ರೋಗಿಗಳು ಆಗಮಿಸಿದಾಗ ವೈದ್ಯರು ಹಾಗೂ ಶುಶ್ರೂಕಿಯರು ಅವರನ್ನು ನಗುಮುಖದಿಂದ ಸ್ವಾಗತಿಸಬೇಕು ಎಂದ ಅವರು, ಈಗಾಗಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹಾಗೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದ ಪ್ರಾಯೋಗಿಕ ಪ್ಲಾಸ್ಮಾ ಚಿಕಿತ್ಸೆಯು ಯಶಸ್ಸು ಕಂಡಿದ್ದು, ರಾಜ್ಯ ಹಾಗೂ ಕೇಂದ್ರ ಸರಕಾರದ ಪ್ರಾರಂಭಿಕ ಪ್ರಯತ್ನಕ್ಕೆ ಉತ್ತೇಜನ ದೊರಕಿದೆ ಎಂದರು.
ರಾಜ್ಯದ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ವಿಧಿ ವಿಜ್ಞಾನ ಇಲಾಖೆಗಳ ವೈದ್ಯರ ತಜ್ಞರ ಸಮಿತಿಯನ್ನು ಸರಕಾರ ಕೂಡಲೇ ನೇಮಕ ಮಾಡಿ, ಅವರ ನೇತೃತ್ವದಲ್ಲಿ ರಾಜ್ಯದೆಲ್ಲೆಡೆ ಪ್ಲಾಸ್ಮಾಚಿಕಿತ್ಸೆಯನ್ನು ಅಗತ್ಯವಿರುವ ಎಲ್ಲ ಆಸ್ಪತ್ರೆಗಳಲ್ಲಿ ವಿಸ್ತರಿಸಲು ಚಿಂತನೆ ನಡೆದಿದೆ ಎಂದು ಅವರು ತಿಳಿಸಿದರು.
ವಿಶ್ವವ್ಯಾಪ್ತಿ ಮಾರಕವಾಗಿ ದಿನೇ ದಿನೇ ಹೆಚ್ಚಾಗುತ್ತಿರುವ ಕೊರೋನದ ಬಗ್ಗೆ ಶಾಲಾ ಹಾಗೂ ಕಾಲೇಜು ಮಟ್ಟದ ವಿದ್ಯಾರ್ಥಿಗಳಿಗೆ ಕೋವಿಡ್ 19 ಹಾಗೂ ಇತರ ಮಹಾಮಾರಿ ರೋಗಗಳ ಬಗ್ಗೆ ಸಾಕಷ್ಟು ಅರಿವು ಮೂಡಿಸುವ ಸಲುವಾಗಿ ಸರಕಾರವು ಕಿರುಹೊತ್ತಿಗೆಯನ್ನು ಹೊರತಂದು ಅದನ್ನು ಪಠ್ಯಕ್ರಮಗಳಲ್ಲಿ ಅಳವಡಿಸಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಶಿಕ್ಷಣ ಇಲಾಖೆಯು ಕಾರ್ಯೋನ್ಮುಖವಾಗಿದೆ ಎಂದು ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.
ಈ ಸಂದರ್ಭದಲ್ಲಿ ಶಾಸಕ ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ್, ಜಿಲ್ಲಾ ವೈದ್ಯಾಧಿಕಾರಿ ಡಾ.ಕೃಷ್ಣಪ್ರಸಾದ್, ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರಾದ ಡಾ.ಸಂಜೀವ್ ಸೇರಿದಂತೆ ಇತರರು ಹಾಜರಿದ್ದರು.







