ಶಿಕ್ಷಕರಿಗೆ ಉದ್ಯೋಗ ಭದ್ರತೆ ಒದಗಿಸುವಂತೆ ಅನುದಾನರಹಿತ ಶಿಕ್ಷಕರಿಂದ ಮುಖ್ಯ ಮಂತ್ರಿಗೆ ಮನವಿ
ಭಟ್ಕಳ: ರಾಜ್ಯದಲ್ಲಿ ಲಾಕ್ಡೌನ್ ನಿಂದಾಗಿ ಶಾಲೆಗಳು ಮುಚ್ಚಲ್ಪಟ್ಟಿದ್ದು ಖಾಸಗಿ ಶಾಲೆಗಳನ್ನು ನಂಬಿಕೊಂಡು ಹಲವಾರು ವರ್ಷಗಳಿಂದ ದುಡಿಯುತ್ತಿರುವ ಶಿಕ್ಷಕರ ಹಾಗೂ ಶಾಲಾ ಸಿಬ್ಬಂದಿಗಳಿಗೆ ವೇತನ ಭದ್ರತೆ ಒದಗಿಸುವುದರ ಮೂಲಕ ಸರ್ಕಾರ ಖಾಸಗಿ ಶಾಲಾ ಸಿಬ್ಬಂದಿಗಳ ಕುಟುಂಬ ರಕ್ಷಣೆಗೆ ನಿಲ್ಲಬೇಕೆಂದು ಅಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ನೇತೃತ್ವದಲ್ಲಿ ಶುಕ್ರವಾರ ಇಲ್ಲಿನ ಸಹಾಯಕ ಆಯುಕ್ತರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ರಾಜ್ಯ ಮಾಧ್ಯಮ ಕಾರ್ಯದರ್ಶಿ ಎಂ.ಆರ್. ಮಾನ್ವಿ, ರಾಜ್ಯದ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಶಿಕ್ಷಕರು ಈಗ ಉದ್ಯೋಗ ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದ್ದಾರೆ, ಶಾಲೆಗಳಲ್ಲಿ ವಿದ್ಯಾರ್ಥಿಗಳಿಲ್ಲದ ಕಾರಣ ಪಾಲಕರು ಶಾಲ ಶುಲ್ಕ ನೀಡದೆ ಇರುವುದರಿಂದ ಆಡಳಿತ ಮಂಡಳಿಯವರಲ್ಲಿ ಶಿಕ್ಷಕರಿಗೆ ವೇತನ ನೀಡಲು ಹಣ ಇಲ್ಲ, ತಮ್ಮ ಸ್ವಂತ ಹಣದಿಂದ ಶಾಲೆಯನ್ನು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ಆರ್ಥಿಕ ತೊಂದರೆಯನ್ನು ಅನುಭವಿಸುತ್ತಿದ್ದು ಶಿಕ್ಷಕರ ವೇತನ ನೀಡಲು ತೊಂದರೆಯಾಗುತ್ತಿದೆ. ಆದ್ದರಿಂದ ಸರ್ಕಾರವೇ ಈಗ ಖಾಸಗಿ ಶಿಕ್ಷಕರ ಬೆನ್ನಿಗೆ ನಿಂತು ಅವರಿಗೆ ಉದ್ಯೋಗ ಭದ್ರತೆ ಒದಗಿಸಬೇಕು ಮತ್ತು ಮತ್ತು ಶಿಕ್ಷಕರಿಗೆ ಪ್ರತಿ ತಿಂಗಳು ಶಾಲೆಗಳು ಆರಂಭಗೊಳ್ಳುವವರೆಗೆ ಕನಿಷ್ಠ ಹತ್ತು ಸಾವಿರ ರೂಗಳನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಬಕೆಂದು ಆಗ್ರಹಿಸಿದರು.
ನಯೀಮುಲ್ ಹಕ್ ಮಾತನಾಡಿ, ಆಟೋ ರಿಕ್ಷಾ ಚಾಲಕರಿಗೆ, ಮೀನುಗಾರರಿಗೆ ಹಾಗೂ ಕಟ್ಟಡ ಕಾರ್ಮಿಕರಿಗೆ ಕೆಲವೊಂದು ಯೋಜನೆಗಳನ್ನು ರೂಪಿಸಿದಂತೆ ರಾಜ್ಯದ ಅನುದಾನ ರಹಿತ ಖಾಸಗಿ ಶಾಲೆಗಳ ಶಿಕ್ಷಕರಿಗೂ ಯೋಜನೆಗಳು ರೂಪಿಸಬೇಕು, ರಾಜ್ಯಸರ್ಕಾರವು ಖಾಸಗಿ ಶಾಲಾ ಶಿಕ್ಷಕರ ಸಹಾಯಕ್ಕೆ ಬಾರದೆ ಹೋದಲ್ಲಿ ರಾಜ್ಯದ ಸಾವೀರಾರು ಮಂದಿ ಶಿಕ್ಷಕರು ಮತ್ತವರ ಕುಟುಂಬಗಳು ಬೀದಿಗೆ ಬರುವುದರಲ್ಲಿ ಸಂಶಯವೇ ಇಲ್ಲ. ದೇಶದ ಭವಿಷ್ಯವನ್ನು ರೂಪಿಸುವ ಶಿಕ್ಷಕರ ಭವಿಷ್ಯವೇ ಈಗ ಅಡಕತ್ತರಿಯಲ್ಲಿ ಸಿಲುಕಿಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ಮಂಜುಳಾ ಪೈ, ಫೆಲಿಸ್ ಡಿ’ಸೋಜಾ ಮತ್ತಿತರರು ಉಪಸ್ಥಿರಿದ್ದರು.