ಸರಕಾರ ಚೀನಿಯರೊಂದಿಗೆ ಲಾಠಿ ಕಾಳಗ ಬಯಸಿದ್ದರೆ ಆರೆಸ್ಸೆಸ್ ಕಾರ್ಯಕರ್ತರನ್ನು ಯುದ್ಧರಂಗಕ್ಕೆ ಕಳುಹಿಸಲಿ
ಕೇಂದ್ರದ ವಿರುದ್ಧ ಅಮರಿಂದರ್ ಸಿಂಗ್ ಟೀಕೆ
ಚಂಡಿಗಡ,ಜೂ.19: ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರ ಮೇಲೆ ಭೀಕರ ದಾಳಿ ನಡೆಯುತ್ತಿದ್ದರೂ ಚೀನಿ ಸೈನಿಕರತ್ತ ಗುಂಡು ಹಾರಿಸಲು ಏಕೆ ಆದೇಶಿಸಿರಲಿಲ್ಲ ಎಂದು ಪ್ರಶ್ನಿಸಿರುವ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು,ಅಲ್ಲಿ ಯಾರೋ ತನ್ನ ಕರ್ತವ್ಯ ನಿರ್ವಹಿಸಲು ಮರೆತಿದ್ದರು ಎಂದು ಹೇಳಿದ್ದಾರೆ.
ತಮ್ಮ ಸಹೋದ್ಯೋಗಿಗಳು ಕೊಲ್ಲಲ್ಪಡುತ್ತಿರುವಾಗ ಅವರು ಅಲ್ಲಿ ಕುಳಿತು ಏನು ಮಾಡುತ್ತಿದ್ದರು ಎಂದು ಅಧಿಕೃತ ಹೇಳಿಕೆಯಲ್ಲಿ ಪ್ರಶ್ನಿಸಿರುವ ಸಿಂಗ್,ಎಲ್ಎಸಿಯಲ್ಲಿಯ ಯೋಧರಿಗೆ ಯುದ್ಧೋಪಕರಣಗಳನ್ನು ರವಾನಿಸಲಾಗುತ್ತಿದೆ ಎಂಬ ವರದಿಗೆ ತೀವ್ರವಾಗಿ ಆಕ್ಷೇಪಿಸಿದ್ದಾರೆ.
ಭಾರತೀಯ ಸೇನೆಯು ಶಸ್ತ್ರಾಸ್ತ್ರಗಳನ್ನು ಬಳಸಲು ತರಬೇತಿ ಪಡೆದಿದೆಯೇ ಹೊರತು ಕಲ್ಲುಗಳು,ಮೊಳೆಗಳನ್ನು ಅಳವಡಿಸಿದ ರಾಡ್ಗಳು ಅಥವಾ ಲಾಠಿಗಳನ್ನು ಬಳಸಲು ಅಲ್ಲ. ಚೀನಿಯರೊಂದಿಗೆ ಮುಷ್ಟಿಯುದ್ಧ ಅಥವಾ ಲಾಠಿ ಕಾಳಗವನ್ನು ಕೇಂದ್ರ ಸರಕಾರವು ಬಯಸಿದ್ದರೆ ಅದು ಆರೆಸ್ಸೆಸ್ ಕಾರ್ಯಕರ್ತರನ್ನು ಯುದ್ಧರಂಗಕ್ಕೆ ಕಳುಹಿಸಬೇಕು ಎಂದು ಹೇಳಿರುವ ಅವರು,ಅಲ್ಲಿ ನಮ್ಮ ಯೋಧರಿಗೆ ಅಗತ್ಯವಾಗಿರುವುದು ಶಸ್ತ್ರಾಸ್ತ್ರಗಳು ಮತ್ತು ಯಾವುದೇ ಸಂದರ್ಭದಲ್ಲಿಯೂ ತಮ್ಮನ್ನು ಮತ್ತು ದೇಶವನ್ನು ರಕ್ಷಿಸಿಕೊಳ್ಳಲು ಈ ಶಸ್ತ್ರಾಸ್ತ್ರಗಳನ್ನು ಬಳಸಲು ಸಿದ್ಧವಿರಬೇಕು ಎಂಬ ಆದೇಶ ಮಾತ್ರ ಎಂದರು.
ಈಗ ಹೇಳುತ್ತಿರುವಂತೆ ಸೇನಾ ತುಕಡಿಯು ಶಸ್ತ್ರಸಜ್ಜಿತವಾಗಿದ್ದರೆ ಕಮಾಂಡಿಂಗ್ ಅಧಿಕಾರಿ ಚೀನಿಯರ ಕ್ರೌರ್ಯಕ್ಕೆ ಬಲಿಯಾದಾಗ ಸಹಾಯಕ ಕಮಾಂಡಿಂಗ್ ಅಧಿಕಾರಿ ಗುಂಡು ಹಾರಿಸಲು ಏಕೆ ಆದೇಶ ನೀಡಿರಲಿಲ್ಲ ಎಂದೂ ಸಿಂಗ್ ಪ್ರಶ್ನಿಸಿದ್ದಾರೆ..