ಯೆನೆಪೋಯ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ : 4 ಕೆಜಿ ತೂಕದ ಗೆಡ್ಡೆ ನಿರ್ಮೂಲನೆ
ಮಂಗಳೂರು, ಜೂ.20: ಚಿತ್ರದುರ್ಗ ಮೂಲದ ಸುಮಾರು 71 ವರ್ಷ ವಯಸ್ಸಿನ ರೋಗಿಯೊಬ್ಬರ ತಲೆಯಲ್ಲಿ ಬೆಳೆದಿದ್ದ 4 ಕೆಜಿ ತೂಕದ ದುರ್ಮಾಂಸ ಗೆಡ್ಡೆಯನ್ನು ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ ಮೂಲಕ ತೆಗೆಯಲಾಗಿದೆ.
15 ವರ್ಷಗಳಿಂದ ತಲೆಯ ಹಿಂಭಾಗದಲ್ಲಿ ದೊಡ್ಡ ಗೆಡ್ಡೆಯನ್ನು ಹೊತ್ತುಕೊಂಡಿದ್ದು ತಲೆಯ ಮೇಲೆ ಗೆಡ್ಡೆಯ ಭಾರದಿಂದಾಗಿ ರೋಗಿಯು ಸರಿಯಾಗಿ ಮಲಗಲು ಮತ್ತು ನಿದ್ರಿಸಲು ಕಷ್ಟಪಡುತ್ತಿದ್ದರು.
ಅನಾರೋಗ್ಯದ ಸಂಕೀರ್ಣ ಸ್ವರೂಪ ಮತ್ತು ಹಣಕಾಸಿನ ಕೊರತೆಯಿಂದಾಗಿ ರೋಗಿಗೆ ಇದುವರೆಗೂ ಸರಿಯಾದ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿಲ್ಲ. ಕೋವಿಡ್ 19 ಭೀತಿಯ ಈ ಸಮಯದಲ್ಲಿ ಸ್ವರಕ್ಷಣಾ ಪರಿಕರಗಳೊಂದಿಗೆ ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ನಡೆಸಲು ಯೆನೆಪೋಯ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯ ವೈದ್ಯರು ನಿರ್ಧರಿಸಿದರು.
ನರರೋಗ ಶಸ್ತ್ರಚಿಕಿತ್ಸೆ ವಿಭಾಗದ ವೈದ್ಯರಾದ ಡಾ.ಪವಮಾನ್ ಸಿಂಧಿಕರ್ ಮತ್ತು ಕೃಷ್ಣ ನಾರಾಯಣನ್ ಅವರು ಗೆಡ್ಡೆಯನ್ನು ಯಶಸ್ವಿಯಾಗಿ ತೆಗೆದಿದ್ದು ಮೈಕ್ರೋವ್ಯಾಸ್ಕುಲರ್ ಟಿಶ್ಯೂ ಟ್ರಾನ್ಸೆಪ್ಲಾಂಟೇಶನ್ ತಂತ್ರವನ್ನು ಬಳಸಿಕೊಂಡು ಪ್ಲಾಸ್ಟಿಕ್ ಸರ್ಜರಿ ವಿಭಾಗದ ಡಾ. ದೇವಿಪ್ರಸಾದ್ ಎಸ್. ಮತ್ತು ಡಾ. ಪ್ರದೀಪ್ ಕುಲಾಲ್ ಆರ್. ಅವರು ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದಾರೆ. ಸತತ 7 ಗಂಟೆಗಳ ಕಾಲ ನಡೆದ ಈ ಸಂಕೀರ್ಣ ಮತ್ತು ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಕಾರ್ಯ ವಿಧಾನದ ಸಮಯದಲ್ಲಿ ಅರಿವಳಿಕೆ ವಿಭಾಗದ ಡಾ. ಶಂಕರನಾರಾಯಣ ಮತ್ತು ಡಾ. ಕಾರ್ತಿಕ್ ಪ್ರಭು ಅವರ ತಂಡ ಸಹಕರಿಸಿದೆ.
ಸರಕಾರದ ಆಯುಸ್ಮಾನ್ ಯೋಜನೆ ಮತ್ತು ಯೆನೆಪೋಯ ಆಸ್ಪತ್ರೆಯ ವತಿಯಿಂದ ಈ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ನೆರವೇರಿಸಲಾ ಯಿತು.ರೋಗಿಯು ಸಂಪೂರ್ಣ ಚೇತರಿಕೆಯೊಂದಿಗೆ ಆಸ್ಪತ್ರೆಯಿಂದ ಶೀಘ್ರವೇ ಬಿಡುಗಡೆಗೊಳ್ಳಲಿದ್ದಾರೆ ಎಂದು ಆಸ್ಪತ್ರೆಯ ಪ್ರಕಟನೆ ತಿಳಿಸಿದೆ.