‘ಸೈನಿಕನ ತಂದೆಯ ಸ್ಪಷ್ಟ ಸಂದೇಶ’: ವಿಡಿಯೋ ಮೂಲಕ ರಾಹುಲ್ ವಿರುದ್ಧ ಅಮಿತ್ ಶಾ ಆಕ್ರೋಶ
ಹೊಸದಿಲ್ಲಿ: ಲಡಾಖ್ ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾದ ನಂತರ ಸರಕಾರವನ್ನು ಟೀಕಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ತಿರುಗೇಟು ನೀಡಲು ಇಂದು ಕೇಂದ್ರ ಸಚಿವ ಅಮಿತ್ ಶಾ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.
“ರಾಜಕೀಯ ಮಾಡಬೇಡಿ'' ಎಂದು ಆ ವೀಡಿಯೋದಲ್ಲಿರುವ ಹಿರಿಯ ನಾಗರಿಕರೊಬ್ಬರು ರಾಹುಲ್ ಗಾಂಧಿಗೆ ಹೇಳುತ್ತಿರುವುದು ಕೇಳಿಸುತ್ತದೆ.
“ಧೀರ ಸೈನಿಕನೊಬ್ಬನ ತಂದೆ ಮಾತನಾಡಿದ್ದಾರೆ ಹಾಗೂ ಅವರು ರಾಹುಲ್ ಗಾಂಧಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಇಡೀ ದೇಶ ಒಂದಾಗಿರುವಾಗ ರಾಹುಲ್ ಗಾಂಧಿ ಕೂಡ ಇಂತಹ ಕೀಳುಮಟ್ಟದ ರಾಜಕಾರಣ ಮಾಡದೆ ರಾಷ್ಟ್ರೀಯ ಹಿತಾಸಕ್ತಿಗಾಗಿ ಒಂದಾಗಬೇಕು'' ಎಂದು ಈ ವೀಡಿಯೋದೊಂದಿಗೆ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
“ಭಾರತೀಯ ಸೇನೆ ಒಂದು ಬಲಿಷ್ಠ ಸೇನೆ. ಅದು ಚೀನಾ ಮತ್ತಿತರ ದೇಶಗಳನ್ನು ಸೋಲಿಸಬಹುದು. ರಾಹುಲ್ ಗಾಂಧಿ ನೀವು ರಾಜಕೀಯದಲ್ಲಿ ತೊಡಗಬಾರದು. ನನ್ನ ಪುತ್ರ ಹೋರಾಡಿದ್ದಾನೆ, ಆತ ಮತ್ತೆ ಹೋರಾಡುತ್ತಾನೆ. ಆತ ಆದಷ್ಟು ಬೇಗ ಗುಣಮುಖನಾಗಲಿ ಎಂದು ಪ್ರಾರ್ಥಿಸುತ್ತೇನೆ'' ಎಂದು ಹಳದಿ ರುಮಾಲು ಹಾಗೂ ಬಿಳಿ ಕುರ್ತಾ ಧರಿಸಿದ್ದ ಹಿರಿಯ ನಾಗರಿಕರೊಬ್ಬರು ವೀಡಿಯೋದಲ್ಲಿ ಹೇಳುವುದು ಕೇಳಿಸುತ್ತದೆ.
A brave armyman’s father speaks and he has a very clear message for Mr. Rahul Gandhi.
— Amit Shah (@AmitShah) June 20, 2020
At a time when the entire nation is united, Mr. Rahul Gandhi should also rise above petty politics and stand in solidarity with national interest. https://t.co/BwT4O0JOvl