ಉಡುಪಿ: ಶನಿವಾರ 13 ಮಂದಿಗೆ ಕೊರೋನ ಸೋಂಕು ದೃಢ

ಉಡುಪಿ, ಜೂ.20 ಗುರುವಾರ ಅಪರಾಹ್ನ ಮುಂಬೈಯಿಂದ ಬಂದು ಅದೇ ದಿನ ಕೊರೋನ ಸೋಂಕಿನೊಂದಿಗೆ ಮೃತಪಟ್ಟ ಕುಂದಾಪುರ ತಾಲೂಕು ತೆಕ್ಕಟ್ಟೆಯ 54 ವರ್ಷ ಪ್ರಾಯದ ವ್ಯಕ್ತಿಯ 45ರ ಹರೆಯದ ಪತ್ನಿ ಮತ್ತು 24ರ ಹರೆಯದ ಮಗಳು ಸೇರಿದಂತೆ ಒಟ್ಟು 13 ಮಂದಿಗೆ ಶನಿವಾರ ಕೋವಿಡ್- 19ರ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಪಾಸಿಟಿವ್ ಬಂದ 13 ಮಂದಿಯಲ್ಲಿ ಮೃತರ ಕುಟುಂಬದ ಮೂವರು ಸೇರಿ ಮಹಾರಾಷ್ಟ್ರದ 10 ಮಂದಿ, ಬೆಂಗಳೂರಿನಿಂದ ಬಂದ 55 ವರ್ಷದ ಪುರುಷ ಹಾಗೂ ಜೂ.7ರಂದು ಪಾಸಿಟಿವ್ ಬಂದ ಮಣಿಪುರದ 30ರ ಹರೆಯದ ಲ್ಯಾಬ್ ಟೆಕ್ನಿಷಿಯನ್ ಅವರ ತಂದೆ (62) ಹಾಗೂ ಅಣ್ಣ (32) ಸೇರಿದ್ದಾರೆ. ಈ ಮೂಲಕ ಲ್ಯಾಬ್ ಟೆಕ್ನಿಷಿಯನ್ ಕುಟುಂಬದ ಒಟ್ಟು ಐವರಿಗೆ ಪಾಸಿಟಿವ್ ಬಂದಂತಾಗಿದೆ.
ಈ 13 ಮಂದಿಯಲ್ಲಿ 60 ವರ್ಷ ಮೇಲ್ಪಟ್ಟ ಮೂವರು ಸೇರಿದಂತೆ ಒಟ್ಟು 8 ಮಂದಿ ಪುರುಷರು, ಇಬ್ಬರು ಮಹಿಳೆಯರು ಹಾಗೂ 10 ವರ್ಷದೊಳಗಿನ ಒಬ್ಬ ಬಾಲಕ ಮತ್ತು ಇಬ್ಬರು ಬಾಲಕಿಯರಿದ್ದಾರೆ. ಇವರಲ್ಲಿ ಬೈಂದೂರಿನ ಐವರು, ಕಾರ್ಕಳದ ನಾಲ್ವರು, ಕುಂದಾಪುರದ ಮೂವರು ಹಾಗೂ ಬ್ರಹ್ಮಾವರದ ಒಬ್ಬರು ಸೇರಿದ್ದಾರೆ.
ಇಂದಿನ 13 ಪಾಸಿಟಿವ್ ಪ್ರಕರಣಗಳೊಂದಿಗೆ ಉಡುಪಿ ಜಿಲ್ಲೆಯಲ್ಲಿ ಈವರೆಗೆ ಬಂದ ಒಟ್ಟು ಪ್ರಕರಣಗಳ ಸಂಖ್ಯೆ 1063ಕ್ಕೇರಿದೆ. ಜಿಲ್ಲೆ ಇದೀಗ ಮೂರನೇ ಸ್ಥಾನಕ್ಕೆ ಕುಸಿದಿದೆ. 1160 ಪ್ರಕರಣಗಳೊಂದಿಗೆ ಕಲಬುರಗಿ ರಾಜ್ಯದಲ್ಲಿ ಅಗ್ರಸ್ಥಾನದಲ್ಲಿದ್ದು, ಇಂದು 94 ಪ್ರಕರಣಗಳೊಂದಿಗೆ ಒಟ್ಟು 1076 ಪಾಸಿಟಿವ್ ಮಂದಿಯನ್ನು ಹೊಂದಿರುವ ಬೆಂಗಳೂರು ನಗರ ಈಗ ಎರಡನೇ ಸ್ಥಾನಕ್ಕೇರಿದೆ. ಯಾದಗಿರಿ 877 ಕೇಸುಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
9ಮಂದಿ ಬಿಡುಗಡೆ: ಜಿಲ್ಲೆಯಲ್ಲಿ ಶನಿವಾರ ಸೋಂಕಿನಿಂದ ಗುಣಮುಖರಾದ 9 ಮಂದಿ ಸೇರಿದಂತೆ ಈವರೆಗೆ ಒಟ್ಟು 959 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಂತಾಗಿದೆ. ಇದೀಗ 102 ಮಂದಿ ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಸೋಂಕಿಗೆ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಿಎಚ್ಓ ತಿಳಿಸಿದರು.
109 ನೆಗೆಟಿವ್: ಇಂದು ಜಿಲ್ಲೆಯಲ್ಲಿ 13 ಪ್ರಕರಣಗಳು ಪಾಸಿಟಿವ್ ಆಗಿದ್ದರೂ, 109 ಮಂದಿಯ ಸ್ಯಾಂಪಲ್ ಸೋಂಕಿಗೆ ನೆಗೆಟಿವ್ ಆಗಿವೆ. ಇಂದು ಒಟ್ಟು 73 ಮಂದಿಯ ಗಂಟಲು ದ್ರವ ಸ್ಯಾಂಪಲ್ಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದರಲ್ಲಿ ಕೋವಿಡ್ ಶಂಕಿತರು 16 ಮಂದಿ, ಕೋವಿಡ್ ಸಂಪರ್ಕಿತರು 10, ಉಸಿರಾಟ ತೊಂದರೆಯವರು ಒಬ್ಬರು, ಶೀತಜ್ವರದಿಂದ ಬಳಲುವ 6 ಮಂದಿ ಹಾಗೂ ವಿವಿಧ ಕೋವಿಡ್ ಹಾಟ್ಸ್ಪಾಟ್ ಪ್ರದೇಶಗಳಿಂದ ಬಂದ 40 ಮಂದಿಯ ಸ್ಯಾಂಪ್ಗಳಿವೆ ಎಂದು ಡಾ.ಸೂಡ ತಿಳಿಸಿದರು.
ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಒಟ್ಟು ಮಾದರಿಗಳ ಸಂಖ್ಯೆ 13300 ಕ್ಕೇರಿದೆ. ಇವುಗಳಲ್ಲಿ ಈವರೆಗೆ 12055 ನೆಗೆಟಿವ್, 1063 ಪಾಸಿಟಿವ್ ಆಗಿವೆ. ಇನ್ನು ಒಟ್ಟು 182 ಸ್ಯಾಂಪಲ್ಗಳ ವರದಿ ಬರಬೇಕಿದೆ. ಗುರುವಾರ 15 ಮಂದಿಯನ್ನು ಐಸೋಲೇಷನ್ ವಾರ್ಡ್ಗೆ ದಾಖಲಿಸಲಾಗಿದೆ. ಇವರಲ್ಲಿ ಕೋವಿಡ್ ಸಂಪರ್ಕಿತರು ನಾಲ್ವರು, ಉಸಿರಾಟ ತೊಂದರೆಯವರು ಐವರು ಹಾಗೂ ಶೀತಜ್ವರದಿಂದ ಬಳಲುವ ಆರು ಮಂದಿ ಎಂದರು.
ಜಿಲ್ಲೆಯ ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡ್ಗಳಿಂದ ಇಂದು 11 ಮಂದಿ ಬಿಡುಗಡೆಗೊಂಡಿದ್ದು, 72 ಮಂದಿ ಇನ್ನೂ ವೈದ್ಯರ ನಿಗಾದಲ್ಲಿದ್ದಾರೆ. ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ 13 ಮಂದಿ ಸೇರಿದಂತೆ ಒಟ್ಟು 5694 ಮಂದಿಯನ್ನು ಕೊರೋನ ತಪಾಸಣೆಗೆ ನೊಂದಾಯಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈಗ 751 ಮಂದಿ ಹೋಮ್ ಕ್ವಾರಂಟೈನ್ನಲ್ಲಿದ್ದಾರೆ ಎಂದು ಡಾ.ಸುಧೀರ್ಚಂದ್ರ ಸೂಡ ಹೇಳಿದರು.
ಉಡುಪಿಯಲ್ಲಿ ಸೋಂಕಿತ ಮೃತರ ಅಂತ್ಯಕ್ರಿಯೆ
ಗುರುವಾರ ಪತ್ನಿ ಮತ್ತು ಮಗಳೊಂದಿಗೆ ಮುಂಬೈಯಿಂದ ಆಗಮಿಸಿ ಸಂಜೆ ತೆಕ್ಕಟ್ಟೆಯ ಮನೆಯಲ್ಲಿ ಕುಸಿದು ಬಿದ್ದು ಮೃತಪಟ್ಟ 54ವರ್ಷ ಪ್ರಾಯದ ವ್ಯಕ್ತಿಯ ಅಂತ್ಯಕ್ರಿಯೆ ಇಂದು ಸಂಜೆ ಜಿಲ್ಲಾಡಳಿತದ ವತಿಯಿಂದ, ಕುಟುಂಬದ ಕೆಲವರ ಉಪಸ್ಥಿತಿಯಲ್ಲಿ ಬೀಡಿನಗುಡ್ಡೆ ರುದ್ರಭೂಮಿಯಿಂದ ನೆರವೇರಿತು ಎಂದು ಡಿಎಚ್ಓ ಡಾ.ಸೂಡ ತಿಳಿಸಿದರು.
ಮೃತರು ಗುರುವಾರ ಅಪರಾಹ್ನ 2:00 ಗಂಟೆ ಸುಮಾರಿಗೆ ಜಿಲ್ಲೆಗೆ ಬಂದು ಕುಟುಂಬ ಸಮೇತ ಕೊರೋನ ಟೆಸ್ಟ್ಗೆ ಒಳಗಾಗಿದ್ದರು. ಅವರಲ್ಲಿ ಕೋವಿಡ್ -19ರ ಯಾವುದೇ ಲಕ್ಷಣಗಳಿಲ್ಲದ ಕಾರಣ ತೆಕ್ಕಟ್ಟೆಯ ಮನೆಯಲ್ಲಿ ಹೋಮ್ ಕ್ವಾರಂಟೈನ್ಗೆ ಕಳುಹಿಸಲಾಗಿತ್ತು. ಆದರೆ ಸಂಜೆ 5ಗಂಟೆ ಸುಮಾರಿಗೆ ಮನೆಯಲ್ಲೇ ಕುಸಿದು ಬಿದ್ದು ಅವರು ಮೃತಪಟ್ಟಿದ್ದರು.
ಈ ಮೂವರಲ್ಲೂ ಸೋಂಕು ಇರುವುದು ಶುಕ್ರವಾರ ಪತ್ತೆಯಾಗಿತ್ತು. ತಕ್ಷಣ ಪತ್ನಿ ಹಾಗೂ ಮಗಳನ್ನು ಕುಂದಾಪುರದ ಕೋವಿಡ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರೊಂದಿಗೆ ಬಂದ ಚಾಲಕನ ಮಾದರಿ ನೆಗೆಟಿವ್ ಫಲಿತಾಂಶ ನೀಡಿದೆ. ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಇರಿಸಿದ್ದ ಅವರ ಮೃತದೇಹದ ಅಂತ್ಯಕ್ರಿಯೆಯನ್ನು ಇಂದು ಸಂಜೆ ಕೋವಿಡ್-19ರ ಮಾರ್ಗದರ್ಶಿ ಸೂತ್ರದಂತೆ ನೆರವೇರಿಸಲಾಗಿದೆ ಎಂದು ಡಾ.ಸೂಡ ತಿಳಿಸಿದರು.







