ಬಂಟ್ವಾಳ: ಗಾಯಾಳು ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು
ಬಂಟ್ವಾಳ, ಜೂ.20: ಬೆಂಕಿ ತಗಲಿ ಸುಟ್ಟ ಗಾಯಗೊಂಡಿದ್ದ ಮಹಿಳೆಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಕಡೇಶ್ವಾಲ್ಯ ಗ್ರಾಮದ ನೆತ್ತರಮನೆ ನಿವಾಸಿ ಹರಿಣಾಕ್ಷಿ(35)ಮೃತಪಟ್ಟ ಮಹಿಳೆ. ಇವರು ಜೂ.2ರಂದು ಮನೆಯಲ್ಲಿ ಗ್ಯಾಸ್ ಖಾಲಿಯಾದ ಕಾರಣ ಒಲೆಯಲ್ಲಿ ತಿಂಡಿ ಬೇಯಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಅವರು ಧರಿಸಿದ್ದ ನೈಟಿಗೆ ಬೆಂಕಿ ಹಿಡಿದಿದೆ. ಇದರಿಂದ ಗಾಯಗೊಂಡಿದ್ದ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಆದರೆ ಜೂ.12ರಂದು ಮತ್ತೆ ಗಾಯ ಉಲ್ಬಣಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story