ಕುಂದಾಪುರ: ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಸಿಐಟಿಯು ಪ್ರತಿಭಟನೆ

ಕುಂದಾಪುರ, ಜೂ.21: ಸಿಐಟಿಯು ಕುಂದಾಪುರ ವತಿಯಿಂದ ಕೇಂದ್ರ ಸರಕಾರದ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಹಾಗೂ ಭಾರತ -ಚೀನಾ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ ದೇಶದ ಸೈನಿಕರಿಗೆ ಶ್ರದ್ದಾಂಜಲಿ ಸಭೆಯನ್ನು ರವಿವಾರ ಕುಂದಾಪುರದಲ್ಲಿ ಆಯೋಜಿಸಲಾಗಿತ್ತು.
ಪ್ರತಿಭಟನ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಮುಖಂಡ ಎಚ್.ನರಸಿಂಹ, ಕರೋನದ ಸಂಕಷ್ಟ ಸಮಯದಲ್ಲಿ ಆದಾಯವಿಲ್ಲದ ಜನರನ್ನು ರಕ್ಷಿಸಬೇಕಾದ ಕೇಂದ್ರ ಸರಕಾರ, ಪ್ರತಿನಿತ್ಯ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡುತ್ತಿರುವುದು ಅಮಾನವೀಯವಾಗಿದೆ. ಜಾಗತಿಕ ಮಟ್ಟದಲ್ಲಿ ಕಚ್ಛಾತೈಲದ ಬೆಲೆ ಗಣನೀಯವಾಗಿ ಇಳಿಕೆ ಕಂಡಿದೆ. ಆದರೆ ಅದರ ಲಾಭವನ್ನು ಜನರಿಗೆ ನೀಡದೆ ಖಾಸಗಿ ಕಂಪೆನಿಗಳಿಗೆ ನೀಡಿ ಜನರನ್ನು ಲೂಟಿ ಮಾಡಲು ಕೇಂದ್ರ ಸರಕಾರ ಅವಕಾಶ ಕೊಡುತ್ತಿದೆ ಎಂದು ದೂರಿದರು.
ಸಿಐಟಿಯು ಜಿಲ್ಲಾ ಅಧ್ಯಕ್ಷ ಕೆ.ಶಂಕರ್ ಮಾತನಾಡಿ, ಸರಕಾರದ ಬೆಲೆ ಏರಿಕೆ, ಕರೋನದ ತಡೆಗಟ್ಟು ವೈಫಲ್ಯವನ್ನು ಜನರಿಂದ ಮರೆಮಾಚಲು ಎಡ ಸಂಘಟನೆ ಗಳ ಮೇಲೆ ಅಪಪ್ರಚಾರ ನಡೆಸಿ ಜನರನ್ನು ದಿಕ್ಕು ತಪ್ಪಿಸಲು ಸಂಚು ನಡೆಸುತ್ತಿದೆ. ಕೇಂದ್ರ ಸರಕಾರ ಕೂಡಲೇ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹುತಾತ್ಮ ಸೈನಿಕರ ಕುಟುಂಬಕ್ಕೆ ಕೇಂದ್ರ ಸರಕಾರ ಪರಿಹಾರ ಘೋಷಣೆ ಮಾಡದಿರುವುದನ್ನು ಖಂಡಿಸಲಾಯಿತು. ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡರಾದ ಸುರೇಶ್ ಕಲ್ಲಾಗರ, ಮಹಾಬಲ ವಡೇರ ಹೋಬಳಿ, ಸಂತೋಷ ಹೆಮ್ಮಾಡಿ, ಜಗದೀಶ ಆಚಾರ್, ಲಕ್ಷ್ಮಣ ಬರೆಕಟ್ಟು, ಜಿ.ಡಿ.ಪಂಜು, ಚಿಕ್ಕ ಮೊಗವೀರ, ಅರುಣ್ ಗಂಗೊಳ್ಳಿ, ಉದಯ ಟೈಲರ್ ಮೊದಲಾದವರು ಉಪಸ್ಥಿತರಿದ್ದರು. ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ ವಂದಿಸಿದರು.







