ಕಾರ್ಕಳ: ತಂಪು ಪಾನೀಯ ಫ್ಯಾಕ್ಟರಿಯಲ್ಲಿ ವಿದ್ಯುತ್ ಆಘಾತ; ಮಾಲಕ ಸ್ಥಳದಲ್ಲೇ ಮೃತ್ಯು
ಅಜೆಕಾರು, ಜೂ.22: ತಂಪು ಪಾನೀಯ ಫ್ಯಾಕ್ಟರಿಯಲ್ಲಿ ಸಂಭವಿಸಿದ ವಿದ್ಯುತ್ ಆಘಾತದಿಂದ ಫ್ಯಾಕ್ಟರಿ ಮಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ನಡೆದಿದೆ.
ಮೃತರನ್ನು ಕಾರ್ಕಳ ತೆಳ್ಳಾರು ರಸ್ತೆಯ ಸಾಂತ್ರಬೆಟ್ಟು ನಿವಾಸಿ ರತ್ನವರ್ಮ ಜೈನ್(52) ಎಂದು ಗುರುತಿಸಲಾಗಿದೆ.
ಫ್ಯಾಕ್ಟರಿಯಲ್ಲಿ ವಿದ್ಯುತ್ ಸಮಸ್ಯೆಯಿದ್ದ ಕಾರಣ ಜನರೇಟರ್ ಬಳಸಲಾಗುತ್ತಿತ್ತು. ಜೂ.21ರಂದು ಇಲೆಕ್ಟ್ರಿಶಿಯನ್ ಆಗಮಿಸಿ ವಿದ್ಯುತ್ ಸಮಸ್ಯೆ ಸರಿಪಡಿಸಿ ಹೋಗಿದ್ದರೆನ್ನಲಾಗಿದೆ. ಇಂದು ಬೆಳಗ್ಗೆ ಫ್ಯಾಕ್ಟರಿ ಆಗಮಿಸಿದ್ದ ರತ್ನವರ್ಮ ಜೈನ್, ವಿದ್ಯುತ್ ಬಂದಿದ್ದ ಕಾರಣ ಜನರೇಟರ್ ಆಫ್ ಮಾಡಲು ಹೋಗಿದ್ದರು. ಈ ಸಂದರ್ಭ ಜನರೇಟರ್ ಸಮೀಪ ನೀರು ನಿಂತ ಪರಿಣಾಮ ವಿದ್ಯುತ್ ಆಘಾತಕ್ಕೊಳಗಾಗಿ ಅವರು ಸ್ಥಳದಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ರತ್ನವರ್ಮ ಜೈನ್ ಕಂಬಳ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆಂದು ತಿಳಿದುಬಂದಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಗಿದೆ.
Next Story