ಕೊರೋನ ಸೋಂಕಿತರ ಚಿತ್ರ ಸೆರೆ ಹಿಡಿದರೆ ಕಾನೂನು ಕ್ರಮ: ಭಾಸ್ಕರ್ ರಾವ್ ಎಚ್ಚರಿಕೆ
ಬೆಂಗಳೂರು, ಜೂ.22: ಕೊರೋನ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ಹೋಗುವ ಸಂದರ್ಭದಲ್ಲಿ ಮೊಬೈಲ್ ಗಳಲ್ಲಿ ಚಿತ್ರ ಅಥವಾ ವಿಡಿಯೊ ಸೆರೆ ಹಿಡಿದರೆ, ಕಾನೂನು ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದರು.
ಈ ಕುರಿತು ಟ್ವಿಟ್ ಮಾಡಿರುವ ಅವರು, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ, ಕೆಲ ಮಾಧ್ಯಮಗಳಲ್ಲೂ ಕೊರೋನ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ತೆಗೆಯಲಾದ ಫೋಟೋ ಹಾಗೂ ವಿಡಿಯೋಗಳು ಪ್ರಸಾರವಾಗಿವೆ. ಇದು ರೋಗಿಯ ಕುರಿತು ಸುತ್ತಮುತ್ತಲಿನ ಜನರಲ್ಲಿ ಭಯ ಹುಟ್ಟಿಸುತ್ತಿದೆ. ನೈತಿಕ ಸ್ಥೈರ್ಯವನ್ನು ಕುಗ್ಗಿಸುತ್ತಿದೆ, ಖಾಸಗಿತನಕ್ಕೆ ಧಕ್ಕೆ ಉಂಟು ಮಾಡುತ್ತಿದೆ ಎಂದು ಪೊಲೀಸ್ ಆಯುಕ್ತರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಮುಂದೆ ಪೂರ್ವಅನುಮತಿ ಇಲ್ಲದೆ ಯಾವ ವ್ಯಕ್ತಿಯು ಕೊರೋನ ಸೋಂಕಿತ ಕುರಿತಾದ ಫೋಟೋ ಮತ್ತು ವಿಡಿಯೋಗಳನ್ನು ತೆಗೆಯಬಾರದು. ಒಂದು ವೇಳೆ ತಪ್ಪು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
Next Story