ಧರ್ಮಸ್ಥಳ: ವಿಪತ್ತು ನಿರ್ವಹಣೆ ಕಾರ್ಯಕ್ರಮದ ಲೋಕಾರ್ಪಣೆ
ಬೆಳ್ತಂಗಡಿ: ಸ್ವಯಂ ಸೇವಕರು ಧೈರ್ಯ, ತ್ಯಾಗ, ಆತ್ಮವಿಶ್ವಾಸ ಮತ್ತು ಸೇವಾ ಮನೋಭಾವ ಹೊಂದಿದ್ದು, ಸ್ವಯಂ ಸ್ಪೂರ್ತಿಯಿಂದ ರಕ್ಷಣಾಕಾರ್ಯಕ್ಕೆ ಸದಾ ಬದ್ಧರಾಗಿರಬೇಕು ಹಾಗೂ ಸಿದ್ಧರಾಗಿರಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯನ ಆಶ್ರಯದಲ್ಲಿ ಸರ್ಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣಾಘಟಕದ ಸಹಭಾಗಿತ್ವದಲ್ಲಿ ಧರ್ಮಸ್ಥಳದಲ್ಲಿ ಸೋಮವಾರ ಆಯೋಜಿಸಿದ ವಿಪತ್ತು ನಿರ್ವಹಣೆ ಕಾರ್ಯಕ್ರಮದ ಲೋಕಾರ್ಪಣೆ ಮತ್ತು ಸ್ವಯಂ ಸೇವಕರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಪತ್ತಿನ ಸಂದರ್ಭದಲ್ಲಿ ಸ್ವಯಂ ಸೇವಕರು ತಕ್ಷಣ ಸ್ಪಂದಿಸಬೇಕು. ಮೊದಲು ತಮ್ಮನ್ನುತಾವು ರಕ್ಷಣೆ ಮಾಡಿಕೊಂಡು ಬಳಿಕ ಇತರರ ರಕ್ಷಣೆಗೆ ನೆರವಾಗಬೇಕು. ಪ್ರಜ್ಞಾವಂತರಾಗಿ ತಾವೂ ಬದುಕಿ, ಇತರರೂ ಬದುಕಲು ನೆರವಾಗುವುದು ಮಾನವಧರ್ಮವಾಗಿದೆ. ಆಪತ್ತು ನಿರ್ವಹಣೆ ಮಾಡಲು ಸಾಮಾಜಿಕ ಹೊಣೆಗಾರಿಕೆಯಾಗಿದ್ದು, ವೈಜ್ಞಾನಿಕವಾಗಿ ಶಿಸ್ತು ಬದ್ಧವಾಗಿ ವಿಪತ್ತು ನಿರ್ವಹಣೆ ಸ್ವಯಂ ಸೇವಕರಿಗೆ ಮಾಹಿತಿ, ಮಾರ್ಗದರ್ಶನ ಹಾಗೂ ತರಬೇತಿಯ ಅಗತ್ಯವಿದೆ. ರಕ್ಷಣಾ ಪರಿಕರಗಳ ಸಮರ್ಪಕ ಬಳಕೆ ಬಗ್ಯೆಯೂ ಅವರಿಗೆ ಮಾಹಿತಿ ನೀಡಲಾಗುವುದು. ಸ್ವಯಂ ಸೇವಕರು ತಮ್ಮ ಮನೆಯವರಿಗೂ, ನೆರೆಕರೆಯವರಿಗೂ ವಿಪತ್ತು ನಿರ್ವಹಣೆ ಬಗ್ಯೆ ಸೂಕ್ತ ಮಾಹಿತಿ, ಮಾರ್ಗದರ್ಶನ ನೀಡಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.
ರಾಜ್ಯದ 55 ಸೂಕ್ಷ್ಮ ಪ್ರದೇಶಗಳಲ್ಲಿ ವಿಪತ್ತು ನಿರ್ವಹಣೆಗಾಗಿ ಸ್ವಯಂ ಸೇವಕರ ತಂಡಗಳನ್ನು ರಚಿಸಲಾಗುವುದು. ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಮಾತನಾಡಿ, ವಿಪತ್ತಿನ ಸಂದರ್ಭದಲ್ಲಿ ಸ್ವಯಂ ಸೇವಕರು ಜನರ ಪ್ರಾಣ ಹಾಗೂ ಸಂಪತ್ತಿನ ರಕ್ಷಣೆಗೆಕಟಿಬದ್ಧರಾಗಿರಬೇಕು ಎಂದು ಸಲಹೆ ನೀಡಿದರು. ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಮಾತನಾಡಿ, ಸೂಕ್ತ ತರಬೇತಿಯಿಂದ ಸ್ವಯಂ ಸೇವಕರು ಉತ್ತಮ ರೀತಿಯ ಸೇವೆ ನೀಡಲು ಅನುಕೂಲವಾಗುತ್ತದೆ ಎಂದು ಹೇಳಿ ಶುಭ ಹಾರೈಸಿದರು.
ಡಿ. ಸುರೇಂದ್ರಕುಮಾರ್, ರಾಷ್ಟ್ರೀಯ ವಿಪತ್ತು ನಿರ್ವಹಣಾಘಟಕದ ಮುಖ್ಯಸ್ಥ ಗೋಪಾಲ್ಲಾಲ್ ಮೀನಾ, ಮಂಗಳೂರು ಘಟಕದ ಅಧಿಕಾರಿ ವಿಜಯಕುಮಾರ್ ಉಪಸ್ಥಿತರಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್ಎಚ್.ಮಂಜುನಾಥ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ನಿರ್ದೇಶಕ ಬೂದಪ್ಪಗೌಡ ಧನ್ಯವಾದವಿತ್ತರು.
ವಿಪತ್ತು ನಿರ್ವಹಣೆಗಾಗಿ ರಾಜ್ಯದಲ್ಲಿ 55 ಸೂಕ್ಷ್ಮ ಪ್ರದೇಶಗಳಲ್ಲಿ ಸ್ವಯಂ ಸೇವಕರ ತಂಡಗಳನ್ನು ರಚಿಸಿ ತರಬೇತಿ ನೀಡಲಾಗುತ್ತಿದ್ದು ಪ್ರಥಮ ವಾಗಿ ಬೆಳ್ತಂಗಡಿ ತಾಲ್ಲೂಕಿನ 200 ಸ್ವಯಂ ಸೇವಕರತಂಡ ಸೋಮವಾರ ಧರ್ಮಸ್ಥಳದಲ್ಲಿ ಉದ್ಘಾಟನೆಗೊಂಡಿತು. ಇವರಿಗೆ ಸ್ವಯಂ ಸೇವಕರಿಗೆ ರಕ್ಷಣಾ ಪರಿಕರಗಳನ್ನು ವಿತರಿಸಲಾಯಿತು. ಬಳಿಕ ನೇತ್ರಾವತಿ ಸ್ನಾನಘಟ್ಟದಲ್ಲಿ ವಿಪತ್ತು ನಿರ್ವಹಣೆ ಬಗ್ಯೆ ಪ್ರಾತ್ಯಕ್ಷಿಕೆ ನಡೆಯಿತು