ಇತಿಹಾಸ ಪುಟ ಸೇರಿದ ಮೈಸೂರಿನ ಶಾಂತಲಾ ಚಿತ್ರಮಂದಿರ

ಮೈಸೂರು,ಜೂ.22: ನಾಲ್ಕು ದಶಕಗಳಿಂದ ಸಾವಿರಕ್ಕೂ ಹೆಚ್ಚು ಸಿನಿಮಾ ಪ್ರದರ್ಶಿಸಿದ ಮೈಸೂರಿನ ಶಾಂತಲಾ ಚಿತ್ರಮಂದಿರ ಇತಿಹಾಸ ಪುಟ ಸೇರಿದೆ.
ಕೊರೋನ ಕಾರಣದಿಂದ ಎಲ್ಲ ಚಿತ್ರಮಂದಿರಗಳಂತೆ ತಾತ್ಕಲಿಕವಾಗಿ ಮುಚ್ಚಿದ್ದ ಶಾಂತಲಾ ಚಿತ್ರಮಂದಿರ ಇದೀಗ ಶಾಶ್ವತವಾಗಿ ಮುಚ್ಚುತ್ತಿದೆ. ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್ ಇಲ್ಲಿ ಪ್ರದರ್ಶನವಾದ ಕೊನೆಯ ಸಿನಿಮಾವಾಗಿದೆ.
1974ರಲ್ಲಿ ಆರಂಭವಾದ ಶಾಂತಲಾ ಟಾಕೀಸ್ 'ಫ್ಯಾಮಿಲಿ ಟಾಕೀಸ್' ಎಂದೇ ಹೆಸರುವಾಸಿಯಾಗಿತ್ತು. ಇಲ್ಲಿ ಬ್ಲಾಕ್ ಟಿಕೆಟ್ ಮಾರಾಟಕ್ಕೆ ಅವಕಾಶವಿರಲ್ಲಿಲ್ಲ. ಶಿಳ್ಳೆ, ಚಪ್ಪಾಳೆ, ಕೇಕೆಯೊಂದಿಗೆ ಸಂಭ್ರಮಿಸಲು ಅಡ್ಡಿಯಿರಲಿಲ್ಲ. ಆದರೆ ಪ್ರೇಕ್ಷಕರಿಗೆ ಕಿರಿಕಿರಿ ಉಂಟು ಮಾಡಿದರೆ, ಹೆಣ್ಣು ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸಿದರೆ ತಕ್ಷಣ ಅಂತಹವರನ್ನು ಹೊರಗೆ ಕಳುಹಿಸಲಾಗಿತ್ತಿತ್ತು. ಹೀಗಾಗಿ ಶಾಂತಲಾ 'ಫ್ಯಾಮಿಲಿ ಟಾಕೀಸ್' ಎಂದೇ ಹೆಸರುವಾಸಿಯಾಗಿತ್ತು. ಕಾಲಕ್ಕೆ ತಕ್ಕಂತೆ ಚಿತ್ರಮಂದಿರ ನವೀಕರಣಗೊಂಡರೂ ಇಲ್ಲಿನ ಪದ್ಧತಿ, ನಿಯಮಗಳು ಮಾತ್ರ ಬದಲಾಗಿರಲಿಲ್ಲ.
ಶಾಂತಲಾ ನಿರ್ದೇಶಕರ ಹಾಗೂ ಪ್ರೇಕ್ಷಕರ ನೆಚ್ಚಿನ ಚಿತ್ರಮಂದಿರವಾಗಿತ್ತು. ಚಿತ್ರರಂಗದ ಗಣ್ಯರು, ನಾಯಕ ನಟರು, ನಿರ್ದೇಶಕರು ಈ ಥಿಯೇಟರ್ ನಲ್ಲಿ ಕೂತು ತಮ್ಮ ಸಿನಿಮಾ ವೀಕ್ಷಿಸಿದ್ದಾರೆ.
ಸ್ಟಾರ್ ನಟ ಚಿತ್ರಗಳು ಮಾತ್ರವಲ್ಲದೆ, ಹೊಸಬರ ಚಿತ್ರಗಳು ಇಲ್ಲಿ ಪ್ರದರ್ಶನಗೊಂಡಿವೆ. ಡಾ.ರಾಜ್ ಕುಮಾರ್ ಅವರ ಹೊಸಬೆಳಕು, ಕಲ್ಪನಾ ಅವರ ಶರಪಂಜರ, ರಮೇಶ್ ಅಭಿನಯದ ಅಮೆರಿಕಾ ಅಮೆರಿಕಾ, ಪ್ರೇಮ್ ಅವರ ನೆನಪಿರಲಿ, ಮುರುಳಿ ಅವರ ಚಂದ್ರಚಕೋರಿ, ಶಿವರಾಜ್ ಅವರ ಟಗರ ಹೀಗೆ ಹಲವು ಸಿನಿಮಾಗಳು 25 ವಾರಗಳ ಪ್ರದರ್ಶನ ಕಂಡಿವೆ. ನೂರಾರು ಸಿನಿಮಾಗಳು ಶತದಿನ ಪೂರೈಸಿವೆ. ಬಹುಭಾಷಾ ನಟ ಕಮಲ ಹಾಸನ್ ಅಭಿನಯದ ಸ್ವಾತಿ ಮುತ್ಯಂ ಒಂದು ವರ್ಷ ಪ್ರದರ್ಶನವಾಗಿರುವ ದಾಖಲೆಯೂ ಇದೆ. ಎರಡು ಬಾರಿ ಜಿಲ್ಲೆಯ ಅತ್ಯುತ್ತಮ ಥಿಯೇಟರ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಈ ಬಗ್ಗೆ ಮಾತನಾಡಿರುವ ಚಿತ್ರಮಂದಿರದ ಮಾಲೀಕರಾದ ಎನ್.ಪಿ.ಪದಕಿ ಅವರು, ಕೊರೋನ ವೈರಸ್ ನಿಂದ ಥಿಯೇಟರ್ ಗಳನ್ನು ತಾತ್ಕಲಿಕವಾಗಿ ಮುಚ್ಚಲಾಗಿದೆ. ಹೀಗಾಗಿ ಆದಾಯವಿಲ್ಲ. ವಿದ್ಯುತ್ ಶುಲ್ಕ ಸೇರಿದಂತೆ ನಾನಾ ಶುಲ್ಕವನ್ನು ಪ್ರತಿ ತಿಂಗಳು ಕಟ್ಟಬೇಕಾಗಿದೆ. ಥಿಯೇಟರ್ ನ ಭೋಗ್ಯದ ಅವಧಿಯೂ ಮುಕ್ತಾಯವಾಗಿದೆ. ಹಾಗಾಗಿ ಚಿತ್ರಮಂದಿರ ಮುಚ್ಚುತ್ತಿದ್ದೇವೆ ಎಂದರು.
ಅನಾಥಾಲಯ ಟ್ರಸ್ಟ್ ಗೆ ಸೇರದಿ ಜಾಗವನ್ನು ಗುತ್ತಿಗೆ ಪಡೆದು 1974 ರಲ್ಲಿ ಶಾಂತಲಾ ಚಿತ್ರಮಂದಿರ ನಿರ್ಮಿಸಿ, ನಿರ್ವಹಿಸಿಕೊಂಡು ಬಂದಿದ್ದೆವು. ಆರಂಭದಲ್ಲಿ 30 ವರ್ಷದ ಗುತ್ತಿಗೆ ಅವಧಿ ಮುಗಿದಾಗ ಟ್ರಸ್ಟ್ ಗೆ ಮನವಿ ಮಾಡಿದ್ದರಿಂದ ಗುತ್ತಿಗೆ ಅವಧಿ ವಿಸ್ತರಿಸಲಾಗಿತ್ತು. ಸದ್ಯ ಗುತ್ತಿಗೆ ಅವಧಿಯನ್ನು ವಿಸ್ತರಿಸಲು ಟ್ರಸ್ಟ್ ಅನುಮತಿಸಿಲ್ಲ. ಆದ್ದರಿಂದ ಕಟ್ಟಡ ಸಹಿತವಾಗಿ ಜಾಗವನ್ನು ಅನಾಥಾಲಯ ಟ್ರಸ್ಟ್ ಗೆ ಬಿಟ್ಟುಕೊಡಬೇಕು ಎಂದರು.
ಕೊರೋನ ಹೊಡೆತದಿಂದಾಗಿ ನಗರದಲ್ಲಿ ನಾಲ್ಕೈದು ಚಿತ್ರಮಂದಿರಗಳ ಮಾಲಕರು ಚಿತ್ರಮಂದಿರಗಳನ್ನು ಮಾರಾಟ ನಿರ್ಧರಿಸಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಪದ್ಮ ಚಿತ್ರಮಂದಿರ ಮಾರಾಟಕ್ಕಿದೆ ಎನ್ನಲಾಗಿತ್ತು. ಈ ಬಗ್ಗೆ ಮಾತನಾಡಿರುವ ಚಿತ್ರಮಂದಿರದ ಮಾಲೀಕ ಜಯರಾಜ್, ಚಿತ್ರಮಂದಿರವನ್ನು ಮಾರಾಟ ಮಾಡುತ್ತಿಲ್ಲ. ಇದು ಸುಳ್ಳು ಸುದ್ದಿ ಎಂದಿದ್ದಾರೆ.







