ಆಸ್ತಿ ಘೋಷಣೆ ಸಲ್ಲಿಸದ ಗ್ರಾಪಂ, ತಾಪಂ ಸದಸ್ಯರು : ಉಡುಪಿ ತಾಪಂ ಸಾಮಾನ್ಯ ಸಭೆಯಲ್ಲಿ ಅಸಮಾಧಾನ

ಉಡುಪಿ, ಜೂ.23: ಗ್ರಾಮೀಣ ಸ್ಥಳೀಯ ಸಂಸ್ಥೆಯ ಚುನಾಯಿತ ಸದಸ್ಯ ರಲ್ಲಿ ಬಹುತೇಕ ಮಂದಿ ಈವರೆಗೆ ಆಸ್ತಿ ಮತ್ತು ಹೊಣೆಗಾರಿಕೆಯ ಘೋಷಣೆ ಯನ್ನು ಸಲ್ಲಿಸದಿರುವ ಬಗ್ಗೆ ಮಂಗಳವಾರ ನಡೆದ ಉಡುಪಿ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು.
ಉಡುಪಿ ತಾಪಂ ಪ್ರಭಾರ ಅಧ್ಯಕ್ಷ ಶರತ್ ಕುಮಾರ್ ಬೈಲಕೆರೆ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ತಾಪಂ ಕಾರ್ಯ ನಿರ್ವಹಣಾಧಿಕಾರಿ ಮೋಹನ್ರಾಜ್, ತಾಪಂ ಒಟ್ಟು 13 ಸದಸ್ಯರ ಪೈಕಿ 10 ಮಂದಿ ಇನ್ನು ಕೂಡ ತಮ್ಮ ಆಸ್ತಿಯನ್ನು ಘೋಷಣೆ ಮಾಡಿಲ್ಲ. ಕೂಡಲೇ ಪ್ರತಿಯನ್ನು ಆನ್ಲೈನ್ ಮೂಲಕ ಮತ್ತು ತಾಪಂ ಕಚೇರಿಗೆ ಸಲ್ಲಿಸಬೇಕು ಎಂದರು.
ಅದೇ ರೀತಿ ಬಹುತೇಕ ಗ್ರಾಪಂ ಸದಸ್ಯರು ಕೂಡ ಆಸ್ತಿ ಘೋಷಣೆಯನ್ನು ಸಲ್ಲಿಸಿಲ್ಲ. ಮಾರ್ಚ್ನಲ್ಲಿ ಸಲ್ಲಿಕೆ ಮಾಡಬೇಕಾಗಿರುವುದನ್ನು ಜೂನ್ ತಿಂಗಳಾ ದರೂ ಸಲ್ಲಿಕೆ ಮಾಡಿಲ್ಲ. ಇದರಲ್ಲಿ ಒಂದು ಪ್ರತಿ ಆನ್ಲೈನ್, ಒಂದು ಪ್ರತಿ ಕಚೇರಿ ಮತ್ತು ಲೋಕಾಯುಕ್ತಕ್ಕೆ ಸಲ್ಲಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಡಿಸಿಯಿಂದ ಬಿಲ್ ಮಂಜೂರು: ಕೋವಿಡ್-19 ಸಂಬಂಧ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಅಂಗನವಾಡಿ ಕಾರ್ಯಕರ್ತೆಯರಿಗೆ ಯಾವುದೇ ಸುರಕ್ಷಿತ ಸಲಕರಣೆಗಳಿಲ್ಲ. ಸ್ಯಾನಿಟೈಸರ್, ಗ್ಲಾಸ್ಗಳಿಲ್ಲದೆಯೇ ಅವರು ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಧನಂಜಯ್ ಕುಂದರ್ ಸಭೆುಲ್ಲಿ ದೂರಿದರು.
ಈ ಬಗ್ಗೆ ಉತ್ತರಿಸಿದ ತಾಪಂ ಕಾರ್ಯನಿರ್ವಹಣಾಧಿಕಾರಿ ಮೋಹನ್ ರಾಜ್, ಜಿಲ್ಲಾಡಳಿತ ಪ್ರತಿ ಗ್ರಾಪಂಗಳಿಗೆ ಕೊರೋನ ಸಂಬಂಧ 20ಸಾವಿರ ರೂ. ಅನುದಾನವನ್ನು ನೀಡಿದೆ. ಆದರೆ ಆ ಹಣದಲ್ಲಿ ಸುರಕ್ಷತಾ ಸಲಕರಣೆ ಖರೀದಿಸಲು ಸಾಧ್ಯವಾಗುವುದಿಲ್ಲ. ಆದುದರಿಂದ ಆಯಾ ಗ್ರಾಪಂ ಗಳು ಅಂಗನವಾಡಿ ಕಾರ್ಯಕರ್ತೆಯರಿಗೆ ಸುರಕ್ಷತಾ ಸಲಕರಣೆಗಳನ್ನು ಖರೀದಿಸಿ, ಬಳಿಕ ಬಿಲ್ನ್ನು ತಾಪಂಗೆ ನೀಡಬೇಕು. ಆ ಹಣ ಜಿಲ್ಲಾಡಳಿತ ದಿಂದ ಮಂಜೂರು ಮಾಡಲಾಗುವುದು ಎಂದರು.
ಗ್ರಾಪಂ ಕಾರ್ಯಪಡೆಗಳಿಗೆ ಕೊರೋನ ನಿಯಂತ್ರಣಕ್ಕೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದ್ದು, ಈ ಪಡೆ ಸರಿಯಾಗಿ ಕಾರ್ಯನಿರ್ವಹಿಸಿದರೆ ಸಮುದಾಯ ಮಟ್ಟಕ್ಕೆ ಹರಡುವುದನ್ನು ತಡೆಯಬಹುದಾಗಿದೆ. ಇನ್ನು ಮುಂದಿನ ಎರಡು ತಿಂಗಳುಗಳ ಕಾಲ ನಾವು ಸಾಕಷ್ಟು ಎಚ್ಚರಿಕೆಯಿಂದ ಇರಬೇಕಾಗಿದೆ ಎಂದರು.
ಈ ಕಾರ್ಯಪಡೆಯಲ್ಲಿ ಮುಖ್ಯವಾಗಿ ಸ್ಥಳೀಯ ಜನಪ್ರತಿನಿಧಿಗಳನ್ನು ಭಾಗಿ ಗಳನ್ನಾಗಿ ಮಾಡಬೇಕು. ಆಗ ಕ್ವಾರಂಟೇನ್ನಲ್ಲಿರುವವರ ಬಗ್ಗೆ ಹೆಚ್ಚಿನ ನಿಗಾ ವಹಿಸಲು ಸಾಧ್ಯವಾಗುತ್ತದೆಂದು ಸದಸ್ಯ ರಾಜೇಂದ್ರ ಪಂದುಬೆಟ್ಟು ಹೇಳಿದರು.
ಮರ ತೆರವಿಗೆ ಕ್ರಮ: ಹಿರಿಯಡ್ಕ ಓಂತಿಬೆಟ್ಟು ವ್ಯಾಪ್ತಿಯ ಅಪಾಯಕಾರಿ ಮರಗಳ ತೆರವಿನ ಬಗ್ಗೆ ಅನೇಕ ಸಭೆಗಲ್ಲಿ ಪ್ರಸ್ತಾಪ ಮಾಡಿದರೂ ಈವರೆಗೆ ಮರಗಳನ್ನು ತೆರವುಗೊಳಿಸಿಲ್ಲ ಎಂದು ಸದಸ್ಯ ಲಕ್ಷ್ಮೀನಾರಾಯಣ ಪ್ರಭು ಸಭೆಯಲ್ಲಿ ಅರಣ್ಯಾಧಿಕಾರಿಗಳ ವಿರುದ್ಧ ತೀವ್ರ ಅಸಮಾ ಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅರಣ್ಯಾಧಿಕಾರಿಗಳು, ಈಗಾಗಲೇ 41 ಮರಗಳ ತೆರವಿಗೆ ಅನುಮತಿ ದೊರೆತಿದೆ. ಕೆಲವು ಮರಗಳನ್ನು ತೆಗೆಯಲಾಗಿದೆ. ಆದರೆ ವಿದ್ಯುತ್ ತಂತಿ ಹಾದು ಹೋಗಿರುವುದರಿಂದ ಉಳಿದ ಮರಗಳನ್ನು ತೆರವು ಗೊಳಿಸಲು ಮೆಸ್ಕಾಂನವರ ಅನುಮತಿ ಬೇಕಾಗಿದೆ. ಈ ಬಗ್ಗೆ ಅನುಮತಿಗಾಗಿ ಪತ್ರ ಬರೆಯಲಾಗಿದೆ ಎಂದರು. ಕೂಡಲೇ ಅನುಮತಿ ಪಡೆದು ಒಂದು ವಾರ ದೊಳಗೆ ಈ ಬಗ್ಗೆ ಕ್ರಮ ಕೈಗೊಳಬೇಕೆಂದು ಅಧ್ಯಕ್ಷರು ಅಧಿಕಾರಿಗೆ ಸೂಚಿಸಿದರು.
ಸಭೆ ಆರಂಭಕ್ಕೆ ಮುನ್ನ ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಉಪಸ್ಥಿತರಿದ್ದರು.
ನರೇಗಾದಡಿ ಮಲ್ಲಿಗೆ ಕೃಷಿ
ಮಲ್ಲಿಗೆ ಕೃಷಿಯನ್ನು ಈಗ ಉದ್ಯೋಗ ಖಾತ್ರಿ ಯೋಜನೆಯಡಿ ಸೇರಿಸ ಲಾಗಿದ್ದು, ಈಗಾಗಲೇ 50 ಕಾಮಗಾರಿಗಳಿಗೆ ಅನುಮೋದನೆಯನ್ನು ನೀಡಲಾಗಿದೆ. ಆಯಾ ಗ್ರಾಪಂಗಳು ಮಲ್ಲಿಗೆ ಕೃಷಿ ಮಾಡುವವರ ಪಟ್ಟಿಯನ್ನು ಇಲಾಖೆಗೆ ಕಳುಹಿಸಿದರೆ ಕಾಮಗಾರಿ ನಡೆಸಲು ಅನುಮೋದನೆ ನೀಡಲಾಗು ವುದು ಎಂದು ತೋಟಗಾರಿಕೆ ಇಲಾಖಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
15ನೆ ಹಣಕಾಸು ಯೋಜನೆಯಡಿ 2020-21ನೆ ಸಾಲಿಗೆ ಕ್ರಿಯಾಯೋಜನೆ ಯನ್ನು ತಯಾರಿಸಲು ಉಡುಪಿ ತಾಪಂಗೆ 1.03ಕೋಟಿ ರೂ., ಕಾಪು ತಾಪಂಗೆ 90,70190ರೂ ಹಾಗೂ ಬ್ರಹ್ಮಾವರ ತಾಪಂಗೆ 1.29ಕೋಟಿ ರೂ. ಅನುದಾನ ವನ್ನು ಹಂಚಿಕೆ ಮಾಡಲಾಗಿದೆ ಎಂದು ಕಾರ್ಯನಿರ್ವಹಣಾಧಿಕಾರಿ ಮಾಹಿತಿ ನೀಡಿದರು.
ಉಡುಪಿ ತಾಪಂ ಸದಸ್ಯರ ವಿಂಗಡನೆ
ಉಡುಪಿ ತಾಲೂಕು ಉಡುಪಿ, ಕಾಪು ಹಾಗೂ ಬ್ರಹ್ಮಾವರ ತಾಲೂಕು ಗಳಾಗಿ ವಿಂಗಡನೆಯಾಗಿರುವುದರಿಂದ ಉಡುಪಿ ತಾಪಂನ ಒಟ್ಟು 41 ಸದಸ್ಯರನ್ನು ಕೂಡ ಸರಕಾರದ ಆದೇಶದಂತೆ ಆಯಾ ಕ್ಷೇತ್ರಗಳಿಗೆ ಅನುಗುಣವಾಗಿ ವಿಂಗಡಿಸಲಾಗಿದೆ. ಅದರಂತೆ ಉಡುಪಿ ತಾಪಂ ವ್ಯಾಪ್ತಿಗೆ 13, ಕಾಪು 12 ಮತ್ತು ಬ್ರಹ್ಮಾವರ 16 ಮಂದಿ ಸದಸ್ಯರು ಒಳಪಡುತ್ತಾರೆ. ಹೀಗೆ ವಿಂಗಡನೆ ಬಳಿಕ ಮೊದಲ ಉಡುಪಿ ತಾಪಂ ಸಾಮಾನ್ಯ ಸಭೆಯು ಇಂದು ನಡೆಯಿತು.
ಕಾಪು ಮತ್ತು ಬ್ರಹ್ಮಾವರ ತಾಪಂಗೆ ಜಿಪಂ ಉಪಕಾರ್ಯದರ್ಶಿ ಕಿರಣ್ ಅವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಮುಂದೆ ಸಭೆ ಕರೆದು ಸರಕಾರ ಪ್ರಕಟಿಸಿರುವ ಮೀಸಲಾತಿ(ಕಾಪು: ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಪ್ರವರ್ಗ ಬಿ(ಮಹಿಳೆ), ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮತ್ತು ಬ್ರಹ್ಮಾವರ: ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಪ್ರವರ್ಗ ಎ)ಯಂತೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ.







