ಕಾರ್ಸ್ಟ್ರೀಟ್ ಕಾಲೇಜಿನ ಬಂಗಾಳಿ ವಿದ್ಯಾರ್ಥಿಗಳಿಗೆ ವಿಮಾನಯಾನ
ಮಂಗಳೂರು, ಜೂ.23: ಡಾ.ಪಿ. ದಯಾನಂದ ಪೈ- ಪಿ. ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಬಿಎಸ್ಡಬ್ಲೂ ಪದವಿ ವ್ಯಾಸಂಗ ಮಾಡುತ್ತಿರುವ, ಮೂಲತಃ ಪಶ್ಚಿಮ ಬಂಗಾಳದ ಸಿಲಿಗುರಿ ಜಿಲ್ಲೆಯ ಹತ್ತು ವಿದ್ಯಾರ್ಥಿಗಳು ಸುರಕ್ಷಿತವಾಗಿ ವಿಮಾನ ಯಾನದ ಮೂಲಕ ತಮ್ಮ ಹುಟ್ಟೂರಿಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರಿನ ರಥಬೀದಿಯ ಸರಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪಶ್ಚಿಮ ಬಂಗಾಳದ ನಿವಾಸಿಗಳಾದ ಹತ್ತು ಜನ ವಿದ್ಯಾರ್ಥಿ ಗಳು ಕೋವಿಡ್-19 ಬಿಕ್ಕಟ್ಟಿನಿಂದಾಗಿ ತಮ್ಮ ಗ್ರಾಮಗಳಿಗೆ ಹಿಂದಿರುಗಲು ಸಾಧ್ಯವಾಗದೆ ಸಿಕ್ಕಿ ಹಾಕಿಕೊಂಡಿದ್ದರು.
ಕೊರೋನ ಸಂಕಷ್ಟದ ಸನ್ನಿವೇಶಗಳಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜಶೇಖರ್ ಹೆಬ್ಬಾರ್, ಉಪನ್ಯಾಸಕರ ಹಾಗೂ ಸ್ಥಳೀಯ ದಾನಿಗಳ ನೆರವಿನಿಂದ ಈ ವಿದ್ಯಾರ್ಥಿಗಳ ಪೋಷಣೆಗೆ ಬೆಂಬಲವಾಗಿ ನಿಂತರು. ಲಾಕ್ಡೌನ್ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಅನ್ನ, ವಸತಿ ಹಾಗೂ ಇನ್ನಿತರ ಮೂಲಭೂತ ಸೌಕರ್ಯ ಒದಗಿಸಿದ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ ಮಾನಸಿಕವಾಗಿಯೂ ಸಾಂತ್ವನ ನೀಡಿದರು.
ವಿದ್ಯಾರ್ಥಿಗಳ ಪೋಷಕ ತಾರಕ್ ಅವರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಅವರ ಹುಟ್ಟೂರಿಗೆ ಮರಳಿಸುವ ಕೈಂಕರ್ಯಕ್ಕೆ ಏರ್ ಏಷ್ಯಾ ವಿಮಾನದ ಅಧಿಕಾರಿಗಳನ್ನು ಸಂಪರ್ಕಿಸಿ, ರಿಯಾಯಿತಿ ದರದಲ್ಲಿ ವಿಮಾನದ ಟಿಕೆಟ್ಗಳನ್ನು ಕಾಯ್ದಿರಿಸಿದರು. ವಿಮಾನಯಾನದ ವೆಚ್ಚದ ಶೇ.50ರಷ್ಟು ಏರ್ ಏಷ್ಯಾ, ಶೇ.25ರಷ್ಟು ಪ್ರಾಂಶುಪಾಲರು ಹಾಗೂ ಶೇ.25ರಷ್ಟು ಅಲ್ಲಿನ ಎನ್ಜಿಒದಿಂದ ಭರಿಸಲಾಯಿತು. ಹೀಗೆ ಎಲ್ಲ ಪಶ್ಚಿಮ ಬಂಗಾಳದ ವಿದ್ಯಾರ್ಥಿಗಳನ್ನು ಜೂ.19ರಂದು ಸುರಕ್ಷಿತವಾಗಿ ತಮ್ಮ ಗ್ರಾಮ ಸಿಲಿಗುರಿಗೆ ಕಳುಹಿಸಿಕೊಟ್ಟು ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.
ಪ್ರಾಂಶುಪಾಲ ಪ್ರೊ.ರಾಜಶೇಖರ್ ಹೆಬ್ಬಾರ್ ಅವರು ತಮ್ಮ ವೈಯಕ್ತಿಕ ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಮಂಗಳೂರಿನಿಂದ ಬೆಂಗಳೂರಿಗೆ ತೆರೆಳಲು ಬಸ್ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದರು. ವಿದ್ಯಾರ್ಥಿಗಳಿಗೆ ಪ್ರಯಾಣದ ವೇಳೆಯಲ್ಲಿ ಅವಶ್ಯವಿರುವ ಎಲ್ಲ ವೈದ್ಯಕೀಯ ಸುರಕ್ಷತಾ ಮುನ್ನೆಚ್ಚರಿಕೆಯ ತಪಾಸಣಾ ಹಾಗೂ ಪ್ರಮಾಣಪತ್ರ ಪಡೆಯುವ ಜವಾಬ್ದಾರಿಯನ್ನು ಕಾಲೇಜಿನ ಸಿಬ್ಬಂದಿ ನಾಗೇಂದ್ರ ಆಚಾರ್ಯ ವಹಿಸಿದ್ದರು.