ವಿಕಲಚೇತನ ಸಿಂಧೂರಿಗೆ ಸಿಎಂ ಶಾಭಾಸ್ಗಿರಿ
ಉಡುಪಿ, ಜೂ.23: ವಿಕಲಚೇತನ ಬಾಲಕಿಯಾಗಿದ್ದರೂ, ಯಾವುದೇ ಹಿಂಜರಿಕೆ ತೋರದೇ ಕೋವಿಡ್-19ರಿಂದ ರಕ್ಷಿಸುವ 15ಕ್ಕೂ ಅಧಿಕ ಮಾಸ್ಕ್ಗಳನ್ನು ತಾಯಿಯ ಹೊಲಿಗೆಯ ಮಿಷನ್ನಲ್ಲಿ ಹೋಲಿದು ಸಿದ್ಧಪಡಿಸಿರುವ ಕಲ್ಯಾಣಪುರ ಸಂತೆಕಟ್ಟೆಯ ಆರನೇ ತರಗತಿ ವಿದ್ಯಾರ್ಥಿನಿ ಸಿಂಧೂರಿ ಅವರ ಸಾಹಸ ಇದೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಶಾಭಾಸ್ಗಿರಿಯನ್ನು ಗಿಟ್ಟಿಸಿದೆ.
‘ಸಿಂಧೂರಿ ಎಂಬ ಪುಟ್ಟ ಕೋವಿಡ್ ವಾರಿಯರ್ ಬಗ್ಗೆ ಹೆಮ್ಮೆ ಎನಿಸುತ್ತಿದೆ. ಮಾಸ್ಕ್ ಹೊಲಿಯುವಾಗ ಆಕೆಯ ಮೊಗದಲ್ಲಿದ್ದ ನಗು, ನಮ್ಮೆಲ್ಲಾ ಮಿತಿಗಳನ್ನು ಮೀರಲು ಸ್ಪೂರ್ತಿ ತುಂಬುವುದಲ್ಲದೇ, ಕೋವಿಡ್-19ರ ವಿರುದ್ಧದ ಹೋರಾಟವನ್ನು ಎಲ್ಲರೂ ಜೊತೆಯಾಗಿ ಸೇರಿ ಮಾಡಲು ಬಲವನ್ನು ತುಂಬುತ್ತದೆ’ ಎಂದು ಯಡಿಯೂರಪ್ಪ ಅವರು ಇಂದು ಮಾಡಿರುವ ಟ್ವಿಟ್ನಲ್ಲಿ ಸಿಂಧೂರಿ ಸಾಹಸವನ್ನು ಹೊಗಳಿದ್ದಾರೆ.
ಕಲ್ಯಾಣಪುರದ ಮೌಂಟ್ ರೋಸರಿ ಶಾಲೆಯ ಆರನೇ ತರಗತಿ ವಿದ್ಯಾರ್ಥಿನಿಯಾಗಿರುವ ಸಿಂಧೂರಿ, ಸ್ಕೌಟ್ ಮೂಲಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಅವರು ತಾಯಿಯ ಸ್ಪೂರ್ತಿಯಿಂದ ಎಸೆಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ 15ರಷ್ಟು ಮಾಸ್ಕ್ಗಳನ್ನು ತನ್ನ ಕೈಯ ಅಂಗವೈಕಲ್ಯವನ್ನು ಮೀರಿ ಹೊಲಿದು ನೀಡಿದ್ದಾರೆ. ಅದೇ ಶಾಲೆಯಲ್ಲಿ ಅಟೆಂಡರ್ ಆಗಿರುವ ತಾಯಿ ಆಕೆಯ ಹೊಲಿಗೆಗೆ ಸ್ಪೂರ್ತಿ ಎನ್ನುತ್ತಾರೆ.