‘ಜೂ.24ರಿಂದ ಮಂಗಳೂರು ದಕ್ಕೆಯಲ್ಲಿ ವ್ಯಾಪಾರ ಸ್ಥಗಿತ’
ಅನಧಿಕೃತ ವ್ಯಾಪಾರ ತಡೆಗೆ ಮೀನು ವ್ಯಾಪಾರಸ್ಥರಿಂದ ಡಿಸಿಗೆ ಮನವಿ
ಮಂಗಳೂರು, ಜೂ.23: ಮಂಗಳೂರು ದಕ್ಕೆಯಲ್ಲಿ ವರ್ತಕರು ಸಹಿತ ಹಲವರಿಗೆ ಅನಾರೋಗ್ಯ ಸೋಂಕು ಲಕ್ಷಣ ಕಂಡು ಬರುತ್ತಿದ್ದು, ಇಲ್ಲಿನ ವ್ಯವಹಾರವನ್ನು ಜೂ.24ರಿಂದ ಸ್ಥಗಿತಗೊಳಿಸುವುದಾಗಿ ಮಂಗಳೂರು ದಕ್ಕೆ ಹಸಿ ಮೀನು ವ್ಯಾಪಾರಸ್ಥರು ಮತ್ತು ಕಮಿಷನ್ ಏಜೆಂಟ್ರ ಸಂಘ ತಿಳಿಸಿದೆ.
ಮಂಗಳೂರು ದಕ್ಕೆಯಲ್ಲಿ ಹಲವರಿಗೆ ಜ್ವರ, ನೆಗಡಿ ಶೀತದಂತಹ ಅನಾರೋಗ್ಯ ಸೋಂಕು ಲಕ್ಷಣಗಳು ಕಂಡುಬರುತ್ತಿದೆ. ಇಲ್ಲಿನ ಹಲವರು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ದಕ್ಕೆಯ ಎಲ್ಲ ವ್ಯವಾಹಾರವನ್ನು ಜೂ.24ರಿಂದ ಮುಂದಿನ ಹತ್ತು ದಿನಗಳವರೆಗೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಮಂಗಳೂರು ದಕ್ಕೆ ಹಸಿ ಮೀನು ವ್ಯಾಪಾರಸ್ಥರು ಮತ್ತು ಕಮಿಷನ್ ಏಜೆಂಟ್ರ ಸಂಘದ ಕಾರ್ಯಾಧ್ಯಕ್ಷ ಕೆ.ಅಶ್ರಫ್ ತಿಳಿಸಿದ್ದಾರೆ.
ದಕ್ಕೆಯಲ್ಲಿ ವ್ಯವಹಾರ ಸ್ಥಗಿತಗೊಳಿಸಿದರೂ ಕೆಲವು ವ್ಯವಹಾರಸ್ಥರು ಅನಧಿಕೃತವಾಗಿ ಇತರೆಡೆ ವ್ಯವಹಾರ ಆರಂಭಿಸದಂತೆ ನಿಷೇಧಿಸಬೇಕು. ಮಂಗಳೂರು ಸಮೀಪದ ಉಳ್ಳಾಲ-ಕೋಟೆಪುರ, ಹೊಯ್ಗೆ ಬಝಾರ್, ಬೆಂಗ್ರೆ, ಪರಂಗಿಪೇಟೆ, ವಿ.ಆರ್.ಎಲ್. ಸಮೀಪ, ಕುದ್ರೋಳಿ, ಕಲ್ಲಾಪು, ಮಾರಿಪಲ್ಲ ಸಹಿತ ವಿವಿಧೆಡೆ ಯಾವುದೇ ವರ್ತಕರು ಅನಧಿಕೃತ ಮತ್ಸ ವ್ಯವಹಾರ ನಿಷೇಧಿಸಿ ಆದೇಶ ಹೊರಡಿಸಬೇಕು ಎಂದು ಸಂಘದ ಕಾರ್ಯಾಧ್ಯಕ್ಷ ಕೆ.ಅಶ್ರಫ್ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.