ಮಂದಾರ ಕೇಶವ ಭಟ್ರ ಮನೆ ಉಳಿವಿಗೆ ಕ್ರಮ
ಮಂಗಳೂರು, ಜೂ.24: ತುಳುವಿನ ಮಹಾಕವಿ, ತುಳು ವಾಲ್ಮೀಕಿ ಎಂದೇ ಪ್ರಸಿದ್ಧರಾದ, ತುಳುವಿಗೆ ಆಕರ ಗ್ರಂಥವನ್ನು ನೀಡಿದ ಮಂದಾರ ರಾಮಾಯಣ ಗ್ರಂಥದ ಕರ್ತೃ ಮಂದಾರ ಕೇಶವ ಭಟ್ ಹುಟ್ಟಿ ಬೆಳೆದ ಪಾರಂಪರಿಕ ಮನೆಯು ಶತಮಾನ ಕಂಡು ಇತ್ತೀಚೆಗೆ ಸಂಭವಿಸಿದ ಮಾನವ ನಿರ್ಮಿತ ತ್ಯಾಜ್ಯ ದುರಂತದಲ್ಲಿ ಸಂಪೂರ್ಣ ಹಾನಿಗೀಡಾಗಿದೆ. ನಾಶದ ಅಂಚಿನಲ್ಲಿರುವ ಈ ಮನೆಯ ಉಳಿವಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯು ಪ್ರಯತ್ನಿಸಲಿದೆ ಎಂದು ಅಕಾಡಮಿಯ ಅಧ್ಯಕ್ಷ ದಯಾನಂದ ಜಿ.ಕತ್ತಲ್ಸಾರ್ ತಿಳಿಸಿದ್ದಾರೆ.
ಮಂದಾರರ ಜನ್ಮಶತಮಾನೋತ್ಸವ ಸಂದರ್ಭದಲ್ಲೇ ಈ ದುರಂತ ಸಂಭಸಿರುವುದು ತುಳುನಾಡಿಗೆ ಬಂದಂತಹ ಘೋರ ದುರಂತವಾಗಿದೆ. ಮುಂದಿನ ಪೀಳಿಗೆಗಾಗಿ ಈ ಮಹಾಕವಿಯ ವಾಸ್ತು ವಿನ್ಯಾಸವುಳ್ಳ ಮನೆಯನ್ನು ಉಳಿಸಿ ಸುಂದರ ಸಾಂಸ್ಕೃತಿಕ ವೈಭವವನ್ನು ಎತ್ತಿ ಹಿಡಿದು, ತುಳು ಭಾಷೆ ಹಾಗೂ ಸಂಸ್ಕೃತಿಯ ಅಧ್ಯಯನ ಕೇಂದ್ರವನ್ನಾಗಿ ಮಾಡಬೇಕು, ನಾಡು ಕಂಡಂತಹ ಕೇಂದ್ರ ಭಾಷಾ ಸಮ್ಮಾನ್ ಪುರಸ್ಕಾರವನ್ನು ತುಳುವಿಗೆ ತಂದುಕೊಟ್ಟ, ತುಳು ಸಾಹಿತ್ಯ ಅಕಾಡಮಿಯ ಪ್ರಪ್ರಥಮ ಪ್ರಶಸ್ತಿ ಪುರಸ್ಕೃತ, ರಾಜ್ಯಪ್ರಶಸ್ತಿ ವಿಜೇತ ಮಂದಾರ ಕೇಶವ ಭಟ್ಟರ ನೆನಪು ಅಜರಾಮರವಾಗಿರುವಂತೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದು ದಯಾನಂದ ಕತ್ತಲ್ ಸಾರ್ ತಿಳಿಸಿದ್ದಾರೆ.





