ಸ್ವರ್ಣ ನದಿಯಲ್ಲಿ ಅಕ್ರಮ ಮರಳುಗಾರಿಕೆ ಆರೋಪ : ಉಡುಪಿ ಡಿಸಿ ವಿರುದ್ಧ ಲೋಕಾಯುಕ್ತಕ್ಕೆ ದೂರು
ಉಡುಪಿ, ಜೂ.25: ಉಡುಪಿ ನಗರಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುವ ಸ್ವರ್ಣ ನದಿಯಲ್ಲಿ ಲಾಕ್ಡೌನ್ನ ಮೂರು ತಿಂಗಳಲ್ಲಿ ಅಕ್ರಮವಾಗಿ ಮರಳುಗಾರಿಕೆ ಮೂಲಕ ಕೋಟ್ಯಾಂತರ ರೂ.ಅವ್ಯಹಾರ ನಡೆದಿರುವುದಕ್ಕೆ ಸಂಬಂಧಿಸಿದಂತೆ ಸರಕಾರ ಹಾಗೂ ಜನತೆಗೆ ನಷ್ಟವನ್ನುಂಟು ಮಾಡಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಎಡಿಸಿ ಸಿ. ಸದಾಶಿವ ಪ್ರಭು, ನಗರಸಭೆ ಪೌರಾಯುಕ್ತ ಆನಂದ ಸಿ.ಕಲ್ಲೋಳಿಕರ್ ಸೇರಿದಂತೆ ಹಲವು ಅಧಿಕಾರಿಗಳ ವಿರುದ್ಧ ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ ಎಂದು ನಗರಸಭಾ ಸದಸ್ಯ ರಮೇಶ್ ಕಾಂಚನ್ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ನ ಜಿಲ್ಲಾಧ್ಯಕ್ಷ ವಿಶ್ವಾಸ್ ವಿ.ಅಮೀನ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಜೂ.16ರಂದು ಬೆಂಗಳೂರಿನ ಕರ್ನಾಟಕ ಲೋಕಾಯುಕ್ತ ಕಚೇರಿ ಯಲ್ಲಿ ಲೋಕಾಯುಕ್ತರಾದ ಜಸ್ಟೀಸ್ ಪಿ.ವಿಶ್ವನಾಥ್ ಶೆಟ್ಟಿ ಅವರನ್ನು ಭೇಟಿ ಮಾಡಿ, ಅವರಿಗೆ ಲಿಖಿತ ದೂರನ್ನು ಸಲ್ಲಿಸಿರುವುದಾಗಿ ತಿಳಿಸಿದರು.
ಅಲ್ಲದೇ ಈ ಬಹುಕೋಟಿ ಭ್ರಷ್ಟಾಚಾರದ ಬಗ್ಗೆ ಇನ್ನಷ್ಟು ಮಾಹಿತಿ ಹಾಗೂ ದಾಖಲೆಗಳನ್ನು ಲೋಕಾಯುಕ್ತರಿಗೆ ನೀಡಿದ್ದು, ಮೇಲ್ನೋಟಕ್ಕೆ ಆಕ್ರಮ ನಡೆದಿರುವುದು ಕಂಡುಬಂದಿರುವುದನ್ನು ಮನಗಂಡ ಅವರು, ಈ ಬಗ್ಗೆ ತಕ್ಷಣ ತನಿಖೆಗೆ ಆದೇಶ ನೀಡಿದ್ದಾರೆ. ಅಲ್ಲದೇ ಜಿಲ್ಲಾಧಿಕಾರಿಗಳಿಂದ ವಿವರಣೆಯನ್ನೂ ಕೇಳಿದ್ದಾರೆ ಎಂದು ವಿಶ್ವಾಸ್ ಅಮೀನ್ ನುಡಿದರು. ಇವರೊಂದಿಗೆ ಲೋಕಾಯುಕ್ತ ಎಡಿಜಿಪಿ ಎ.ಎಸ್.ಎನ್.ಮೂರ್ತಿ ಹಾಗೂ ವಿಚಾರಣಾಧಿಕಾರಿ ಅವರನ್ನು ಸಹ ಭೇಟಿಯಾಗಿ ಮಾಹಿತಿ ಮತ್ತು ದಾಖಲೆಗಳನ್ನು ನೀಡಿರುವುದಾಗಿ ತಿಳಿಸಿದರು.
ನಗರಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುವ ಸ್ವರ್ಣ ನದಿಯಲ್ಲಿ ಹೂಳು ತುಂಬಿದ ನೆಪದಲ್ಲಿ ನಗರಸಭೆಯು ಹೂಳೆತ್ತುವ ಬಗ್ಗೆ ಟೆಂಡರ್ ಕರೆದಿದ್ದು, ಇದನ್ನು ಸರಕಾರ ಜ.11ರಂದು ರದ್ದುಗೊಳಿಸಿತ್ತು. ಆದರೆ ಕೆಲ ಸರಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು, ಪ್ರಭಾವಿ ವ್ಯಕ್ತಿಗಳು ಪರಸ್ಪರ ಶಾಮೀಲಾಗಿ ಒಳಸಂಚು ನಡೆಸಿ, ಕೊರೋನ ಲಾಕ್ಡೌನ್ ಸಂದರ್ಭದ ದುರ್ಲಾಭ ಪಡೆಯುವ ಉದ್ದೇಶದಿಂದ ಹಿರಿಯಡ್ಕ ಬಳಿ ಸ್ವರ್ಣ ನದಿಗೆ ನಿರ್ಮಿಸಿರುವ ಬಜೆ ಅಣೆಕಟ್ಟಿನಿಂದ ಮಾಣೆಯವರೆಗೆ ಹಾಗೂ ಮಾಣೆಯಿಂದ ಶಿರೂರಿನವರೆಗೆ ಹೂಳೆತ್ತುವ ನೆಪದಲ್ಲಿ ಮರಳನ್ನು ಅಕ್ರಮವಾಗಿ ತೆಗೆದು ಸರಕಾರ ಹಾಗೂ ಜನತೆಗೆ ವಂಚಿಸಿದ್ದಾರೆ ಎಂದು ರಮೇಶ್ ಕಾಂಚನ್ ಆರೋಪಿಸಿದರು.
ಯಾವುದೇ ಪರವಾನಿಗೆ ಇಲ್ಲಜದೇ ಅಕ್ರಮ ಮರಳುಗಾರಿಕೆ ನಡೆಸಿದ ಅವರು ಕಾನೂನು ಉಲ್ಲಂಘಿಸಿದ್ದಲ್ಲದೇ, ಪೊಯ್ಯಗುಂಡಿ ಮರಳನ್ನು ಅಕ್ರಮವಾಗಿ ತೆಗೆದು ಉಡುಪಿ, ಬೊಮ್ಮರಬೆಟ್ಟು, ಮುಂಡಾಜೆ, ಸಾಲುಮರ, ನೂಜಿ, ಶಿರೂರು ಹಾಗೂ ಇತರ ಪ್ರದೇಶಗಳಲ್ಲಿ ಕಾಡಿನ ಮಧ್ಯೆ ದಾಸ್ತಾನು ಇರಿಸಿ, ಅವುಗಳಲ್ಲಿ ಸಾವಿರಾರು ಲೋಡ್ ಮರಳನ್ನು ಅಕ್ರಮ ಸಾಗಾಟ ನಡೆಸಿ 40 ಕೋಟಿ ರೂ.ಗಳಿಗೂ ಅಧಿಕ ಅವ್ಯವಹಾರ ನಡೆಸಿದ್ದಾರೆ ಎಂದೂ ಅವರು ದೂರಿದರು.
ಈ ಅವ್ಯವಹಾರದ ಕುರಿತು ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಅವರು ಮೌನವಾಗಿರುವುದು ಅವರು ಸಹ ಈ ಅವ್ಯವಹಾರಗಳಲ್ಲಿ ಶಾಮೀಲಾಗಿರುವ ಸಂದೇಹವನ್ನು ಮೂಡಿಸಿದೆ. ಡಿಸಿ, ಎಡಿಸಿ, ಗಣಿ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು, ಉಡುಪಿ ತಹಶೀಲ್ದಾರರು, ಪೌರಾಯುಕ್ತರು, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರು, ಹಿರಿಯಡ್ಕ ಠಾಣೆಯ ಠಾಣಾಧಿಕಾರಿಗಳು ತಮ್ಮ ಕರ್ತವ್ಯ ನಿಭಾಯಿಸುವಲ್ಲಿ ವಿಫಲರಾಗಿ, ಭ್ರಷ್ಟಾಚಾರದಲ್ಲಿ ಕೈಜೋಡಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ರಮೇಶ್ ಕಾಂಚನ್ ನುಡಿದರು.
ದೇಶ ಕೊರೋನ ಲಾಕ್ಡೌನ್ನಲ್ಲಿದ್ದಾಗ, ಉಡುಪಿ ನಗರದ ಜನತೆಗೆ ನೀರು ಪೂರೈಸುವ ನೆಪದಲ್ಲಿ ಸ್ವರ್ಣ ನದಿಯ ಹೂಳೆತ್ತುವ ಕಾಮಗಾರಿಯಲ್ಲಿ ಬಹು ಕೋಟಿ ಹಗರಣ ನಡೆಸಿದ್ದು, ಇಲ್ಲಿ ಸರಕಾರದ ಯಾವುದೇ ನಿಯಮ ಪಾಲನೆ ಯಾಗಿಲ್ಲ ಎಂದು ವಿಶ್ವಾಸ್ ಅಮೀನ್ ಹೇಳಿದರು. ಕಾಮಗಾರಿಯ ಸಂದರ್ಭ ದಲ್ಲಿ ಅಗತ್ಯವಾಗಿ ಇರಲೇಬೇಕಿದ್ದ ಸಿಸಿಟಿವಿ ಹಾಗೂ ಜಿಪಿಎಸ್ನ್ನು ಅಳವಡಿಸಿಲ್ಲ. ಮರಳನ್ನು ತೆಗೆಯಲು ಹಿಟಾಚಿಯನ್ನು ಬಳಸಿದ್ದು ಕಾನೂನಿಗೆ ವ್ಯತಿರಿಕ್ತವಾಗಿದೆ. ಜಿಲ್ಲಾಡಳಿತ ಚೆಕ್ಪೋಸ್ಟ್ಗಳನ್ನು ಅಳವಡಿಸಲು ವಿಫಲವಾಗುವ ಮೂಲಕ ಸಾವಿರಾರು ಲೋಡ್ ಮರಳು ಅಕ್ರಮವಾಗಿ ಕಳ್ಳಸಾಗಾಣಿಕೆಯಾಗುವ ಮೂಲಕ ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂ. ನಷ್ಟವುಂಟಾಗಿದೆ ಎಂದವರು ಆರೋಪಿಸಿದರು.
ಈ ವಿಷಯವನ್ನು ಜಿಲ್ಲಾ ಯುವ ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದ್ದು, ಇದರ ವಿರುದ್ಧ ಮುಂದೆ ತೀವ್ರವಾದ ಪ್ರತಿಭಟನೆಯನ್ನು ನಡೆಸುತ್ತೇವೆ. ಕಾಂಗ್ರೆಸ್ ಪಕ್ಷ ಸಹ ಇದಕ್ಕೆ ಬೆಂಬಲವನ್ನು ನೀಡಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೆ ನಿರಂತರ ಹೋರಾಟ ನಡೆಯಲಿದೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭಾ ಸದಸ್ಯ ವಿಜಯ ಪೂಜಾರಿ, ಕಾಂಗ್ರೆಸ್ ಹಿಂದುಳಿದ ವರ್ಗ ಘಟಕದ ಜಿಲ್ಲಾಧ್ಯಕ್ಷ ಯತೀಶ್ ಕರ್ಕೇರ, ಉಡುಪಿ ವಿಧಾನ ಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಪೂಜಾರಿ ಉಪಸ್ಥಿತರಿದ್ದರು.