ಉಡುಪಿ: ತೈಲಬೆಲೆ ಏರಿಕೆ ವಿರುದ್ಧ ಕೆಆರ್ಎಸ್ ಪಕ್ಷದಿಂದ ಡಿಸಿಗೆ ಮನವಿ
ಉಡುಪಿ, ಜೂ.25: ದೇಶಾದ್ಯಂತ ಕಳೆದ 18 ದಿನಗಳಿಂದ ಸತತವಾಗಿ ಮಾಡಲಾಗುತ್ತಿರುವ ತೈಲ ಬೆಲೆ ಏರಿಕೆ ವಿರೋಧಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಉಡುಪಿ ಜಿಲ್ಲಾ ಘಟಕವು ಗುರುವಾರ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಗೆ ಮನವಿ ಸಲ್ಲಿಸಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ತೀವ್ರವಾಗಿ ಕುಸಿಯುತ್ತಿ ದ್ದರೂ ಭಾರತದಲ್ಲಿ ತೈಲ ಬೆಲೆ ಹೆಚ್ಚಾಗುತ್ತಿದೆ. ಕಳೆದ ಎರಡು ತಿಂಗಳಿನಿಂದ ಲಾಕ್ಡೌನ್ನಿಂದ ಜನರ ಬದುಕು ದುಸ್ತರವಾಗಿರುವಾಗ ಸರಕಾರವು ಜನರ ಕಷ್ಟಗಳಿಗೆ ಸ್ಪಂದಿಸದೆ, ಗಾಯದ ಮೇಲೆ ಬರೆ ಎಳೆದಂತೆ ಏಕಾಏಕಿ ತೈಲಬೆಲೆ ಏರಿಸಿರುವುದು ಅಮಾನವೀಯ ಹಾಗೂ ಖಂಡನೀಯ ಎಂದು ಮನವಿಯಲ್ಲಿ ಟೀಕಿಸಲಾಗಿದೆ.
ಸರಕಾರ ತಕ್ಷಣ ಮಧ್ಯ ಪ್ರವೇಶಿಸಿ ತೈಲ ಬೆಲೆಯನ್ನು ಕೂಡಲೇ ಇಳಿಸಲು ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಜನಸಾಮಾನ್ಯರ ಆಕ್ರೋಶದ ಕಟ್ಟೆ ಒಡೆದು, ಬೀದಿಗೆ ಇಳಿದು ಪ್ರತಿಭಟನೆ ಮಾಡಬೇಕಾಗುತ್ತದೆ. ಆದುದರಿಂದ ಸರಕಾರ ಜನಪರವಾದ ನಿರ್ಧಾರವನ್ನು ತೆಗೆದು ಕೊಳ್ಳಬೇಕು ಎಂದು ಸಮಿತಿ ಮನವಿಯ ಮೂಲಕ ಮುಖ್ಯಮಂತ್ರಿ ಹಾಗೂ ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಅಮೃತ್ ಶೆಣೈ, ಜಿಲ್ಲಾ ಉಪಾಧ್ಯಕ್ಷರುಗಳಾದ ಶಾಹಿದ್ ಅಲಿ, ಪ್ರಸಾದ್ ಕರ್ಕಡ, ಜಿಲ್ಲಾ ಕಾರ್ಯದರ್ಶಿ ವಿನುತಾ ಕಿರಣ್, ಉಡುಪಿ ನಗರ ಅಧ್ಯಕ್ಷ ಯಜ್ಞೇಶ್ ಆಚಾರ್ಯ ಉಪಸ್ಥಿತರಿದ್ದರು.
ಬ್ರಹ್ಮಾವರದಲ್ಲೂ ಮನವಿ: ತೈಲ ಬೆಲೆ ಇಳಿಸುವಂತೆ ಆಗ್ರಹಿಸಿ ಪಕ್ಷದ ಬ್ರಹ್ಮಾವರ ತಾಲೂಕು ಘಟಕದ ವತಿಯಿಂದ ಬ್ರಹ್ಮಾವರ ತಹಶೀಲ್ದಾರ್ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಫೀಕ್ ಕಲ್ಯಾಣ ಪುರ, ಉಡುಪಿ ಗ್ರಾಮಾಂತರ ಅಧ್ಯಕ್ಷ ಅಹ್ಮದ್ ನೇಜಾರ್, ಉಡುಪಿ ತಾಲೂಕು ಕೋಶಾಧಿಕಾರಿ ವಿನೋದ್ ಬಂಗೇರ, ಗ್ರಾಮಾಂತರ ಯುವ ಘಟಕದ ಕಾರ್ಯದರ್ಶಿ ಗೋಪಾಲ ಪೂಜಾರಿ ಉಪಸ್ಥಿತರಿದ್ದರು.