ಉಡುಪಿ: ಬೆಂಗಳೂರಿನಿಂದ ಬಂದ ಮೂವರಲ್ಲಿ ಸೋಂಕು ಪತ್ತೆ
ಜಿಲ್ಲೆಯಲ್ಲಿ 9 ಮಂದಿ ಕೊರೋನ ಪಾಸಿಟಿವ್

ಉಡುಪಿ, ಜೂ.26: ವಿದೇಶಗಳಿಂದ ಆಗಮಿಸಿದ ಇಬ್ಬರು ಹಾಗೂ ಬೆಂಗಳೂರಿನಿಂದ ಊರಿಗೆ ಬಂದ ಮೂವರು ಸೇರಿದಂತೆ ಶುಕ್ರವಾರ ಒಟ್ಟು 9 ಮಂದಿಯಲ್ಲಿ ನೋವೆಲ್ ಕೊರೋನ ವೈರಸ್ನ (ಕೋವಿಡ್-19) ಸೋಂಕು ಪತ್ತೆಯಾಗಿದ್ದು ಎಲ್ಲರನ್ನೂ ಜಿಲ್ಲೆಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಪಾಸಿಟಿವ್ ಬಂದವರಲ್ಲಿ ಮಹಾರಾಷ್ಟ್ರದಿಂದ ಆಗಮಿಸಿದ ಇಬ್ಬರು, ಬೆಂಗಳೂರಿನಿಂದ ಬಂದ ಮೂವರು, ಮಸ್ಕತ್ ಮತ್ತು ಕತರ್ನಿಂದ ಆಗಮಿಸಿದ ತಲಾ ಒಬ್ಬರು, ಕೇರಳದಿಂದ ಬಂದ ಒಬ್ಬರು ಹಾಗೂ ಇನ್ನೂ ಸಂಪರ್ಕದ ಮೂಲ ಪತ್ತೆಯಾಗದ 62ರ ಹರೆಯದ ಉಚ್ಚಿಲದ ವೃದ್ಧರೊಬ್ಬರು ಸೇರಿದ್ದಾರೆ. ಕೆಎಂಸಿಯಿಂದ ನಿನ್ನೆಯಷ್ಟೇ ಡಾ.ಟಿಎಂಎ ಪೈ ಆಸ್ಪತ್ರೆಗೆ ದಾಖಲಾಗಿರುವ ವೃದ್ಧರ ಸ್ಥಿತಿ ಗಂಭೀರವಿದ್ದು, ಅವರಿಗೆ ವೆಂಟಿಲೇಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ.ಸೂಡ ತಿಳಿಸಿದರು.
ಅಲ್ಲದೇ ಬೈಂದೂರು ತಾಲೂಕು ಉಪ್ಪುಂದ ಮೂಲದ ಕೆಎಂಸಿಯ ಸ್ಟಾಫ್ ನರ್ಸ್ ಒಬ್ಬರಲ್ಲಿ ಕೊರೋನ ಸೋಂಕು ಪತ್ತೆಯಾಗಿದ್ದು, ಅವರನ್ನು ಸಹ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಪಾಸಿಟಿವ್ ಬಂದವರಲ್ಲಿ 8 ಮಂದಿ ಪುರುಷರು ಹಾಗೂ ಒಬ್ಬ ಮಹಿಳೆ ಸೇರಿದ್ದಾರೆ.
ಶುಕ್ರವಾರ ಪಾಸಿಟಿವ್ ಬಂದವರಲ್ಲಿ ಆರು ಮಂದಿ ಉಡುಪಿಯವರು, ಇಬ್ಬರು ಕಾರ್ಕಳ ಹಾಗೂ ಒಬ್ಬರು ಕುಂದಾಪುರದವರು. ಬೆಂಗಳೂರಿನಿಂದ ಉಡುಪಿ ಜಿಲ್ಲೆಗೆ ಆಗಮಿಸಿದ 32, 29 ಹಾಗೂ 23 ವರ್ಷ ಪ್ರಾಯದ ಮೂವರು ಯುವಕರಲ್ಲೂ ಸೋಂಕು ಪತ್ತೆಯಾಗಿದೆ.
ಇಂದು ಬಂದ 9 ಪಾಸಿಟಿವ್ಗಳೊಂದಿಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಈಗ 1125ಕ್ಕೇರಿದೆ. ಉಡುಪಿ ಜಿಲ್ಲೆ ಈಗಲೂ ಬೆಂಗಳೂರು ನಗರ (1935) ಹಾಗೂ ಕಲಬುರಗಿ (1331) ಬಳಿಕ ಮೂರನೇ ಸ್ಥಾನದಲ್ಲಿ ಮುಂದುವರಿದಿದೆ. ಯಾದಗಿರಿ 916 ಮತ್ತು ಬಳ್ಳಾರಿ 602 ಕೇಸುಗಳೊಂದಿಗೆ ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ.
17 ಮಂದಿ ಬಿಡುಗಡೆ: ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಿಂದ ಇಂದು ಒಟ್ಟು 17 ಮಂದಿ ಸೋಂಕಿತರು ಗುಣಮುಖರಾಗಿ ಬಿಡುಗಡೆ ಗೊಂಡಿದ್ದಾರೆ. ಇವರಲ್ಲಿ ನಗರದ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯಿಂದ ನಾಲ್ವರು, ಕುಂದಾಪುರ ಸರಕಾರಿ ಆಸ್ಪತ್ರೆಯಿಂದ 11 ಮಂದಿ ಹಾಗೂ ಕಾರ್ಕಳದ ಸರಕಾರಿ ಆಸ್ಪತ್ರೆಯಿಂದ ಇಬ್ಬರು ಬಿಡುಗಡೆಗೊಂಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 1037ಕ್ಕೇರಿದೆ. ಜಿಲ್ಲೆಯಲ್ಲಿ ಈಗ ಕೇವಲ 86 ಮಂದಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಾ.ಸೂಡ ವಿವರಿಸಿದರು.
147 ನೆಗೆಟಿವ್: ಶುಕ್ರವಾರ 147 ಮಂದಿಯ ಗಂಟಲುದ್ರವದ ಮಾದರಿ ನೆಗೆಟಿವ್ ಆಗಿ ಬಂದಿವೆ. ಅಲ್ಲದೇ ಇಂದು ಇನ್ನೂ ಒಟ್ಟು 120 ಮಂದಿಯ ಗಂಟಲುದ್ರವದ ಸ್ಯಾಂಪಲ್ಗಳನ್ನು ಸೋಂಕಿನ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಇದರಲ್ಲಿ ಕೋವಿಡ್ ಶಂಕಿತರು 12, ಕೋವಿಡ್ ಸಂಪರ್ಕಿತರು 43, ಶೀತಜ್ವರದಿಂದ ಬಳಲುವ 15 ಹಾಗೂ ಕೋವಿಡ್ ಹಾಟ್ಸ್ಪಾಟ್ಗಳಿಂದ ಬಂದ 50 ಮಂದಿಯ ಸ್ಯಾಂಪಲ್ಗಳು ಸೇರಿವೆ ಎಂದರು.
ಇದರಿಂದ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 13,960ಕ್ಕೇರಿದೆ. ಇವುಗಳಲ್ಲಿ ಈವರೆಗೆ 12483 ನೆಗೆಟಿವ್, 1125 ಪಾಸಿಟಿವ್ ಆಗಿವೆ. ಇನ್ನು ಒಟ್ಟು 352 ಸ್ಯಾಂಪಲ್ಗಳ ಪರೀಕ್ಷಾ ವರದಿ ಬರಬೇಕಿದೆ. ಗುರುವಾರ 12 ಮಂದಿಯನ್ನು ಐಸೋಲೇಷನ್ ವಾರ್ಡ್ಗೆ ದಾಖಲಿಸಲಾ ಗಿದೆ. ಇವರಲ್ಲಿ ಕೋವಿಡ್ ಸಂಪರ್ಕಿತರು ಒಬ್ಬರು, ಉಸಿರಾಟ ತೊಂದರೆ ಯವರು 6 ಹಾಗೂ ಶೀತಜ್ವದಿಂದ ಬಳಲುವ ಐವರು ಸೇರಿದ್ದಾರೆ.
ಜಿಲ್ಲೆಯ ಆಸ್ಪತ್ರೆಗಳ ಐಸೋಲೇಶನ್ ವಾರ್ಡ್ಗಳಿಂದ ಇಂದು 11 ಮಂದಿ ಬಿಡುಗಡೆಗೊಂಡಿದ್ದು, 69 ಮಂದಿ ಇನ್ನೂ ವೈದ್ಯರ ನಿಗಾದಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ 9 ಮಂದಿ ಸೇರಿದಂತೆ ಒಟ್ಟು 5773 ಮಂದಿಯನ್ನು ಕೊರೋನ ತಪಾಸಣೆಗೆ ಈವರೆಗೆ ನೊಂದಾಯಿಸಿ ಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈಗ 679 ಮಂದಿ ಹೋಮ್ ಕ್ವಾರಂಟೈನ್ನಲ್ಲಿದ್ದಾರೆ ಎಂದು ಡಾ.ಸುಧೀರ್ ಚಂದ್ರ ಸೂಡ ಹೇಳಿದರು.







