ಅಸ್ಸಾಂಗೆ ಕೃಷಿ ನೀರು ಪೂರೈಕೆಗೆ ತಡೆಯೊಡ್ಡಿಲ್ಲ: ಭೂತಾನ್
ಭೂತಾನ್,ಜೂ.25: ಅಸ್ಸಾಂನ ರೈತರಿಗೆ ಕೃಷಿಗೆ ನೀರಾವರಿಯನ್ನು ಪೂರೈಕೆ ಮಾಡುವುದನ್ನು ತಾನು ಸ್ಥಗಿತಗೊಳಿಸಿದ್ದೇನೆಂಬ ಮಾಧ್ಯಮಗಳ ವರದಿಗಳನನ್ನು ಭೂತಾನ್ ಶುಕ್ರವಾರ ತಿರಸ್ಕರಿಸಿದೆ. ಈ ವರದಿಗಳು ಸಂಪೂರ್ಣ ಆಧಾರರಹಿತ ಹಾಗೂ ಭಾರತದೊಂದಿಗೆ ‘ತಪ್ಪು ತಿಳುವಳಿಕೆ’ಯನ್ನು ಮೂಡಿಸಲು ಸ್ಥಾಪಿತ ಹಿತಾಸಕ್ತಿಗಳು ಉದ್ದೇಶಪೂರ್ವಕವಾಗಿ ನಡೆಸಿರುವ ಪ್ರಯತ್ನ ಇದಾಗಿದೆಯೆಂದು ಅವರು ಹೇಳಿದ್ದಾರೆ.
ಈ ಬಗ್ಗೆ ಭೂತಾನ್ ಸರಕಾರದ ವಿದೇಶಾಂಗ ಸಚಿವಾಲಯವು ಶುಕ್ರವಾರ ಹೇಳಿಕೆ ನೀಡಿದ್ದು,ಅಸ್ಸಾಂನ ಬಾಕ್ಸಾ ಹಾಗೂ ಉಡಾಲ್ಗುರಿ ಜಿಲ್ಲೆಗಳಲ್ಲಿರುವ ಭಾರತೀಯ ಕೃಷಿಕರಿಗೆ ನೀರು ಪೂರೈಕೆ ಮಾಡುವ ಜಲಕಾಲುವೆಗಳನ್ನು ಭೂತಾನ್ ತಡೆಗಟ್ಟಿದೆ ಎಂದು ಆರೋಪಿಸಿ, 2020ರ ಜೂನ್ 24ರಿಂದೀಚೆಗೆ ಭಾರತದಲ್ಲಿ ಹಲವು ಸುದ್ದಿಬರಹಗಳು ಪ್ರಕಟವಾಗಿವೆ ಎಂದು ಹೇಳಿದೆ.
‘‘ ಈ ಸುದ್ದಿಲೇಖನಗಳು ಸಂಪೂರ್ಣವಾಗಿ ಆಧಾರರಹಿತ. ಈ ಸಮಯದಲ್ಲಿ ನೀರಿನ ಹರಿವನ್ನು ತಡೆಗಟ್ಟುವುದಕ್ಕೆ ಯಾವುದೇ ಕಾರಣವಿಲ್ಲ’’ ಎಂದು ಈ ಎಂದು ಭೂತಾನ್ನ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ‘‘ಭೂತಾನ್ ಹಾಗೂ ಆಸ್ಸಾಂನ ಸ್ನೇಹಶೀಲ ಜನತೆಯ ನಡುವೆ ತಪ್ಪುತಿಳುವಳಿಕೆನ್ನು ಮೂಡಿಸುವ ಉದ್ದೇಶಪೂರ್ವಕ ಪ್ರಯತ್ನ ಇದಾಗಿದೆಯೆಂದು ಅದು ಹೇಳಿದೆ.